Rain Alert: ಕರ್ನಾಟಕದ ಇನ್ನರ್ಧ ಭಾಗಕ್ಕೂ ಭಾರೀ ಮಳೆ ಎಚ್ಚರಿಕೆ
ಬೆಂಗಳೂರು, ಮೇ 10: ಕರ್ನಾಟಕದ ಅರ್ಧಭಾಗಕ್ಕೆ ಮಳೆ ಆದರೆ, ಇನ್ನರ್ಧ ಭಾಗದ ಜಿಲ್ಲೆಗಳು ಇನ್ನೂ ಬಿಸಿಲಿನ ಶಾಖದಿಂದ ಹೊರ ಬಂದಿಲ್ಲ. ಬಿಸಿಲಿಗೆ ತತ್ತರಿಸಿರುವ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಸಮಾಧಾನಕರ ಸುದ್ದಿ ನೀಡಿದೆ. ಒಣಹವೆ ಇರುವ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಬಿಸಿಲಿನ ಮಧ್ಯೆ ಮಳೆ ಆರ್ಭಟಿಸಲಿದೆ ಎಂದು ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ಬಿಸಿಲು ಆವರಿಸಿತ್ತು. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಆಗಾಗ ಮಳೆ ಬರುತ್ತಿರುವ ಕಾರಣ ತಾಪಮಾನ, ಬಿಸಿಲ ಝಳ ಇಳಿಕೆ ಆಗಿದೆ. ಆದರೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ವಿಪರೀತ ಶಾಖದ ಅಲೆ ಮುಂದುವರೆದಿದೆ. ಜನರು ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ.

ಮುಂದಿನ ಮೂರು ದಿನ ಧಾರಾಕಾರ ಮಳೆ
ಉತ್ತರ ಕರ್ನಾಟಕ ಹೊರತುಪಡಿಸಿ, ದಕ್ಷಿಣ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ ಬರುತ್ತಿದೆ. ಆದರೆ ವರುಣ ಉತ್ತರ ಕರ್ನಾಟಕದ ಕಡೆಗೆ ಕೃಪೆ ತೋರಿಲ್ಲ. ಸದ್ಯದ ಹವಾಮಾನ ವರದಿ ಪ್ರಕಾರ, ಮುಂದಿನ 03 ದಿನಗಳ ಕಾಲ ಉತ್ತರ ಕರ್ನಾಟಕದಲ್ಲೂ ಅತ್ಯಧಿಕ ಮಳೆಯ ಮುನ್ಸೂಚನೆ ನೀಡಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಬಹತೇಕ ಎಲ್ಲ ಜಿಲ್ಲೆಗಳಲ್ಲಿ ಮೇ 13 ರವರೆಗೆ ಗುಡುಗು ಮಿಂಚು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಇದರ ಜೊತೆ ಜೊತೆಯಲ್ಲಿ ಮಲೆನಾಡು, ಕರಾವಳಿಯ ಮೂರು ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಮುಂದಿನ 48ಗಂಟೆ ಜೋರು ಮಳೆ ಬರಲಿದೆ. ನಂತರದ ಮೂರು ದಿನ ಹಗುರದಿಂದ ಸಾಮಾನ್ಯ ಮಳೆ ಆಗಲಿದೆ.

ಹವಾಮಾನ ಇಲಾಖೆ ಹೀಗೆ ಮಳೆ ಮುನ್ಸೂಚನೆ ನೀಡಿದ್ದರೂ ಸಹಿತ ಉತ್ತರ ಕರ್ನಾಟಕದ ಒಂದಷ್ಟು ಭಾಗದಲ್ಲಿ ಗರಿಷ್ಠ ತಾಪಮಾನದಲ್ಲಿ ಅಷ್ಟಾಗಿ ವ್ಯತ್ಯಾಸ ಕಂಡು ಬಾರದೇ ಶಾಖದ ಅಲೆ, ಒಣಹವೆಯ ವಾತಾವರಣ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಭಾರಿ ಮಳೆ ಸಂಭವ
ಇನ್ನೂ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ದಿನ ಬಿಟ್ಟು ದಿನ ಸಂಜೆ ನಂತರ ಉತ್ತಮ ಮಳೆ ಆಗುತ್ತಿದೆ. ನಗರಾದ್ಯಂತ ಮಳೆಯಾರ್ಭಟಕ್ಕೆ ಮರಗಳು ಧರೆಗುರುಳಿದರೆ, ಪ್ರಮುಖ ವೃತ್ತ, ರಸ್ತೆ ಜಂಕ್ಷನ್, ರಸ್ತೆ ಅಂಡರ್ಪಾಸ್ಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಸಂಜೆ ನಂತರ ಮನೆ ಸೇರುವ ಉದ್ಯೋಗಿಗಳಿಗೆ ಮಳೆಯಿಂದ ಕಿರಿ ಕಿರಿ ಉಂಟಾಗುತ್ತಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂದಿನ ಮೇ 12ವರೆಗೆ ವ್ಯಾಪಕ ಮಳೆ ಬರಲಿದೆ. ಜೋರು ಗಾಳಿ ಬೀಸಲಿದೆ. ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಮಳೆಯ ಕಾರಣಕ್ಕೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ ಆಗಿ, ತಂಪು ವಾತಾವರಣ ಕಂಡು ಬಂದಿದೆ.
ಭಾರೀ ಮಳೆಗೆ ಕಾರಣ ತಿಳಿಸಿದೆ ಐಎಂಡಿ
ಸಮುದ್ರ ಮೇಲ್ಮೈನಲ್ಲಿ ಟ್ರಫ್/ಗಾಳಿ ಸ್ಥಗಿತವು ಮರಾಠವಾಡದಿಂದ ಕೊಮೊರಿನ್ ಪ್ರದೇಶದವರೆಗೆ ಒಳನಾಡಿನ ಮತ್ತು ಕೇರಳದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ನಲ್ಲಿದೆ. ಇದರೊಂದಿಗೆ ದಕ್ಷಿಣ ಕೇರಳ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಕೇರಳ ಕರಾವಳಿಯಿಂದ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದಲ್ಲಿದೆ. ಈ ವೈಪರಿತ್ಯಗಳ ಪ್ರಭಾವದಿಂದ ಇಂಇದನಿಂದ ಮೂರು ದಿನ ಕರ್ನಾಟಕದಲ್ಲಿ ಭಾರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.












Click it and Unblock the Notifications