ಅಮಿತ್ ಶಾ ಮತ್ತು RSS ಮುಖಂಡರ ಸಭೆಯಲ್ಲಿ ನಡೆದಿದ್ದೇನು?
ರಾಜ್ಯ ಬಿಜೆಪಿ ನಾಯಕರಲ್ಲೂ, ಜಗನ್ನಾಥ ಭವನ ಮತ್ತು ಕೇಶವಕೃಪಾ ಕಚೇರಿಗಳ ನಡುವೆಯೂ ಸಮನ್ವಯತೆಯಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಳಿ ದೂರಿನ ಸುರಿಮಳೆ ಸುರಿಸಿದ್ದಾರೆ.
ಬೆಂಗಳೂರು, ಆ 14: ರಾಜ್ಯ ಬಿಜೆಪಿ ನಾಯಕರಲ್ಲೂ ಸಮನ್ವಯತೆಯಿಲ್ಲ, ಜಗನ್ನಾಥ ಭವನ ಮತ್ತು ಕೇಶವಕೃಪಾ ಕಚೇರಿಗಳ ನಡುವೆಯೂ ಸಮನ್ವಯತೆಯಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಳಿ ದೂರಿನ ಸುರಿಮಳೆ ಸುರಿಸಿದ್ದಾರೆಂದು ವರದಿಯಾಗಿದೆ.
ಯಡಿಯೂರಪ್ಪ ಮತ್ತು ಬಿ ಎಲ್ ಸಂತೋಷ್ ನಡುವಿನ ಮನಸ್ತಾಪದಿಂದ ಬಿಜೆಪಿಯ ಮಾತೃ ಸಂಘಟನೆ ಆರ್ಎಸ್ಎಸ್ ಮತ್ತು ಪಕ್ಷದ ನಡುವೆ ಸಮನ್ವಯತೆಯ ಕೊರತೆಯಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಸಂಘಟನೆಯ ಪ್ರಮುಖರ ಜೊತೆ ಪೂರ್ವ ನಿಗದತ ಸಭೆ ಸೋಮವಾರ (ಆ 14) ಅಮಿತ್ ಶಾ ಜೊತೆ ನಡೆದಿದೆ.
ಬಿಎಸ್ ವೈ ಮೌನವಾಗಿದ್ದಕ್ಕೆ ಹೈಕಮಾಂಡ್ ಗೆ ದೂರು ಕೊಡ್ತಾರಂತೆ
ರಾಜ್ಯದಲ್ಲಿ ಪಕ್ಷದ ಇಂದಿನ ಸ್ಥಿತಿಗತಿ, ಅದಕ್ಕೆ ಕಾರಣರಾರು, ಪಕ್ಷ ಸಂಘಟನೆ, ಮುಂದಿನ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ, ಆರ್ಎಸ್ಎಸ್ ಮುಖಂಡರನ್ನು ಅಮಿತ್ ಶಾ ಭೇಟಿಯಾಗಿದ್ದರು. ಸಿ ಆರ್ ಮುಕುಂದ್, ನಾ. ತಿಪ್ಪೇಸ್ವಾಮಿ, ಶ್ರೀಧರಸ್ವಾಮಿ, ನರಹರಿ ಮುಂತಾದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಮುಖವಾಗಿ ಬಿಜೆಪಿ ತನ್ನ ಹೋರಾಟದ ಕಿಚ್ಚನ್ನು ಇತ್ತೀಚಿನ ದಿನಗಳಲ್ಲಿ ಕಳೆದುಕೊಳ್ಳುತ್ತಿರುವುದು, ಸಂಘಟನೆಯ ಕಾರ್ಯಕರ್ತರು ಕೊಲೆಯಾಗುತ್ತಿದ್ದರೂ ಸರಿಯಾಗಿ ಬಿಜೆಪಿ ಮುಖಂಡರು ಸ್ಪಂಧಿಸದೇ ಇರುವುದಕ್ಕೆ, ಆರ್ಎಸ್ಎಸ್ ಮುಖಂಡರು, ಅಮಿತ್ ಶಾ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಕರ್ನಾಟಕ ಬಿಜೆಪಿಗೆ ಡೈನಾಮಿಕ್ ಲೀಡರ್ ತುರ್ತಾಗಿ ಬೇಕಾಗಿದ್ದಾರೆ
ಕಾಂಗ್ರೆಸ್ ಪಕ್ಷದ ವಿರುದ್ದ ಮುಗಿಬಿದ್ದು ಹೋರಾಟ ನಡೆಸಬೇಕಾದ ನಾಯಕರು ಪರಸ್ಪರ ಕೆಸೆರೆರೆಚಾಡುತ್ತಿರುವುದಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದ ಅಮಿತ್ ಶಾ, ಇದೀಗ ಆರ್ಎಸ್ಎಸ್ ಮುಖಂಡರ ದೂರಿನಿಂದ ರಾ,ಜ್ಯ ಬಿಜೆಪಿ ಪ್ರಮುಖರನ್ನು ದೆಹಲಿಗೆ ಕರೆಸಿ ಮತ್ತೊಂದು ರೌಂಡ್ 'ಕ್ಲಾಸ್' ತೆಗೆದುಕೊಳ್ಳುವ ಸಾಧ್ಯತೆಯಿಲ್ಲದಿಲ್ಲ. ಅಮಿತ್ ಶಾ ಮುಂದೆ ದೂರಿನ ಸುರಿಮಳೆಗೈದರೇ RSS ಮುಖಂಡರು, ಮುಂದೆ ಓದಿ..
ಬಿಜೆಪಿ ಮುಖಂಡರು ಸರಿಯಾದ ಹೋರಾಟ ನಡೆಸಲಿಲ್ಲ
ಕರಾವಳಿ ಭಾಗದಲ್ಲಿ ಸಂಘದ ಕಾರ್ಯಕರ್ತರ ಕೊಲೆ ನಡೆಯುತ್ತಿದ್ದರೂ ಬಿಜೆಪಿ ಮುಖಂಡರು ಸರಿಯಾದ ಹೋರಾಟ ನಡೆಸಲಿಲ್ಲ. ಕೇಂದ್ರ ಗೃಹ ಸಚಿವರಿಗೆ ರಾಜ್ಯ ಬಿಜೆಪಿ ನಾಯಕರು ವರದಿ ಸಲ್ಲಿಸಿದಾಗಲೂ ನಮ್ಮನ್ನು ಸಂಪರ್ಕಿಸಲಿಲ್ಲ. ತಪ್ಪು ವರದಿಯಿಂದ ಬಿಜೆಪಿ ಮತ್ತಷ್ಟು ಮುಜುಗರ ಎದುರಿಸಬೇಕಾಯಿತು ಎಂದು ಬಂಟ್ವಾಳದ ಘಟನೆಯನ್ನು ಸಂಘಟನೆಯ ಪ್ರಮುಖರು ಪ್ರಸ್ತಾವಿಸಿದ್ದಾರೆಂದು ತಿಳಿದು ಬಂದಿದೆ.
ಯಡಿಯೂರಪ್ಪನವರ ಏಕಪಕ್ಷೀಯ ತೀರ್ಮಾನ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಏಕಪಕ್ಷೀಯ ತೀರ್ಮಾನದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ನಡೆದಿದೆ. ಬಿಎಸ್ವೈ ನಿರ್ಧಾರಗಳಿಂದ ಹಲವು ಬಾರಿ ಪಕ್ಷ ಮತ್ತು ಸಂಘಟನೆ ಮುಜುಗರ ಎದುರಿಸಬೇಕಾಯಿತು ಎಂದು ಆರ್ಎಸ್ಎಸ್ ಮುಖಂಡರು ದೂರಿದ್ದಾರೆಂದು ಪಬ್ಲಿಕ್ ಟಿವಿ ವರದಿ ಮಾಡಿದೆ.
ಆರ್ಎಸ್ಎಸ್ ಮುಖಂಡರ ದೂರಿಗೆ ಸಿಟ್ಟಾದ ಅಮಿತ್ ಶಾ
ಆರ್ಎಸ್ಎಸ್ ಮುಖಂಡರ ದೂರಿಗೆ ಸಿಟ್ಟಾದ ಅಮಿತ್ ಶಾ, ಅಲ್ಲೇ ಇದ್ದ ಯಡಿಯೂರಪ್ಪನವರಿಗೆ ಇನ್ನು ಮುಂದೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ, ಪ್ರಮುಖ ವಿಚಾರ/ನಿರ್ಧಾರಗಳಲ್ಲಿ ಸಂಘಟನೆಯ ಪ್ರಮುಖರ ಅಭಿಪ್ರಾಯ/ಸಲಹೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆಂದು ವರದಿಯಾಗಿದೆ.
ರಾಜ್ಯ ಬಿಜೆಪಿ ಘಟಕ್ಕೆ ಸ್ಪಷ್ಟ ಸೂಚನೆ ನೀಡುವಂತೆ ಒತ್ತಾಯ
ಸರಕಾರದ ವಿರುದ್ದ ಪ್ರತೀ ಹೋರಾಟದಲ್ಲೂ ಸಂಘಟನೆಯನ್ನು ಪರಿಗಣಿಸಬೇಕು. ಸಂಘಟನೆಯ ಕಾರ್ಯಕರ್ತರೂ ಹೋರಾಟಕ್ಕೆ ಕೈಜೋಡಿಸಿದರೆ ಹೋರಾಟದ ತೀವ್ರತೆ ಹೆಚ್ಚಾಗುತ್ತದೆ. ಈ ಬಗ್ಗೆ ರಾಜ್ಯ ಬಿಜೆಪಿ ಘಟಕ್ಕೆ ಸ್ಪಷ್ಟ ಸೂಚನೆ ನೀಡುವಂತೆ RSS ಮುಖಂಡರು, ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಮೋದಿ ಮತ್ತು ನನ್ನ ಫೋಟೋದಿಂದ ವೋಟು ಸಿಗುವುದಿಲ್ಲ
ಬರೀ ಮೋದಿ ಮತ್ತು ನನ್ನ ಫೋಟೋ ತೆಗೆದುಕೊಂಡು ಜನರ ಮುಂದೆ ಹೋದರೆ ವೋಟು ಸಿಗುವುದಿಲ್ಲ. ಕೇಂದ್ರ ಸರಕಾರದ ಕೆಲಸವನ್ನು ಜನರಿಗೆ ವಿವರಿಸಿ, ಶಿಸ್ತಿನಿಂದ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಬಿಜೆಪಿ ಹಿರಿಯ ಮುಖಂಡರಿಗೆ ಅಮಿತ್ ಶಾ, ಭಾನುವಾರ (ಆ 13) ಹೇಳಿದ್ದರು.