Karnataka Rain: ಮಲೆನಾಡಿಗೆ ತಪ್ಪದ ಮಳೆ ಆರ್ಭಟ, ಮತ್ತೆ ಭಾರೀ ಮಳೆ! ಶಾಲೆಗಳಿಗೆ ರಜೆ ಘೋಷಣೆ?
ಕರ್ನಾಟಕ ರಾಜ್ಯದಲ್ಲಿ ಮಳೆರಾಯನ ಆರ್ಭಟ ತಗ್ಗಿದೆ. ವಾತಾವರಣದಲ್ಲಿ ಉಂಟಾಗಿದ್ದ ವೈಪರೀತ್ಯಗಳ ತೀವ್ರತೆ ಕೊಂಚ ಇಳಿಕೆ ಆಗುತ್ತಿದ್ದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ದರ್ಶನವಾಗಿದೆ. ಮೂರು ವಾರಗಳಿಂದ ಚಳಿ, ಮಬ್ಬು ವಾತಾವರಣ ಕಂಡಿದ್ದ ಜನರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಆದರೆ ಈ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಇನ್ನು ಭಾರೀ ಮಳೆಯ ಪ್ರದೇಶಗಳಲ್ಲಿ ಶಾಲೆಗಳಿಗೆ ದಿನ ರಜೆ ನೀಡುವ ನಿರೀಕ್ಷೆ ಇದೆ.
ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿತ್ತು. ಕರಾವಳಿ ಮೂರು ಜಿಲ್ಲೆಗಳು ಮತ್ತು ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ತಿಂಗಳಿನಿಂದ ಭಾರೀ ಮಳೆ ದಾಖಲಾಗಿದೆ. ಇದರಿಂದ ರಾಜ್ಯದ ಜಲಾಶಯಗಳಲ್ಲಿ ನೀರು ಭರ್ತಿ ಆಗಿದೆ. ಇದರ ಬೆನ್ನಲ್ಲೆ ವೈಪರೀತ್ಯ, ಚಂಡಮಾರುತ ಪ್ರಸರಣೆ ತೀವ್ರತೆ ಕುಂದಿದ ಹಿನ್ನೆಲೆ ರಾಜ್ಯದ ಮಲೆನಾಡಿನ ಮೂರು ಜಿಲ್ಲೆಗಳನ್ನು ಬಿಟ್ಟರೆ ಉಳಿದೆಲ್ಲ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ತುಂತುರು ಮಳೆ ಬರಬಹುದು.

ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ 2 ದಿನ ಭಾರೀ ಮಳೆ ಆಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆ ಹೆಚ್ಚಾದರೆ ಈ ಮೂರು ಜಿಲ್ಲೆಗಳ ಕೆಲವು ತಾಲೂಕುಗಳ ಶಾಲೆಗಳು, ಅಂಗನವಾಡಿಗಳಿಗೆ ಮೂರು ದಿನ ರಜೆ ಘೋಷಣೆ ಆಗುವ ಸಾಧ್ಯತೆ ಇದೆ.
27 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದ ಗುಜರಾತ್ ಭಾಗದಲ್ಲಿ ಸ್ಟ್ರಫ್ ಸೃಷ್ಟಿಯಾಗಿದೆ. ಒಡಿಶಾ, ಮಧ್ಯ ಪ್ರದೇಶ ಭಾಗದಲ್ಲಿ ಚಂಡಮಾರುತ ಪರಿಚಲನೆ ಈಗಾಗಲೇ ಸೃಷ್ಟಿಯಾಗಿದ್ದು, ಅದು ಮತ್ತಷ್ಟು ತೀವ್ರಗೊಂಡರೆ ಮತ್ತೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಭಾರೀ ಮಳೆ ಆಗಬಹುದೆನ್ನಲಾಗಿದೆ. ಆದರೆ ಸದ್ಯಕ್ಕೆ ಭಾರೀ ಮಳೆಯ ಜಿಲ್ಲೆ ಹೊರತುಪಡಿಸಿದರೆ ಕರ್ನಾಟಕದ 27 ಜಿಲ್ಲೆಗಳಿಗೆ ಹಗುರದಿಂದ ಸಾಮಾನ್ಯ ಮಳೆ ಮಾತ್ರವೇ ಆಗುವ ಲಕ್ಷಣಗಳು ಇವೆ. ಉಳಿದಂತೆ ಯಾವುದೇ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಚಳಿ ಮುಂದುವರಿಕೆ
ಇನ್ನೂ ಬೆಂಗಳೂರಿನಲ್ಲಿ ಮುಂದಿನ ಏಳು ದಿನ ಕೊಂಚ ಮಬ್ಬು ವಾತಾವರಣ ಮುಂದುವರಿಯಲಿದೆ. ಅಲ್ಲಲ್ಲಿ ಸಾಮಾನ್ಯ ಮಳೆ ಆಗಬಹುದು. ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ನಗರದಲ್ಲಿ ಭಾರೀ ಮಳೆ ಮುನ್ಸೂಚನೆ ಸದ್ಯಕ್ಕಿಲ್ಲ ಎಂದು ಹವಾಮಾನ ಇಲಾಖೆ ಗುರುವಾರದ ವರದಿ ತಿಳಿಸಿದೆ.












Click it and Unblock the Notifications