Rail Alert: ಕರ್ನಾಟಕದಲ್ಲಿ ಬರೋಬ್ಬರಿ 47˚C ತಾಪಮಾನ: ಈ ವರ್ಷ ಹೇಗಿರಲಿದೆ ಮುಂಗಾರು ಮಳೆ?
ಬೆಂಗಳೂರು, ಮೇ 06: ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ ಬಿಸಿಲಿನ ಆರ್ಭಟ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ರಾಜ್ಯದಲ್ಲಿ ತಾಪಮಾನದಲ್ಲಿ ಇದುವರೆಗೂ ಆಗದಂತಹ ದಾಖಲೆ ಮೇ 6ರಂದು ಆಗಿದೆ.
ಹೌದು, ಕರ್ನಾಟಕದಲ್ಲಿ ಕಳೆದ ಏಳು ವರ್ಷಗಳಲ್ಲೇ ಅತ್ಯಧಿಕ ಗರಿಷ್ಠ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದ ಬಿಸಲಿನ ವಾತಾವರಣ ಸೃಷ್ಟಿಗೆ ಇದು ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMD) ವರದಿ ಮಾಹಿತಿ ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ರಾಜ್ಯ ಹವಾಮಾನ ಕೇಂದ್ರವು, ಮೇ 6ರಂದು ರಾಜ್ಯದಲ್ಲಿ ದಾಖಲಾದ ತಾಪಮಾನವು ಕಳೆದ ಏಳು ವರ್ಷಗಳಲ್ಲೇ ಹೆಚ್ಚು ದಾಖಲಾಗಿದೆ ಎಂದು ನಕ್ಷೆ ಸಹಿತ ವಿವರಿಸಿದೆ.
ಹಿಂದಿನ ಏಳು ವರ್ಷಗಳಲ್ಲಿ ವಾಡಿಕೆಗಿಂತ 2017, 2017 ಮತ್ತು 2020ರಲ್ಲಿ ಅತ್ಯಧಿಕ ಉಷ್ಣಾಂಶ ಕಂಡು ಬಂದಿತ್ತು. ಈ ಮೂರು ವರ್ಷಗಳಿಗಿಂತಲೂ ಹೆಚ್ಚು ಉಷ್ಣಾಂಶ 2024ರಲ್ಲಿ ಕಂಡು ಬಂದಿದೆ. ಈ ಮೂಲಕ ಶಾಖದ ಅಲೆಯನ್ನು ಜನರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಿದೆ.
ಮೂರು ದಿನ ಬಳಿಕ ವ್ಯಾಪಕ ಮಳೆ: ಮುನ್ಸೂಚನೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಒಂದೆರಡು ದಿನ ಇದೇ ರೀತಿ ವಿಪರೀತ ಬಿಸಿಲು ಕಂಡು ಬರಲಿದೆ. ನಂತರ ಮೂರು ದಿನ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ತಜ್ಞ ಡಾ.ಎಸ್.ಎಸ್ ಪಾಟೀಲ್ ಅವರು ಮುನ್ಸೂಚನೆ ನೀಡಿದರು.

ಈ ವರ್ಷ ಮುಂಗಾರು ಮಳೆ ಹೇಗಿರಲಿದೆ?
ಸದ್ಯ ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿದ್ದು, ಜೂನ್ ಮೊದಲ ವಾರದಿಂದ ಮುಂಗಾರು ಮಳೆ (Monsoon Rain) ಆರಂಭವಾಗಲಿದೆ. ಆದರೆ ಈಗಲೇ ಈ ಮುಂಗಾರು ಮಳೆ ಸುರಿಸುವ ಮಾರುತಗಳು ಜೂನ್ ಮೊದಲ ವಾರವೇ ಕೇರಳದಿಂದ ರಾಜ್ಯಕ್ಕೆ ಆಗಮಿಸುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಜೂನ್-ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ಕರ್ನಾಟಕಕ್ಕೆ ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಬರುವ ಸಂಭವವಿದೆ. ಈ ವೇಳೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಭಾರೀ ಮತ್ತು ಉತ್ತಮ ಮಳೆ ಆಗಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ರಾಜಧಾನಿ ಬೆಂಗಳೂರಿನಲ್ಲಿ ಒಂದೆರಡು ಸಹ ಸಾಮಾನ್ಯವಾಗಿ ಮಳೆ ಬಂದಿದ್ದು, ಬಿಟ್ಟರೆ ಹೇಳಿಕೊಳ್ಳುವಂತಹ ಭಾರಿ ಮಳೆ ಇದುವರೆಗೂ ಆಗಿಲ್ಲ. ಮೆ 6ರಂದು ನಗರದಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (KIAL) ನಲ್ಲಿ ದಾಖಲಾಗಿದೆ. ಎಚ್ಎಎಲ್ ಏರ್ಪೋರ್ಟ್ ಮತ್ತು ಬೆಂಗಳೂರು ನಗರದಲ್ಲಿ ತಲಾ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ ಎಂದ KSNDMC ಹೇಳಿದೆ.
ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಕಾಲ ಜೋರು ಮಳೆ ಸಂಭವ ಇದೆ. ದಕ್ಷಿಣ ಒಳನಾಡು ಭಾಗದಲ್ಲಿ ಹೆಚ್ಚು ಮಳೆ ಬರಬಹುದು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications