ನಾಡಗೀತೆಗೆ ಕತ್ತರಿ ಪ್ರಯೋಗ ವಾಗಲಿದೆಯೇ?
ಬೆಂಗಳೂರು, ನ.10 : ಕರ್ನಾಟಕದಲ್ಲಿ ನಾಡಗೀತೆ ಹಾಡುವ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯಲು ಸರ್ಕಾರ ಮುಂದಾಗಿದೆ. ಕವಿ ಚನ್ನವೀರ ಕಣವಿ ಅವರ ನೇತೃತ್ವದ ಸಮಿತಿ ನೀಡಿರುವ ವರದಿಯ ಅನ್ವಯ ನಾಡಗೀತೆಗೆ ಕತ್ತರಿ ಪ್ರಯೋಗ ಮಾಡಿ, 1 ನಿಮಿಷ 26 ಸೆಕೆಂಡ್ನಲ್ಲಿ ನಾಡಗೀತೆ ಹಾಡಿ ಮುಗಿಸುವ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಹಾಡಲು ಮೂರುವರೆ ನಿಮಿಷಗಳ ಕಾಲಾವಕಾಶ ಬೇಕಾಗಿತ್ತು. ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿದ್ದರೂ, ನಿರ್ದಿಷ್ಟ ಧಾಟಿ ರೂಪಿಸಿ, ಕಾಲಮಿತಿ ನಿಗದಿ ಮಾಡಿರಲಿಲ್ಲ. ಆದ್ದರಿಂದ ಕೆಲವು ಕಡೆ ಐದು ನಿಮಿಷ ಹಾಡಿದ ಉದಾಹರಣೆಗಳಿದ್ದವು. [ರಾಜ್ಯೋತ್ಸವ ಸಂದರ್ಭದಲ್ಲಿ ನಾಡ ಗೀತೆ ಓದಿ, ಕೇಳಿ]

ಆದ್ದರಿಂದ ಸರ್ಕಾರ ಕವಿ ಚನ್ನವೀರ ಕಣವಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ನಾಡಗೀತೆ ಹಾಡುವ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವ ಕುರಿತು ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಸದ್ಯ, ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಕೆಲವು ಸಾಲುಗಳಿಗೆ ಕತ್ತರಿ ಪ್ರಯೋಗ ಮಾಡಿ, 1 ನಿಮಿಷ 26 ಸೆಕೆಂಡ್ಗಳಲ್ಲಿ ಮುಗಿಸಬಹುದು ಎಂದು ಶಿಫಾರಸ್ಸು ಮಾಡಿದೆ.
ಚನ್ನವೀರ ಕಣವಿ ನೇತೃತ್ವದ ಸಮಿತಿಯಲ್ಲಿದ್ದ ಸದಸ್ಯರಾದ ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಮತ್ತು ಗಾಯಕ ವೈ.ಕೆ. ಮುದ್ದುಕೃಷ್ಣ ಎಲ್ಲರೂ ಸೇರಿ ಚರ್ಚಿಸಿ, ನಾಡಗೀತೆ ಮೊಟಕುಗೊಳಿಸುವ ಶಿಫಾರಸ್ಸು ಮಾಡಿದ್ದಾರೆ ಮತ್ತು ಅದನ್ನು ಹಾಡಿರುವ ಸಿಡಿಯನ್ನು ವರದಿಯೊಂದಿಗೆ ನೀಡಿದ್ದಾರೆ.
ಎಷ್ಟು ಕತ್ತರಿ ಪ್ರಯೋಗ : ಒಂದು ಚರಣ ಮತ್ತು ಆರು ಸಾಲುಗಳಿಗೆ ಕತ್ತರಿ ಪ್ರಯೋಗಿಸಲು ಸಮಿತಿ ಶಿಫಾರಸ್ಸು ಮಾಡಿದೆ. ಕತ್ತರಿ ಪ್ರಯೋಗಕ್ಕೆ ಒಳಗಾಗಿರುವ ಹೊಸ ನಾಡಗೀತೆಯ ನೂತನ ಧಾಟಿಯನ್ನು 1 ನಿಮಿಷ 26 ಸೆಕೆಂಡಿನಲ್ಲಿ ಗಾಯಕ ವೈ.ಕೆ. ಮುದ್ದುಕೃಷ್ಣ ಹಾಡಿ, ಸಿಡಿಯನ್ನೂ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಅಂತಿಮ ಒಪ್ಪಿಗೆ ನೀಡಿದರೆ, ಇದು ಜಾರಿಗೆ ಬರಲಿದೆ.












Click it and Unblock the Notifications