ರೈಲ್ವೆ ನಿಲ್ದಾಣ 'ಎ' ದರ್ಜೆಗೆ, ಯಡಿಯೂರಪ್ಪರಿಂದ ಬಂಪರ್ ಘೋಷಣೆ
ಬೆಂಗಳೂರು, ನವೆಂಬರ್ 06: ಬೆಂಗಳೂರಿಗೆ ಉಪನಗರ ರೈಲು ಮಂಜೂರಾದ ಬೆನ್ನಲ್ಲೇ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಚಾಲನೆ ಸಿಗುತ್ತಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಉಪಸ್ಥಿತಿಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರಪೂರ ಘೋಷಣೆ ಮಾಡಿದ್ದಾರೆ.
"ರಾಜ್ಯದ 20 ರೈಲು ನಿಲ್ದಾಣಗಳನ್ನು ಎ ದರ್ಜೆಗೆ ಏರಿಸಲಾಗುತ್ತಿದ್ದು, ಚಾಲ್ತಿಯಲ್ಲಿರುವ ಹಲವು ರೈಲ್ವೆ ಕಾಮಗಾರಿಗೆ ಅಡ್ಡಿಯಾಗಿದ್ದ ಭೂ ಸ್ವಾದೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ನಿಗದಿತ ಅವಧಿಯಲ್ಲಿ ಯೋಜನೆ ಪೂರೈಸಲು ರೈಲ್ವೆ ಇಲಾಖೆಗೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು" ಎಂದು ಯಡಿಯೂರಪ್ಪ ಹೇಳಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಬಿ.ವೈ.ರಾಘವೇಂದ್ರ, ರೈಲ್ವೆ ಮಂಡಳಿ ಅಧ್ಯಕ್ಷ ವಿನೋದಕುಮಾರ್ ಯಾದವ್ ಉಪಸ್ಥಿತರಿದ್ದರು.

ಸಭೆಯ ಮುಖ್ಯಾಂಶಗಳು:
* ತುಮಕೂರು, ಚಿತ್ರದುರ್ಗ, ದಾವಣಗೆರೆ ರೈಲ್ವೆ ಮಾರ್ಗಕ್ಕೆ ಆದಷ್ಟು ಶೀಘ್ರ ಭೂ ಸ್ವಾಧೀನ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.
* ವೈಟ್ ಫೀಲ್ಡ್ ಹಾಗೂ ಕೋಲಾರ ನಡುವಿನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನ ಅಡ್ಡಿಯಾಗಿದ್ದು, ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.
* ಹುಬ್ಬಳ್ಳಿ- ಹೊಸಪೇಟೆ, ಹೊಸಪೇಟೆ-ಬಳ್ಳಾರಿ ಹಾಗೂ ಧಾರವಾಡ ಇಲ್ಲಿನ ಕಾಮಗಾರಿಗಳಿಗೆ ವೆಚ್ಚ ಹಂಚಿಕೆ, ಹೊಸ 13 ಯೋಜನೆಗಳಿಗೆ 12780.97 ಎಕರೆ ಅರಣ್ಯೇತರ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು
* ಶಿವಮೊಗ್ಗ-ಶಿಕಾರಿಪುರ ಮತ್ತು ರಾಣೇಬೆನ್ನೂರು ಹೊಸ ರೈಲ್ವೆ ಯೋಜನೆಗೆ ಶೀಘ್ರವೇ ಚಾಲನೆ ಸಿಗಲಿದೆ, ಸದ್ಯ ಸಮೀಕ್ಷೆ ಕಾರ್ಯ ಆರಂಭವಾಗಿದೆ.
* ಶಿವಮೊಗ್ಗ-ಶೃಂಗೇರಿ ಮತ್ತು ಮಂಗಳೂರಿನ 227.60 ಕಿ.ಮೀ. ಉದ್ದದ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಸರ್ವೆ ಕಾರ್ಯ ನಡೆದಿದೆ.
* ಚಿಕ್ಕಮಗಳೂರು-ಬೇಲೂರು ಹೊಸ ರೈಲ್ವೆ ಯೋಜನೆಯ ಸರ್ವೆ ಕಾರ್ಯ ಮುಕ್ತಾಯ, ಶೃಂಗೇರಿ ಈ ಮಾರ್ಗ ವಿಸ್ತರಣೆ.
* ಕೋಲಾರದಲ್ಲಿ ರೈಲ್ವೆ ಕೋಚ್ ಪ್ಯಾಕ್ಟರಿ ನಿರ್ಮಾಣ ಮಾಡಲು ತೀರ್ಮಾನ.
* ಬೆಂಗಳೂರು ಕಂಟೋನ್ಮೆಂಟ್, ಬೆಂಗಳೂರು ಸಿಟಿ ಎ-1, ಯಶವಂತಪುರ ಎ-1, ಕಲಬುರಗಿ-ಎ, ರಾಯಚೂರು, ಯಾದಗಿರಿ, ಮಂಗಳೂರು, ಬಂಗಾರಪೇಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಹೊಸಪೇಟೆ, ಹುಬ್ಬಳ್ಳಿ, ಕೆಂಗೇರಿ, ಕೃಷ್ಣಾರಾಜಪುರ, ಮೈಸೂರು, ಶಿವಮೊಗ್ಗ ಟೌನ್ ಒಟ್ಟು 20 ನಿಲ್ದಾಣಗಳು 'ಎ' ದರ್ಜೆಗೇರಲಿವೆ.
* ಬೀದರ್- ನಾಂದೇಡ ರೈಲ್ವೆ ಡಬ್ಲಿಂಗ್ ಕಾರ್ಯ ಪ್ರಗತಿಯಲ್ಲಿದೆ.












Click it and Unblock the Notifications