Shakti Scheme Effect: ಅಂತರರಾಜ್ಯ ಕೆಎಸ್ಆರ್ಟಿಸಿ ಬಸ್ ಸಂಖ್ಯೆಯಲ್ಲಿ ಕಡಿತ- ಪ್ರಯಾಣಿಕರಿಗೆ ಅನಾನುಕೂಲ
ಮೈಸೂರು, ಆಗಸ್ಟ್ 19: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಅಂತರರಾಜ್ಯ ಬಸ್ಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗಿದೆ ಎಂದು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿ ಬಂದು ಮೂರು ತಿಂಗಳಾಗಿದೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ವ್ಯಾಪಕವಾಗಿ ಏರಿಕೆ ಕಂಡಿದೆ.

ಆದರೆ, ಶಕ್ತಿ ಯೋಜನೆ ಪರಿಣಾಮ, ಅಂತರರಾಜ್ಯ ಕೆಎಸ್ಆರ್ಟಿಸಿ ಬಸ್ಗಳನ್ನು ಕಡಿಮೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನಾನುಕೂಲವಾಗಿದೆ. ಇದು ಪ್ರಯಾಣಿಕರು ಹಾಗೂ ಪ್ರವಾಸಿಗರಿಗೂ ತೊಂದರೆ ಉಂಟು ಮಾಡಿದೆ.
ಗುಡ್ಲುಪೇಟೆಯಿಂದ ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಈ ಹಿಂದೆ 11 ಕೆಎಸ್ಆರ್ಟಿಸಿ ಅಂತರರಾಜ್ಯ ಬಸ್ಗಳು ಸಂಚರಿಸುತ್ತಿದ್ದವು. ಈಗ ಕೇವಲ ಒಂದು ಬಸ್ ಸಂಚರಿಸುತ್ತಿದೆ. ಗುಂಡ್ಲುಪೇಟೆ ಮತ್ತು ಕೋಯಿಕ್ಕೋಡ್ ನಡುವೆ ಸಂಚರಿಸುವ ಎರಡು ಬಸ್ಗಳು, ಗುಂಡ್ಲುಪೇಟೆಯಿಂದ ಊಟಿಗೆ ಎರಡು ಬಸ್ಗಳು ಮತ್ತು ಗುಂಡ್ಲುಪೇಟೆಯಿಂದ ಕೊಯಮತ್ತೂರಿಗೆ ಮೂರು ಬಸ್ಗಳ ಸೇವೆಯನ್ನು ನಿಲ್ಲಿಸಲಾಗಿದೆ.

ಇದಲ್ಲದೇ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡು ಜಿಲ್ಲೆಯ ಕಲ್ಪೆಟ್ಟಾಗೆ ಗುಂಡ್ಲುಪೇಟೆಯಿಂದ ಎರಡು ಬಸ್ಗಳು ಸಂಚರಿಸುತ್ತಿದ್ದವು. ಈಗ ಶಕ್ತಿ ಯೋಜನೆ ಪ್ರಾರಂಭವಾದ ನಂತರ ಒಂದು ಬಸ್ ಅನ್ನು ನಿಲ್ಲಿಸಲಾಗಿದೆ.
ಬಸ್ಗಳ ಸಂಖ್ಯೆಯಲ್ಲಿನ ಕಡಿತವು ಈ ಮಾರ್ಗಗಳಲ್ಲಿ ಸಂಚರಿಸುವ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ. ಅನೇಕರು ಈಗ ಖಾಸಗಿ ಬಸ್ಗಳು, ಕಾರುಗಳು ಮತ್ತು ಸರಕುಗಳ ಟ್ರಕ್ಗಳನ್ನು ಅವಲಂಬಿಸಿದ್ದಾರೆ.

ರಾಜ್ಯದ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸುವ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯು ಯಾವುದೇ ಅಡ್ಡಿಯಿಲ್ಲದೆ ಮುಂದುವರಿಯುತ್ತದೆ ಎಂದು ಸರ್ಕಾರ ತಿಳಿಸಿದ್ದಾರೆ.
ಮಹಿಳೆಯರಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಶಕ್ತಿ ಯೋಜನೆಯು ಜೂನ್ 11 ರಂದು ಪ್ರಾರಂಭವಾದಾಗಿದೆ. ಇದು ಮೊದಲಿನಂತೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
'ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications