Trekking New Rules: ಇನ್ಮುಂದೆ ಟ್ರೆಕ್ಕಿಂಗ್ ಹೋಗುವವರು ಗಮನಿಸಿ; ಅರಣ್ಯ ಇಲಾಖೆಯಿಂದ ಹೊಸ ರೂಲ್ಸ್ ಜಾರಿ
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣ (ಟ್ರೆಕ್ಕಿಂಗ್) ಕೈಗೊಳ್ಳುವ ಪ್ರವಾಸಿಗರ ಸುರಕ್ಷತೆಗಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಬಿಡುಗಡೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಾರಣದ ವೇಳೆ ಸಂಭವಿಸಿದ ಅನಾಹುತಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇನ್ನು ಮುಂದೆ ಯಾವುದೇ ಚಾರಣಿಗರು ಅಧಿಕೃತ 'ಪ್ರಕೃತಿ ಮಾರ್ಗದರ್ಶಕ' (ನೇಚರ್ ಗೈಡ್) ಇಲ್ಲದೆ ಅರಣ್ಯ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಟ್ರ್ಯಾಕಿಂಗ್ ಆಪ್ ಬಳಕೆ ಕಡ್ಡಾಯ
ಶಿಸ್ತುಬದ್ಧ ಚಾರಣಕ್ಕಾಗಿ ಪ್ರತಿ ಹತ್ತು ಜನ ಚಾರಣಿಗರಿಗೆ ಒಬ್ಬ ಮಾರ್ಗದರ್ಶಕನನ್ನು ನಿಯೋಜಿಸುವುದು ಕಡ್ಡಾಯವಾಗಿದ್ದು, ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಲು ಒಂದು ಬ್ಯಾಚ್ನಲ್ಲಿ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರತಿಯೊಬ್ಬ ಚಾರಣಿಗನ ಮೊಬೈಲ್ನಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಚಾರಣದ ಹಾದಿಯಲ್ಲಿ ಯಾರಾದರೂ ದಾರಿ ತಪ್ಪಿದರೆ ಕೂಡಲೇ ಪತ್ತೆಹಚ್ಚಲು ಅನುವಾಗುವಂತೆ ಮಾರ್ಗದರ್ಶಕರಿಗೆ ಜಿಪಿಎಸ್ ಸೌಲಭ್ಯವಿರುವ ವಾಕಿ-ಟಾಕಿಗಳನ್ನು ನೀಡಲಾಗುವುದು. ಚಾರಣ ಆರಂಭಿಸುವ ಮುನ್ನ ಬೇಸ್ ಕ್ಯಾಂಪ್ನಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಅರಣ್ಯದೊಳಗೆ ಶಬ್ದ ಮಾಡುವ ಸಾಧನಗಳು, ಆಯುಧಗಳು ಮತ್ತು ಪ್ಲಾಸ್ಟಿಕ್ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ, ಪರಿಸರಕ್ಕೆ ಹಾನಿಯಾಗುವ ಕ್ಯಾಂಪ್ ಫೈರ್ನಂತಹ ಚಟುವಟಿಕೆಗಳಿಗೂ ಇಲ್ಲಿ ಅವಕಾಶವಿಲ್ಲ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.
ಚಾರಣದ ವೇಳೆ ಚಾರಣಿಗರ ಸಂಪೂರ್ಣ ಜವಾಬ್ದಾರಿಯನ್ನು ಮಾರ್ಗದರ್ಶಕರೇ ಹೊರಬೇಕಿದ್ದು, ಅವರು ಪ್ರತಿ ಅರ್ಧ ಗಂಟೆಗೊಮ್ಮೆ ಬೇಸ್ ಕ್ಯಾಂಪ್ನೊಂದಿಗೆ ಸಂಪರ್ಕ ಸಾಧಿಸಿ ತಂಡದ ಸ್ಥಿತಿಗತಿಯನ್ನು ವರದಿ ಮಾಡಬೇಕಾಗುತ್ತದೆ. ನಿಯಮದ ಪ್ರಕಾರ, ಅಪ್ರಾಪ್ತ ವಯಸ್ಕರು ಪೋಷಕರ ಅನುಮತಿ ಪತ್ರದೊಂದಿಗೆ ಬರಬೇಕು ಮತ್ತು ಹಿರಿಯ ನಾಗರಿಕರು ತಮ್ಮ ದೈಹಿಕ ಸಾಮರ್ಥ್ಯದ ಪ್ರಮಾಣಪತ್ರವನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ತುರ್ತು ಸಂದರ್ಭಗಳಿಗಾಗಿ ಪ್ರತಿಯೊಂದು ತಂಡವೂ ಪ್ರಥಮ ಚಿಕಿತ್ಸಾ ಕಿಟ್ಗಳನ್ನು ಹೊಂದಿರಲೇಬೇಕು ಎಂದು ಸೂಚಿಸಿದ್ದಾರೆ.
ಅರಣ್ಯ ವಿಹಾರ ಪೋರ್ಟಲ್ನಿಂದ ಬುಕ್ಕಿಂಗ್
ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಅಧಿಕೃತ ಚಾರಣ ಪಥಗಳನ್ನು ಶೀಘ್ರದಲ್ಲೇ 'ಅರಣ್ಯ ವಿಹಾರ' ಪೋರ್ಟಲ್ನಲ್ಲಿ (aranyavihaara.karnataka.gov.in) ಸೇರಿಸಲಾಗುವುದು. ಈ ಮೂಲಕ ಚಾರಣ ಪ್ರಿಯರು ಆನ್ಲೈನ್ನಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಪ್ರಕೃತಿ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದ ಅಧಿಕಾರಿಗಳನ್ನು ಸಚಿವ ಈಶ್ವರ್ ಖಂಡ್ರೆ ಶ್ಲಾಘಿಸಿದ್ದಾರೆ.
ಅರಣ್ಯ ಇಲಾಖೆಯು ಈಗ ಹೊರಡಿಸಿರುವ ಕಟ್ಟುನಿಟ್ಟಿನ ಮಾರ್ಗಸೂಚಿಗಳಿಗೆ ಇತ್ತೀಚಿನ ಸರಣಿ ದುರ್ಘಟನೆಗಳೇ ಮುಖ್ಯ ಕಾರಣ ಎನ್ನಬಹುದು. ಕೊಡಗಿನ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆ ಹೋಗಿದ್ದ ಯುವತಿಯೊ ದಾರಿ ತಪ್ಪಿ ನಾಪತ್ತೆಯಾಗಿದ್ದಳು. ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸತತ ಕಾರ್ಯಾಚರಣೆ ನಡೆಸಿದ ನಂತರ ಪತ್ತೆಯಾಗಿದ್ದರೂ, ದಟ್ಟಾರಣ್ಯದಲ್ಲಿ ದಾರಿ ತಿಳಿಯದೆ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ಘಟನೆಯು ಚಾರಣ ಪಥಗಳಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆ ಮತ್ತು ಮಾರ್ಗದರ್ಶಕರ ಅನಿವಾರ್ಯತೆಯನ್ನು ಎತ್ತಿ ತೋರಿಸಿತ್ತು.
ಚಿಕ್ಕಮಗಳೂರಿನ ದುರಂತ
ಚಿಕ್ಕಮಗಳೂರಿನಲ್ಲಿ ಚಾರಣಕ್ಕೆ ತೆರಳಿದ್ದ ಯುವತಿಯೊಬ್ಬರು ಕಾಲು ಜಾರಿ ಬಿದ್ದು ಅಥವಾ ಅನಾರೋಗ್ಯದ ಕಾರಣದಿಂದ ಸಾವನ್ನಪ್ಪಿದ ಘಟನೆ ಚಾರಣಿಗರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಅಥವಾ ದೈಹಿಕ ಸಾಮರ್ಥ್ಯವನ್ನು ಗಮನಿಸದೆ ಅಪಾಯಕಾರಿ ಹಾದಿಗಳಲ್ಲಿ ಸಾಗುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದಲೇ ಈಗ ಅರಣ್ಯ ಇಲಾಖೆ ಈ ಕ್ರಮಗಳನ್ನು ಕಡ್ಡಾಯಗೊಳಿಸಿದೆ. ಸಾರ್ವಜನಿಕರು ಕೇವಲ ಮೋಜಿನ ದೃಷ್ಟಿಯಿಂದ ಚಾರಣಕ್ಕೆ ಹೋಗದೆ, ಅರಣ್ಯ ಇಲಾಖೆಯ ಈ ನಿಯಮಗಳನ್ನು ಪಾಲಿಸುವುದು ಜೀವ ಉಳಿಸುವ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ.












Click it and Unblock the Notifications