Karnataka Rains: ಕರ್ನಾಟಕದಲ್ಲಿ ಮತ್ತೆ ಉಷ್ಣ ಅಲೆ ಎಚ್ಚರಿಕೆ, ಮಳೆ ಹವಾಮಾನ ಮುನ್ಸೂಚನೆ
ಬೆಂಗಳೂರು, ಮೇ 06: ಕರ್ನಾಟಕದಾದ್ಯಂತ ಆರಂಭದಿಂದಲೂ ಸಕ್ರಿಯವಾಗಿದ್ದ ಪೂರ್ವ ಮುಂಗಾರು ಮಳೆ ಅಬ್ಬರ ಕೊಂಚ ತಗ್ಗಿದೆ. ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಮಳೆ ಆಗುತ್ತಿತ್ತು. ಬೆಂಗಳೂರಿನಲ್ಲೂ ಕಳೆದ ವಾರ ಉತ್ತಮ ಮಳೆ ಆಗಿತ್ತು. ಇದೀಗ ಆ ಮಳೆ ಅಬ್ಬರ ತಗ್ಗಿದ್ದು, ಎಲ್ಲೆಡೆ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂದಿನ ಒಂದು ದಿನ ಮಳೆ ಮುನ್ಸೂಚನೆ ಇತ್ತು. ಆದರೆ ಬದಲಾದ ಹವಾಮಾನ ಗುಣದಿಂದಾಗಿ ಮಳೆ ಮಾರುತಗಳ ಸಕ್ರಿಯವಾಗಿಲ್ಲ. ಬದಲಾಗಿ ಹೆಚ್ಚಿನ ತಾಪಮಾನ ದಾಖಲುವ ಮುನ್ಸೂಚನೆ ಇದೆ. ಮಲೆನಾಡು ಸೇರಿದಂತೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ಆಗಬಹುದು. ಉಳಿದಂತೆ ಒಣ ಹವೆ, ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಈ ಮೂಲಕ ಮುಂದಿನ ಕೆಲವು ದಿನಗಳ ಕಾಲ ಬಿಸಿಲಿನ ಧಗೆ ಎದುರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ, ಕಾರವಾರ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ ಸೇರಿದಂತೆ ಉತ್ತರ ಒಳನಾಡಿನಲ್ಲಿ ವ್ಯಾಪಕ ಬಿಸಿಲಿನ ಧಗೆ ಏರ್ಪಟ್ಟಿದೆ. ಇತ್ತೀಚೆಗೆ ಆಗಾಗ ಮಳೆ ಕಂಡಿದ್ದ ಜನರಿಗೆ ಮತ್ತೆ ತೀವ್ರ ಬಿಸಿಲು ಮೈಸುಡುತ್ತಿದೆ. ಮನೆಯಿಂದ ಹೊರ ಬರದಂತಹ ವಾತಾವರಣ ನಿರ್ಮಾಣವಾಗಿದೆ.
ಇನ್ನೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಬಳ್ಳಾರಿ, ಧಾವಣಗೆರೆ, ಕೋಲಾರ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುವ ಸಂಭವವಿದೆ.
ಮಲೆನಾಡಿನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಸಕಲೇಶಪುರ, ಆಗುಂಬೆ ಭಾಗದಲ್ಲಿ ಆಗಾಗ ಕೊಂಚ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರ ಹೊರತು ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ತೀವ್ರ ಸ್ವರೂಪದ ಮಳೆ ಇಲ್ಲ ಎಂದು ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಗರಿಷ್ಠ ತಾಪಮಾನ ವಿವರ
ರಾಜ್ಯದ ಗರಿಷ್ಠ ತಾಪಮಾನ ನೆನ್ನೆ ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್, ಬೀದರ್ನಲ್ಲಿ 41, ರಾಯಚೂರು, ವಿಜಯಪುರದಲ್ಲಿ ತಲಾ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಹಾವೇರಿ, ಕೊಪ್ಪಳ, ದಾವಣಗೆರೆ, ಬಳ್ಳಾರಿಯಲ್ಲಿ ಹೆಚ್ಚಿನ ಬಿಸಿಲು ದಾಖಲಾಗಿದೆ.












Click it and Unblock the Notifications