ಸ್ಪೀಕರ್ ಕೆ.ಬಿ.ಕೋಳಿವಾಡ ಪುತ್ರ ಬಿಜೆಪಿಗೆ?
Recommended Video

ಹಾವೇರಿ, ಅಕ್ಟೋಬರ್ 19 : ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಪುತ್ರ ಪ್ರಕಾಶ್ ಕೋಳಿವಾಡ ಬಿಜೆಪಿ ಸೇರಲಿದ್ದಾರೆ?. ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಕಾಶ್ ಕೋಳಿವಾಡ ಅವರು ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಪ್ರಕಾಶ್ ಕೋಳಿವಾಡ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಾವೇರಿಯಲ್ಲಿ ಹಬ್ಬಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವ ಹಾವೇರಿ ಜಿಲ್ಲೆಯಲ್ಲಿ ಕೆಲಸ ಮಾಡಲಿದ್ದು, ಬಿಜೆಪಿ ಅಭ್ಯರ್ಥಿಗಳು ಸುಲಭವಾಗಿ ಜಯಗಳಿಸಲಿದ್ದಾರೆ ಎಂಬುದು ಲೆಕ್ಕಾಚಾರವಾಗಿದೆ.

ಕೆ.ಬಿ.ಕೋಳಿವಾಡ ಅವರು ರಾಣೆಬೆನ್ನೂರು ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ವಿರುದ್ಧ ಗೆಲುವು ಸಾಧಿಸಿದ್ದರು. 2018ರ ಚುನಾವಣೆಗೆ ಅವರು ಸ್ಪರ್ಧಿಸುವುದಿಲ್ಲ. ಅದೇ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಲಿದ್ದಾರೆ. ಪ್ರಕಾಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಪ್ರಕಾಶ್ ಕೋಳಿವಾಡ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿಸಲು ಪಕ್ಷದ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ರಾಣೆಬೆನ್ನೂರು ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹಬ್ಬಿತ್ತು. ಸದ್ಯ, ಕೆ.ಬಿ.ಕೋಳಿವಾಡ ಅವರ ಪುತ್ರ ಬಿಜೆಪಿ ಸೇರುವ ಕುರಿತು ಚರ್ಚೆಗಳ ಆರಂಭವಾಗಿವೆ.
2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ 9,476 ಮತಗಳನ್ನು ಪಡೆದು 5ನೇ ಸ್ಥಾನಕ್ಕೆ ಕುಸಿದಿದ್ದರು. ಕೆಜೆಪಿ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಿಂದಾಗಿ ಮತಗಳು ಹಂಚಿ ಹೋಗಿದ್ದವು. ಈ ಬಾರಿ ಪ್ರಕಾಶ್ ಕೋಳಿವಾಡ ಅವರು ಪಕ್ಷಕ್ಕೆ ಬಂದರೆ ಜಯಗಳಿಸಲು ಬಿಜೆಪಿಯೂ ತಂತ್ರ ರೂಪಿಸುತ್ತಿದೆ.
2013ರ ಫಲಿತಾಂಶ
* ಕೆ.ಬಿ.ಕೋಳಿವಾಡ (ಕಾಂಗ್ರೆಸ್) - 53,780 ಮತಗಳು
* ಆರ್.ಶಂಕರ್ (ಪಕ್ಷೇತರ) - 46,992 ಮತಗಳು
* ಜಿ. ಶಿವಣ್ಣ (ಕೆಜೆಪಿ) - 26,570 ಮತಗಳು












Click it and Unblock the Notifications