ಲಾಕ್ಡೌನ್ ಸಡಿಲಿಕೆ: ತರ್ಕಕ್ಕೇ ನಿಲುಕದ ಸರಕಾರದ ಮಾರ್ಗಸೂಚಿಗಳು
ನಿರೀಕ್ಷೆಯಂತೆ ಬೆಂಗಳೂರು ನಗರ ಸೇರಿದಂತೆ ಹತ್ತೊಂಬತ್ತು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಹನ್ನೊಂದು ಜಿಲ್ಲೆಗಳಲ್ಲಿ ಇನ್ನೊಂದು ವಾರ ಲಾಕ್ಡೌನ್ ಮುಂದುವರಿಯಲಿದೆ.
ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ ಎರಡರವರೆಗೆ ಸಮಯ ವಿಸ್ತರಿಸಲಾಗಿದೆ. ಇನ್ನು, ಅಂತರ್ ಜಿಲ್ಲಾ ಪ್ರಯಾಣಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಆದರೆ, ಬಸ್ ವ್ಯವಸ್ಥೆಯನ್ನು ಆರಂಭಿಸಲು ಅನುಮತಿಯನ್ನು ನೀಡಲಿಲ್ಲ.
ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಸಂಚಾರಕ್ಕೆ ಅವಕಾಶವಿಲ್ಲ. ಇನ್ನು, ಅಂತರ್ ಜಿಲ್ಲೆ/ರಾಜ್ಯ ಪ್ರಯಾಣಕ್ಕೆ ಕೆಎಸ್ಆರ್ ಟಿಸಿ ಅಥವಾ ಖಾಸಗಿ ಬಸ್ ಸಂಚರಿಸುವುದಿಲ್ಲ. ಆದರೆ, ರೈಲು ಅಥವಾ ವಿಮಾನದ ಮೂಲಕ ಪ್ರಯಾಣಿಸಬಹುದಂತೆ.
ಲಾಕ್ಡೌನ್ ಮುಂದುವರಿಸಲಾಗಿರುವ ಹನ್ನೊಂದು ಜಿಲ್ಲೆಗಳ ಜನರು, ಸಡಿಲಿಕೆ ಮಾಡಲಾಗಿರುವ ಉಳಿದ ಜಿಲ್ಲೆಗಳಿಗೆ ಸ್ವಂತ/ಬಾಡಿಗೆ ವಾಹನಗಳ ಮೂಲಕ ಪ್ರಯಾಣಿಸಬಹುದಾಗಿದೆ. ಇದು, ಕೊರೊನಾ ಚೈನ್ ಬ್ರೇಕ್ ಮಾಡಲು ಯಾವರೀತಿ ಸಹಕಾರಿಯಾಗಲಿದೆ ಎನ್ನುವುದು ಗೊತ್ತಾಗದ ವಿಚಾರ.

ಬಸ್ ಸಂಚಾರ ಆರಂಭಿಸಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಂಚಾರ ಆರಂಭಿಸಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿಯನ್ನು ಮಾಡಿತ್ತು. ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರೂ ಸರಕಾರ ಸದ್ಯದ ಮಟ್ಟಿಗೆ ಬಸ್ ಸಂಚಾರಕ್ಕೆ ಅನುಮತಿಯನ್ನು ನೀಡಲಿಲ್ಲ. ರೈಲು ಮತ್ತು ವಿಮಾನ ಸಂಚಾರವು ಕೇಂದ್ರ ಸರಕಾರದ ನಿರ್ಧಾರಕ್ಕೆ ಬಿಟ್ಟಿದ್ದಾದರೂ, ಸೋಂಕು ಹೆಚ್ಚಾಗುವ ಭೀತಿ ಎದುರಾದರೆ, ಇದಕ್ಕೆ ನಿರ್ಬಂಧ ಹೇರುವ ಅಧಿಕಾರ ರಾಜ್ಯಗಳಿಗಿವೆ.

ರೈಲು ಮತ್ತು ವಿಮಾನ ಸಂಚಾರ, ಯಾವುದೇ ತೊಂದರೆಯಿಲ್ಲದೇ ನಿರಾಂತಕ
ಇನ್ನು, ರೈಲು ಮತ್ತು ವಿಮಾನ ಸಂಚಾರ, ಯಾವುದೇ ತೊಂದರೆಯಿಲ್ಲದೇ ನಿರಾಂತಕವಾಗಿ ಸಾಗುತ್ತಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವವರಿಗೆ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ರೈಲಿನಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ. ಇನ್ನು, ರೈಲಿನಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲಾಗುತ್ತಿದೆಯಾ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆಯಾ ಎನ್ನುವ ಪ್ರಶ್ನೆ ಬಂದಾಗ, ಹೌದು ಎಂದು ಹೇಳುವ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಇಲ್ಲ.

ಬೆಂಗಳೂರಿಗೆ ಜನರು ದೊಡ್ಡ ಮಟ್ಟದಲ್ಲಿ ಬರಲಾರಂಭಿಸಿದ್ದಾರೆ
ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಿರುವುದರಿಂದ, ಬೆಂಗಳೂರಿಗೆ ಜನರು ದೊಡ್ಡ ಮಟ್ಟದಲ್ಲಿ ಬರಲಾರಂಭಿಸಿದ್ದಾರೆ. ಇದರಲ್ಲಿ, ಕೋವಿಡ್ ಹೆಚ್ಚು ಇರುವ ಜಿಲ್ಲೆಗಳ ಜನರೂ ಇದ್ದಾರೆ. ಆರ್ಥಿಕ ಚಟುವಟಿಕೆಗಳು ಆರಂಭವಾಗಬೇಕು ಎನ್ನುವುದು ಒಪ್ಪಿಕೊಳ್ಳುವ ಮಾತು. ಆದರೆ, ನಗರಕ್ಕೆ ವಲಸೆ ಬರುವವರಿಂದ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ.

ಲಾಕ್ಡೌನ್ ಸಡಿಲಿಕೆ: ತರ್ಕಕ್ಕೇ ನಿಲುಕದ ಸರಕಾರದ ಮಾರ್ಗಸೂಚಿಗಳು
ಬಿಎಂಟಿಸಿ, ಮೆಟ್ರೋಗೆ ಅನುಮತಿ ನೀಡದೇ ಇರುವುದರಿಂದ ನೌಕರರು ಅವರವರ ಕೆಲಸದ ಸ್ಥಳಕ್ಕೆ ಹೇಗೆ ಹೋಗುತ್ತಾರೆ? ರೈಲು ಸಂಚಾರಕ್ಕೆ ಅನುಮತಿ ಇರುವಾಗ, ಇದಕ್ಕಿಂತ ಸೇಫ್ ಆಗಿರುವ ಬಸ್ ಸಂಚಾರಕ್ಕೆ ಯಾಕೆ ಅನುಮತಿಯನ್ನು ನೀಡುತ್ತಿಲ್ಲ.. ಹೀಗೆ ಇಂತಹ ಕೆಲವು ಸರಕಾರದ ಮಾರ್ಗಸೂಚಿಗಳು ತರ್ಕಕ್ಕೇ ನಿಲುಕದ್ದು.












Click it and Unblock the Notifications