ಬಂಗಾರಪ್ಪ ತೆಗೆದುಕೊಂಡ ನಿರ್ಧಾರ ಸಿದ್ದುರಿಂದ ಸಾಧ್ಯವೆ?
ಅದು 1991 ಇಸವಿ. ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಾಧೀಕರಣವು ಮಧ್ಯಂತರ-ತೀರ್ಪನ್ನು ನೀಡಿತ್ತು. ಈಗ ಹೇಗೆ ರಾಜ್ಯದಲ್ಲಿ ಆಕ್ರೋಶ ಹೊತ್ತಿ ಉರಿಯುತ್ತಿದೆಯೋ ಅದೇ ಬಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಮತ್ತೆ ಕಾವೇರಿ ವಿವಾದ ಭುಗಿಲೆದ್ದಿದೆ. ಆದರೆ ಈ ಸಂದರ್ಭದಲ್ಲಿ ಕರ್ನಾಟಕ ಕಂಡ ದಿಟ್ಟ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರನ್ನು ನೆನಪು ಮಾಡಿಕೊಳ್ಳಲೇಬೇಕು. ಅವರು ಅಂದು ತೆಗೆದುಕೊಂಡ ಗಟ್ಟಿ ನಿರ್ಧಾರ ಕರ್ನಾಟಕದ ರೈತರಿಗೆ ಶಕ್ತಿ ತುಂಬಿತ್ತು. [ಬೆಂಗಳೂರಿಗರೇ ಎಚ್ಚರ!, ಕುಡಿಯೋಕೆ ಕಾವೇರಿ ನೀರು ಸಿಗಲ್ಲ!]
ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಎಸ್ ಬಂಗಾರಪ್ಪ ದೇಶವೇ ಬೆಚ್ಚಿ ಬೀಳಿಸುವಂತಹ ತೀರ್ಮಾನ ತೆಗೆದುಕೊಂಡಿದ್ದರು. ನ್ಯಾಯಾಧೀಕರಣದ ತೀರ್ಪಿಗೆ ವಿರುದ್ಧವಾಗಿ ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ಜನರಿಗೆ ನೀಡುತ್ತೇನೆ ಎಂದು ಹೇಳಿದರು.[ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತು. ಆಗಲೂ ಸಹ ಜಯಲಲಿತಾ ಅವರೇ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು! ನ್ಯಾಯಾಧೀಕರಣದ ತೀರ್ಪನ್ನು ಪುರಸ್ಕರಿಸಿದ ನ್ಯಾಯಾಲಯ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತು. ರಾಜ್ಯ ಸರ್ಕಾರ ಅನಿವಾರ್ಯವಾಗಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಾಗಿ ಬಂತು.

ಕರ್ನಾಟಕ ಬಂದ್
1991ನೇ ಇಸವಿ ಡಿಸೆಂಬರ್ 13ರ "ಕರ್ನಾಟಕ ಬಂದ್"ಗೆ ಬಾಹ್ಯವಾಗಿಯೆ ಅಂದಿನ ಸರ್ಕಾರವೇ ಬೆಂಬಲ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ನಿರಂತರ ಎರಡು ವಾರಗಳ ಕಾಲ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಾವು ತುಂಬಿತ್ತು.

ಅಪಾರ ಟೀಕೆ
ರಾಷ್ಟ್ರೀಯ ಮಾಧ್ಯಮಗಳಿಂದ ಬಂಗಾರಪ್ಪ ಅವರ ನಡೆ ತೀವ್ರ ಚರ್ಚೆ ಮತ್ತು ಟೀಕೆಗೆ ಗುರಿಯಾಯಿತು. ಇದನ್ನು ಹಲವರು ನ್ಯಾಯಾಂಗ ನಿಂದನೆ ಎಂದು ಸಹ ಕರೆದರು. ಆದರೆ ಬಂಗಾರಪ್ಪ ಯಾವುದಕ್ಕೂ ಕಿವಿ ಕೊಡಲಿಲ್ಲ.

ಹೋರಾಟ ದಾಖಲು
ರಾಜ್ಯದ ಇತಿಹಾಸದಲ್ಲಿ ಈ ಹೋರಾಟ ಕಾವೇರಿ ವಿವಾದ ಭುಗಿಲೆದ್ದಾಗ ಮತ್ತೆ ಮತ್ತೆ ನೆನಪಾಗುತ್ತದೆ. ಅಂತಿಮವಾಗಿ ರಾಜ್ಯ ನೀರು ಬಿಟ್ಟರೂ ಕನ್ನಡಿಗರ ಆಕ್ರೋಶ ಇಡೀ ದೇಶಕ್ಕೆ ಒಮ್ಮೆ ಗೊತ್ತಾಗಿದ್ದು ಸುಳ್ಳಲ್ಲ.

ಈಗ ಸಾಧ್ಯವೇ?
ಸದ್ಯದ ಸರ್ಕಾರ ಬಂಗಾರಪ್ಪನವರಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ. ರೈತರ ಪರ ನಿಲುವು ಪ್ರಕಟ ಮಾಡಲು ಸಿದ್ದರಾಮಯ್ಯ ಇಂಥ ಸಾಹಸಕ್ಕೆ ಕೈ ಹಾಕುತ್ತಾರೆಯೇ?












Click it and Unblock the Notifications