Heavy Rain: ಶಿರಸಿಯಲ್ಲಿ ಭಾರೀ ಗಾಳಿ- ಮಳೆ; ಹಾರಿಹೋದ ಮಾರಿಕಾಂಬಾ ಜಾತ್ರಾ ಚಪ್ಪರ
ಶಿರಸಿ, ಮಾರ್ಚ್ 18: ಬಿರು ಬೇಸಿಗೆಯಲ್ಲೂ ಶಿರಸಿಯಲ್ಲಿ ಭಾರೀ ಗುಡುಗು- ಮಳೆಯಾಗಿದ್ದು, ಪರಿಣಾಮ ಶಿರಸಿಯ ಮಾರಿಕಾಂಬಾ ಜಾತ್ರೆ ಪೇಟೆಯಲ್ಲಿ ಅಂಗಡಿಗಳೆಲ್ಲ ಅಸ್ತವ್ಯಸ್ತವಾಗಿದೆ. ಮಳೆಗೂ ಮುನ್ನವೇ ಶುರುವಾದ ಗಾಳಿಯಿಂದಾಗಿ ಗದ್ದುಗೆಯ ಜಾತ್ರಾ ಚಪ್ಪರ ಹಾಗೂ ಸ್ವಾಗತ ಕಮಾನು ಹಾರಿ ಹೋಗಿದೆ.
ಶುಕ್ರವಾರ ಬೆಳಗ್ಗಿನಿಂದ ಬಿರು ಬೇಸಿಗೆಯಿದ್ದ ಶಿರಸಿಯಲ್ಲಿ ಸೆಕೆಗೆ ಜನ ಹೈರಾಣಾಗಿದ್ದರು. ಶಿರಸಿ ಜಾತ್ರೆ ಪೇಟೆಯಲ್ಲೂ ಬಿಸಿಲಿನ ನಡುವೆಯೂ ಜನ ತಿರುಗಾಟ ನಡೆಸುತ್ತಿದ್ದು, ಎಂದಿನಂತೆ ವ್ಯಾಪಾರ- ವಹಿವಾಟು ನಡೆಯುತ್ತಿತ್ತು. ಆದರೆ ಸಂಜೆ 5.30ರ ಸುಮಾರಿಗೆ ಮೋಡ ಕವಿದು ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಪೇಟೆಯಲ್ಲಿದ್ದ ಜನರು ಹಾಗೂ ಅಂಗಡಿಗಳನ್ನಿಟ್ಟುಕೊಂಡಿದ್ದ ವ್ಯಾಪಾರಸ್ಥರು ಗಾಳಿ- ಮಳೆಯಿಂದಾಗಿ ಕಂಗಾಲಾದರು.
ವ್ಯಾಪಾರಸ್ಥರ ಅಂಗಡಿಯಲ್ಲಿದ್ದ ಆಟಿಕೆ, ಬಟ್ಟೆ ಸೇರಿದಂತೆ ಇತರ ಮಾರಾಟದ ವಸ್ತುಗಳಿಗೆ ಟಾರ್ಪಲ್ ಹೊದಿಸಿದ್ದರೂ ಗಾಳಿಗೆ ಹೊದಿಕೆಗಳೆಲ್ಲ ಹಾರಿಹೋಗಿವೆ. ಅಂಗಡಿಗಳಿಗೆಲ್ಲ ನೀರು ನುಗ್ಗಿ ಹಾನಿಯಾಗಿದೆ. ಒಟ್ಟಾರೆ ಜಾತ್ರಾ ಪೇಟೆ ಚೆಲ್ಲಾಪಿಲ್ಲಿಯಾಗಿದೆ.

ಇನ್ನು ಕೋಟೆಕೆರೆಯಲ್ಲಿದ್ದ ತೊಟ್ಟಿಲಿನ ಭಾರಕ್ಕೆ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದ ಕಾರಣ ತೊಟ್ಟಿಗಲುಗಳ ಕೆಲ ಬುಟ್ಟಿಗಳನ್ನು ಮುಂಜಾಗ್ರತಾ ಕ್ರಮವಾಗಿ ಕಳಚಿಡಲಾಯಿತು. ಒಂದರ್ಧ ಗಂಟೆ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ 6.30ರ ನಂತರವೂ ಮುಂದುವರಿದಿದ್ದು, ಜಾತ್ರೆಗೆ ಬಂದಿದ್ದವರೆಲ್ಲ ವಾಪಸ್ಸಾಗುವಂತಾಗಿದೆ. ಕೇವಲ ಶಿರಸಿಯಷ್ಟೇ ಅಲ್ಲದೇ, ಹಳಿಯಾಳ, ಸಿದ್ದಾಪುರದಲ್ಲೂ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೋರು ಗಾಳಿ- ಮಳೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾರೀ ಗಾಳಿ-ಮಳೆಗೆ ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವರ್ಷದ ಮೊದಲ ಮಳೆ ಮಲೆನಾಡಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ. ಭಾರೀ ಗಾಳಿ- ಮಳೆಗೆ ಕಬ್ಬಿಣದ ಶೀಟ್ಗಳು ಹಾರಿ ಹೋಗಿವೆ. ಗಾಳಿಗೆ ತೆಂಗಿನ ಮರದಿಂದ ಸೋಗೆ ಗರಿಗಳು ಮುರಿದು ಬೀಳುತ್ತಿವೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮೇಲಂಗಡಿ ಗ್ರಾಮದಲ್ಲಿ ಭಾರೀ ಗಾಳಿ- ಮಳೆಗೆ ರಾಜಶೇಖರ್ ಎಂಬುವರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಉರುಳಿದ ಬಿದ್ದಿದೆ. ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ.












Click it and Unblock the Notifications