ಶುರುವಾಗದ ಮೌಲ್ಯಮಾಪನ: ವಿದ್ಯಾರ್ಥಿಗಳ ಭವಿಷ್ಯ ಅಯೋಮಯ
ಬೆಂಗಳೂರು, ಏಪ್ರಿಲ್, 15: ವೇತನ ತಾರಮ್ಯ ನಿವಾರಣೆಗೆ ಆಗ್ರಹಿಸಿ ಪಿಯು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ 14ನೇ ದಿನಕ್ಕೆ ಕಾಲಿರಿಸಿದೆ. 50ಕ್ಕೂ ಹೆಚ್ಚು ಉಪನ್ಯಾಸಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಅಂತೂ ಪಿಯು ಪರೀಕ್ಷೆ ನಡೆಸುವಲ್ಲಿ ಪಾಸ್ ಆದ ಸರ್ಕಾರಕ್ಕೆ ಈಗ ಉಪನ್ಯಾಸಕರ ಪರೀಕ್ಷೆ ಎದುರಾಗಿದೆ. 4 ಸಾರಿ ನಡೆದ ಸಂಧಾನ ಸಭೆಯೂ ವಿಫಲವಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಾಳ ಛಾಯೆ ಆವರಿಸುತ್ತಿದೆ.[ಉಪನ್ಯಾಸಕರ ಪ್ರತಿಭಟನೆ: ಎಂಎಲ್ಸಿಗಳ ಮೇಲೆ ತೂರಿಬಂದ ಚಪ್ಪಲಿ]
ನಿಗದಿಯಂತೆ ಶುಕ್ರವಾರ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಹುಬ್ಬಳ್ಳಿ ದಾವಣಗೆರೆ, ಶಿವಮೊಗ್ಗ , ಬೆಂಗಳೂರು ಸೇರಿದಂತೆ ರಾಜ್ಯದ 48 ಕೇಂದ್ರ ಗಳಲ್ಲಿ ಮೌಲ್ಯಮಾಪನ ಆರಂಭವಾಗಿಲ್ಲ. ಖಾಸಗಿ ಉಪನ್ಯಾಸಕರು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ಮೌಲ್ಯಮಾಪನಕ್ಕೆ ಆಗಮಿಸಿಲ್ಲ.
ಉಪನ್ಯಾಸಕರ ಬೇಡಿಕೆಯೇನು?
ವೇತನ ತಾರತಮ್ಯ ಮೊದಲು ನಿವಾರಣೆ ಮಾಡಿ. ನೀಡುತ್ತಿರುವ 22 ಸಾವಿರ ರು. ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ವೇತನ ಏರಿಕೆ ಮಾಡಲೇಬಬೇಕು ಎಂದು ಉಪನ್ಯಾಸಕರು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.
ಕುಮಾರ್ ನಾಯಕ್ ವರದಿ ಜಾರಿ
ಪ.ಪೂ.ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ಜಿ.ಕುಮಾರನಾಯಕ್ ವರದಿ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು. ಈ ಸಾಲಿನ ಬಜೇಟ್ ನಲ್ಲಿ ರಾಜ್ಯ ಸರ್ಕಾರ ವರದಿ ಬಗ್ಗೆ ಚಕಾರವನ್ನು ಎತ್ತದೆ ಅನ್ಯಾಯ ಮಾಡಿದೆ ಎಂದು ಉಪನ್ಯಾಸಕರು ಆರೋಪಿಸಿದ್ದಾರೆ.
ಮಾತುಕತೆ ವಿಫಲ
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಉಪನ್ಯಾಸಕರೊಂದಿಗೆ ಸತತ ನಾಲ್ಕು ಸಾರಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಖಾಸಗಿ ಉಪನ್ಯಾಸಕರು ಸರ್ಕಾರದ ಮಾತು ಕೇಳದಿರುವುದು ಸಮಸ್ಯೆ ಮತ್ತಷ್ಟು ಬಿಡಯಾಸಲು ಕಾರಣವಾಗಿಗಿದೆ.
ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯಲ್ಲ
ಮೌಲ್ಯಮಾಪನದಲ್ಲಿ ಖಾಸಗಿ ಉಪನ್ಯಾಸಕರು ಭಾಗವಹಿಸುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಫುರ್ಲೆ ಹೇಳಿದ್ದಾರೆ.
ಸಿಎಂಗೆ ದೇವೇಗೌಡರ ಪತ್ರ
ಪ್ರತಿಭಟನೆಯಿಂದಾಗಿ ಉಪನ್ಯಾಸಕರು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಮಾನವೀಯತೆ ದೃಷ್ಟಿಯಿಂದಲಾದರೂ ಉಪನ್ಯಾಸಕರ ಬೇಡಿಕೆ ಈಡೇರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.