ಜಲಾಶಯದ ನೀರಿನ ಮಟ್ಟ : ಕೆಆರ್ಎಸ್ನಲ್ಲಿ 2 ಅಡಿ ನೀರು ಕುಸಿತ
ಬೆಂಗಳೂರು, ಸೆಪ್ಟೆಂಬರ್ 18 : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದ್ದು, ರಾಜ್ಯದಲ್ಲಿ ಇನ್ನೂ 4 ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ವಿರಾಜಪೇಟೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಭಾನುವಾರ ಮುಂಜಾನೆಯಿಂದಲೇ ಮಳೆ ಸುರಿದಿದೆ. ನಗರದಲ್ಲಿ ದಿನವಿಡಿ 9.43 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹೇಳಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಗರದಲ್ಲಿ ಇದುವರೆಗೂ 363.6 ಮಿ.ಮೀ. ಮಳೆಯಾಗಿದೆ.

'ವಾಯುಭಾರ ಕುಸಿತದಿಂದಾಗಿ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸತತ ಎರಡು ವರ್ಷಗಳ ಕಾಲ ಮಳೆ ಕೊರತೆ ಎದುರಿಸಿದ್ದ ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಜೂನ್ನಿಂದ ಸೆಪ್ಟೆಂಬರ್ 15ರ ತನಕ ರಾಜ್ಯದಲ್ಲಿ 663 ಮಿ.ಮೀ ಮಳೆಯಾಗಿದೆ. ಶೇ 11ರಷ್ಟು ಮಾತ್ರ ಮಳೆಯ ಕೊರತೆ ಉಂಟಾಗಿದೆ. 2015ರಲ್ಲಿ ಶೇ 20, 2016ರಲ್ಲಿ ಶೇ 16ರಷ್ಟು ಮಳೆಯ ಕೊರತೆ ಉಂಟಾಗಿತ್ತು.
ಹಿಂದಿನ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿದೆ. ಇಲ್ಲಿಯ ತನಕ 347 ಮಿ.ಮೀ. ಮಳೆ ಸುರಿದಿದೆ. ವಾಡಿಕೆಗಿಂತ ಶೇ 27ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 58ರಷ್ಟು, ಸೆಪ್ಟೆಂಬರ್ನಲ್ಲಿ ಶೇ 161 ರಷ್ಟು ಹೆಚ್ಚು ಮಳೆಯಾಗಿದೆ.
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1795.35 |
| ಸುಪಾ | 1849.92 | 1792.68 |
| ವಾರಾಹಿ | 1949.50 | 1923.46 |
| ಹಾರಂಗಿ | 2859.00 | 2856.64 |
| ಹೇಮಾವತಿ | 2922.00 | 2887.75 |
| ಕೆಆರ್ಎಸ್ | 124.80 | 102.78 |
| ಕಬಿನಿ | 2284.00 | 2279.03 |
| ಭದ್ರಾ | 2158.00 | 2137.16 |
| ತುಂಗಭದ್ರಾ | 1633.00 | 1624.91 |
| ಘಟಪ್ರಭಾ | 2175.00 | 2156.28 |
| ಮಲಪ್ರಭಾ | 2079.50 | 2056.00 |
| ಆಲಮಟ್ಟಿ | 1704.81 | 1704.80 |
| ನಾರಾಯಣಪುರ | 1615.00 | 1614.45 |












Click it and Unblock the Notifications