Karnataka weather alert: ಕಲಬುರಗಿಯಲ್ಲಿ ಅತೀ ಗರಿಷ್ಠ ಉಷ್ಣಾಂಶ: ರಾಜ್ಯದ ಹವಾಮಾನ ಮುನ್ಸೂಚನೆ ಹೀಗಿದೆ
ಬೆಂಗಳೂರು, ಮಾರ್ಚ್ 16: ಕರ್ನಾಟಕ ರಾಜ್ಯದಲ್ಲಿ ಬಿಸಿಲ ಝಳದ ನಡುವೆ, ಮಲೆನಾಡು ಭಾಗದಲ್ಲಿ ಮಳೆಯ ಸಿಂಚನವಾಗಿದೆ. ಇದೀಗ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ಸಹಿತ ಒಣಹವೆ ಮುಂದುವರಿಯಲಿದೆ. ರಾಜ್ಯದ ಅತ್ಯಧಿಕ ಗರಿಷ್ಠ ತಾಪಮಾನ ಕಲಬುರಗಿ ಜಿಲ್ಲೆಯಲ್ಲಿ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆ ಆಗುತ್ತಲೇ ಇದೆ. ರಾಜ್ಯದ ಗರಿಷ್ಠ ತಾಪಮಾನ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮೊನ್ನೆಯಷ್ಟೇ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ವಿವಿಧೆಡೆ ಸಾಧಾರಣ ಮಳೆ ದಾಖಲಾಗಿತ್ತು. ಇಲ್ಲಿ ಮಳೆ ದಾಖಲಾಗುತ್ತಿದ್ದ ಸುತ್ತಮುತ್ತಲಿ ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಕಂಡು ಬಂದಿತ್ತು. ಮರುದಿನದಿಂದ ಮತ್ತೆ ಬಿಸಿಲಿನ ವಾತಾವರಣವೇ ಮುಂದುವರಿದಿದೆ.
ಹೋಳಿ ಹಬ್ಬದ ವೇಳೆ ಮಳೆ ನಿರೀಕ್ಷೆ
ಪ್ರತಿ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಕೆಲವಡೆ ಮಳೆ ಬರುವುದು ವಾಡಿಕೆ ಅದೇ ರೀತಿ ಇದೇ ಮಾರ್ಚ್ 25 ಆಸು ಪಾಸು ದಿನಗಳಲ್ಲಿ ರಾಜ್ಯದ ಒಂದೆರಡು ಕಡೆಗಳಲ್ಲಿ ಲಘು ಇಲ್ಲವೇ ಹಗುರ ಮಳೆ ಆಗುವ ಸಾಧ್ಯತೆ ಇದೆ.
ಉಳಿದಂತೆ ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗಿದೆ. ಆದರೆ ಸದ್ಯಕ್ಕೆ ಮಳೆಯ ವಾತಾವರಣ ಇಲ್ಲ ಎನ್ನಲಾಗಿದೆ. ಇನ್ನೂ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಹಾಸನ, ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ತಾಪಮಾನ ಹೆಚ್ಚಿರಲಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಒಣ ಹವೆ, ಉರಿ ಉರಿ ಬಿಸಿಲು
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಭಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಕಲಬುರಗಿ, ರಾಯಚೂರು, ಬೀದರ್ ಸೇರಿದಂತೆ ಬಹುತೇಕ ಉತ್ತರ ಒಳನಾಡಿನ ಭಾಗದಲ್ಲಿ ಉರಿ ಉರಿ ಬಿಸಿಲು ದಾಖಲಾಗಿದೆ.
ಈಗಾಗಲೇ ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ. ಇದರೊಂದಿಗೆ ಕೊಪ್ಪಳ ಮತ್ತು ರಾಯಚೂರಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್, ಗದಗ, ವಿಜಯಪುರದಲ್ಲಿ ತಲಾ 37ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ಇನ್ನು ಕೆಲವು ವಾರಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications