Trust vote ಚರ್ಚೆ ಶುಕ್ರವಾರಕ್ಕೆ : ಬಿಜೆಪಿಯಿಂದ ಅಹೋರಾತ್ರಿ ಧರಣಿ
ಬೆಂಗಳೂರು, ಜುಲೈ 18 : ಗದ್ದಲ, ಗಲಾಟೆ, ಆರೋಪ, ಪ್ರತ್ಯಾರೋಪ, ಕೂಗಾಟ, ಆಕ್ರೋಶದ ಬಳಿಕ ವಿಶ್ವಾಸಮತಯಾಚನೆ ಚರ್ಚೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಇದನ್ನು ಖಂಡಿಸಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಲಿದೆ.
ಗುರುವಾರ ಬೆಳಗ್ಗೆಯಿಂದ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಸಮತದ ಕುರಿತು ಚರ್ಚೆಗಳು ನಡೆದಿತ್ತು. ಸಂಜೆ 6 ಗಂಟೆ ವೇಳೆಗೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಗದ್ದಲ ಹೆಚ್ಚಾಯಿತು. ಇದರಿಂದಾಗಿ ಕಲಾಪವನ್ನು ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಶುಕ್ರವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.
ಇಂದೇ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದ ಬಿಜೆಪಿಗೆ ಇದರಿಂದಾಗಿ ಭಾರಿ ಹಿನ್ನಡೆ ಉಂಟಾಯಿತು. ಆದ್ದರಿಂದ, ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ ನಮ್ಮ ಶಾಸಕರೆಲ್ಲಾ ಸದನದಲ್ಲೇ ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಘೋಷಣೆ ಮಾಡಿದರು.
ವಿಪ್ ಗೊಂದಲದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿದ ಪ್ರಶ್ನೆ ಬಗ್ಗೆ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರ ಜೊತೆ ಚರ್ಚೆ ನಡೆಸಲು ಸ್ಪೀಕರ್ ರಮೇಶ್ ಕುಮಾರ್ ತೆರಳಿದರು. ಆಗ ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಸದನ ನಡೆಸಲು ಆಗಮಿಸಿದರು.

ಯಡಿಯೂರಪ್ಪ ಹೇಳಿದ್ದೇನು?
ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ, "ಇವತ್ತು 12 ಗಂಟೆವರೆಗೆ ಅವಕಾಶ ಮಾಡಿಕೊಡಿ. ಎಲ್ಲರಿಗೂ ಚರ್ಚೆಗೆ ಅವಕಾಶ ಕೊಡಿ.ಇವತ್ತಿನ ಕಲಾಪ ಇವತ್ತೇ ಮುಗಿಸಿ. ನಾವು ಹನ್ನೆರಡು ಗಂಟೆಯವರೆಗೆ ಕಾಯೋಕೆ ಸಿದ್ಧರಿದ್ದೇವೆ. ಇವತ್ತೇ ಮತಕ್ಕೆ ಹಾಕಲು ಅವಕಾಶ ಕೊಡಿ" ಎಂದು ಮನವಿ ಮಾಡಿದರು.

ಜಗದೀಶ್ ಶೆಟ್ಟರ್ ಹೇಳಿಕೆ
ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಜಗದೀಶ್ ಶೆಟ್ಟರ್, "ನೀವು ಬೇರೆ-ಬೇರೆ ನೆಪಹೇಳಿ ಕಾಲಹರಣ ಮಾಡಬೇಡಿ.ಸರ್ಕಾರ ಪತನವಾಗುವುದು ಅವರಿಗೂ ಗೊತ್ತಿದೆ.ರಾಜ್ಯಪಾಲರು ಸಂದೇಶ ರವಾನಿಸಿದ್ದಾರೆ. ಸಂದೇಶದ ಬಗ್ಗೆ ತಪ್ಪು ಹುಡುಕುವುದು ಬೇಡ.12 ಗಂಟೆಯವರೆಗೆ ಚರ್ಚೆ ನಡೆಯಲಿ.ಚರ್ಚೆ ಮುಗಿದ ಮೇಲೆ ಮತಕ್ಕೆ ಹಾಕಿ" ಎಂದು ಒತ್ತಾಯಿಸಿದರು.

ಕೋಲಾಹಲ ಉಂಟಾಯಿತು
ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗಲಾಟೆ ಜೋರಾಯಿತು. ಡೆಪ್ಯೂಟಿ ಸ್ಪೀಕರ್ ಜೆ. ಕೆ. ಕೃಷ್ಣಾ ರೆಡ್ಡಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಬಳಿಕ ಕಲಾಪ ಆರಂಭವಾದ ಬಳಿಕವೂ ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಶುಕ್ರವಾರ ಬೆಳಗ್ಗೆ 11ಗಂಟೆಗೆ ಮುಂದೂಡಲಾಯಿತು.

ಆಹೋರಾತ್ರಿ ಧರಣಿ ಆರಂಭ
ವಿಧಾನಸಭೆ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದ್ದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಆಹೋರಾತ್ರಿ ಧರಣಿ ಆರಂಭಿಸಿತು. ಇಂದು ವಿಧಾನಸಭೆಯಲ್ಲೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಬಿ. ಎಸ್. ಯಡಿಯೂರಪ್ಪ ಘೋಷಿಸಿದರು.












Click it and Unblock the Notifications