Karnataka Rains: ಹವಾಮಾನ ವೈಪರೀತ್ಯ, ಮೇ 8ರತನಕ 15 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು: ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆ ಕಾರಣದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಉತ್ತಮ ಮಳೆ ಆಗುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ವಿವಿಧೆಡೆ ಜೋರು ಮಳೆ ಆಗಿದೆ. ನಗರ ಸೇರಿ ರಾಜ್ಯದ ದಕ್ಷಿಣ ಒಳನಾಡಿನ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ 5 ದಿನ ಗುಡುಗು ಸಹಿತ ಜೋರು ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಿಗೆ ವ್ಯಾಪಕ ಮಳೆ ಅಲರ್ಟ್
ಇತ್ತ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಒಣಹವೆ, ಗರಿಷ್ಠ ತಾಪಮಾನವೇ ಮುಂದುವರಿಯಲಿದೆ. ಈ ಭಾಗದ ಜನರು ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಬೆಂಗಳೂರು ನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ವಿಜಯನಗರ ಸೇರಿ ಒಟ್ಟು 15 ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇಂದು ಬೆಂಗಳೂರಿನಲ್ಲಿ 20.5 ಮಿಮೀ ಮಳೆ
ಏಪ್ರಿಲ್ 29ರಂದು ಗಂಟೆಗಳ ಮಳೆ ಸುರಿದು ಅವಾಂತರ ಸೃಷ್ಟಿಯಾಗಿತ್ತು. ಮತ್ತೆ ಇಂದು (ಮೇ 4) ನಸುಕಿನ ಜಾವ ನಗರದ ಅನೇಕ ಕಡೆಗಳಲ್ಲಿ ಮಳೆ ಸಿಂಚನವಾಗಿದೆ. ಹಗದೂರಿನಲ್ಲಿ 20.5 ಮಿಲಿ ಮೀಟರ್, ಮನೋರಾಯನಪಾಳ್ಯದಲ್ಲಿ 15.5 ಮಿಲಿ ಮೀಟರ್, ಕಾಡುಗೋಡಿ 15 ಮಿಲಿ ಮೀಟರ್, ವಿ.ನಾಗೇನಹಳ್ಳಿ 12.5 ಮಿಲಿ ಮೀಟರ್ ಮತ್ತು ಬಸವನಪುರದಲ್ಲಿ 10.5 ಮಿಲಿ ಮೀಟರ್ ಮಳೆ (ಇಂದಿನ ಬೆಳಗ್ಗೆ 8 ಗಂಟೆವರೆಗಿನ ಮಾಹಿತಿ ಪ್ರಕಾರ) ದಾಖಲಾಗಿದೆ. ಉಳಿದಂತೆ ಕೋರಮಂಗಲ, ಎಚ್ಎಸ್ಆರ್, ಯಲಹಂಕ, ಹೆಬ್ಬಾಳ, ಕೆ.ಆರ್ ಪುರಂ ಭಾಗಗಳಲ್ಲಿ ತುಂತುರು ಮಳೆ ಆಯಿತು. ಬೆಳಗ್ಗೆಯಿಂದಲೇ ಅಲ್ಲಲ್ಲಿ ಮಬ್ಬು ವಾತಾವರಣ ಕಂಡು ಬಂತು.
ಈ ಜಿಲ್ಲೆಗಳಲ್ಲಿ ಭಾರೀ ಬಿಸಿಲು
ಅರ್ಧ ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ ಆಗಲಿದ್ದು, ಇನ್ನುಳಿದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಬೆಳಗಾವಿ ಭಾಗದಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇಲ್ಲಿ ಈಗಾಗಲೇ ಇದ್ದಂತೆ ಬಿಸಿಲ ಝಳ, ಸೆಖೆಯು ಮೇ 8ರವರೆಗೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ವೈಪರೀತ್ಯದ ಅಪ್ಡೇಟ್
ಛತ್ತಿಸ್ಗಢದ ಉತ್ತರ ಮತ್ತು ದಕ್ಷಿಣ ಭಾಗದಿಂದ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಾದ್ಯಂತ ಕೊಮೊರಿಯನ್ ಪ್ರದೇಶದಲ್ಲಿ ವಾಯು ಚಂಡಮಾರುತ ಪ್ರಸರಣ ಉಂಟಾಗಿದೆ. ಇದು ಸಮುದ್ರಮಟ್ಟದಿಂದ ಸುಮಾರು 1.5ಕಿಲೋ ಮೀಟರ್ ಎತ್ತರದಲ್ಲಿದೆ. ಇದರ ಪ್ರಭಾವದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತಿ ಮಳೆ ಆಗುತ್ತಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ರಾಜ್ಯದ ಗರಿಷ್ಠ ತಾಪಮಾನದಲ್ಲಿ ಏರಿಕೆ
ಬೀದರ್ ಮತ್ತು ಕೊಪ್ಪಳದಲ್ಲಿ ರಾಜ್ಯದ ಅತೀ ಗರಿಷ್ಠ ತಾಪಮಾನ ತಲಾ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಕಲಬುರಗಿ 42.2 ಡಿಗ್ರಿ ಸೆಲ್ಸಿಯಸ್, ರಾಯಚೂರು 41 ಡಿಗ್ರಿ ಸೆಲ್ಸಿಯಸ್, ವಿಜಯಪುರ 40 ಡಿಗ್ರಿ ಸೆಲ್ಸಿಯಸ್, ಗಂಗಾವತಿಯಲ್ಲಿ 39 ಡಿಗ್ರಿ ಸೆಲ್ಸಿಯಸ್, ಕಾರವಾರದಲ್ಲಿ 36 ಡಿಗ್ರಿ ಸೆಲ್ಸಿಯಸ್, ಹೊನ್ನಾವರದಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕರಾವಳಿ ಹಾಗೂ ಉತ್ತರ ಕರ್ನಾಟದಲ್ಲಿ ತಾಪಮಾನ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.














Click it and Unblock the Notifications