KSRTC: 'ಶಕ್ತಿ' ಯೋಜನೆಯಿಂದ ಲಾಭ ಎಂದು ಪುಂಗುವವರು ಈಗೇನು ಹೇಳ್ತಾರೆ: ಬಿಜೆಪಿ
ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದೆ. ಇದರಿಂದ ರಾಜ್ಯ ಸಾರಿಗೆ ಇಲಾಖೆ ದಿವಾಳಿಯಾಗಿದೆ. 'ಶಕ್ತಿ ಯೋಜನೆ'ಯಿಂದ ಲಾಭವಾಗಿದೆ ಎಂದು ಪುಂಗುವ ಸಚಿವ ರಾಮಲಿಂಗಾ ರೆಡ್ಡಿಯವರೇ ಯೋಜನೆ ಬಾಕಿ ಹಣ ಉಳಿಸಿಕೊಂಡಿದ್ದೇಕೆ ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿಯು, ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಸರ್ಕಾರ 'ಶಕ್ತಿ' ಯೋಜನೆಯಿಂದ ಸಾರಿಗೆ ಇಲಾಖೆ ಶಕ್ತಿಹೀನವಾಗಿದೆ. KSRTC, BMTC, NWKRTC ಮತ್ತು KKRTC ಸಾರಿಗೆ ಮುಂದೆ ಚಲಿಸದಷ್ಟು ನಷ್ಟಕ್ಕೆ ಒಳಗಾಗಿವೆ.

ಸಾರಿಗೆ ಸಿಬ್ಬಂಧಿಗೆ ಬಾಕಿ ವೇತನ, ತುಟ್ಟಿಭತ್ಯೆ ಬಾಕಿ, ರಜೆ ನಗದೀಕರಣ ಹಾಗೂ ಪಿಎಫ್ ನೀಡುವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿಯು ಲೇವಡಿ ಮಾಡಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮೇಲೆ ಬಿಜೆಪಿ ತೀಕ್ಷ್ಣ ವಾಗ್ದಾಳಿ ನಡೆಸಿತು. 'ಶಕ್ತಿ' ಯೋಜನೆಯಿಂದಾಗಿ ಲಾಭವಾಗಿದೆಯೆಂದು ಪುಂಗುವ ಸಚಿವ ರಾಮಲಿಂಗಾ ರೆಡ್ಡಿಯವರೇ ಇಲಾಖೆ ಲಾಭದಲ್ಲಿದ್ದರೆ ಸಾರಿಗೆ ಸಂಸ್ಥೆಗಳ ಒಟ್ಟು ನಷ್ಟ 7,625 ಕೋಟಿ ರೂ. ತುಂಬಿಕೊಟ್ಟಿಲ್ಲ ಯಾಕೆ?. ಶಕ್ತಿ ಯೋಜನೆಯ ಬಾಕಿ ಹಣ 1542 ಕೋಟಿ ರೂ. ಉಳಿಸಿಕೊಂಡಿದ್ದು ಯಾಕೆ? ಇಲಾಖೆ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ, ತುಟ್ಟಿಭತ್ಯೆ, ವೇತನ ಹೆಚ್ಚಳದ ಬಾಕಿ ಪಾವತಿಸದಷ್ಟು ಹೀನಾಯ ಸ್ಥಿತಿಗೆ ತಲುಪಿದ್ದು ಯಾಕೆ? ಎಂದು ಬಿಜೆಪಿ ಸಾಲು ಸಾಲು ಪ್ರಶ್ನೆಗಳನ್ನು ಸಚಿವರ ಮುಂದಿಟ್ಟಿದೆ.
ಸಿಎಂ ಕುರ್ಚಿ ದಂಗಲ್
ಇದೇ ರೀತಿ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ರಾಜ್ಯದ ಸರ್ಕಾರದಲ್ಲಿ ಸಿಎಂ ಕುರ್ಚಿಯ ದಂಗಲ್ ದಿನ ದಿನಕ್ಕೆ ಜಾಸ್ತಿಯಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸ್ವ ಪಕ್ಷದಲ್ಲಿಯೇ ಸ್ವಾತಂತ್ರ್ಯವಿಲ್ಲ. ಅವರ ಸಿಎಂ ಆಗುವ ಹಗಲುಕನಸಿನ ಆಸೆಗೆ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಸಚಿವರ ಮೂಲಕ ತಣ್ಣೀರು ಎರಚಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ದುರ್ಬಲ ಕೆಪಿಸಿಸಿ ಅಧ್ಯಕ್ಷ ಎಂದಿರುವ ಬಿಜೆಪಿಯು, ಅವರಿಗೆ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಲೆಳೆದಿದೆ.
ಡಿಸಿಕೆ ಸಿಎಂ ಆಗಲು ವಲಸೆ ಸಿಎಂ ಬಿಡಲ್ಲ: ಬಿಜೆಪಿ
ಅಧಿಕಾರದ ಮೂಲಕ ತಮ್ಮ ಸ್ವ ಕುಟುಂಬದ "ಕಲ್ಯಾಣ" ಮಾಡಿಕೊಂಡ ಸಿದ್ದರಾಮಯ್ಯ ಅವರು ಕೋರ್ಟ್ ಛೀಮಾರಿ ಹಾಕಿದರೂ ಕುರ್ಚಿಯಿಂದ ಏಳಲೂ ಸಿದ್ಧವಿಲ್ಲ!. ಪಕ್ಷ ಕಟ್ಟಿದ ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಮನ್ನಣೆ ನೀಡುತ್ತಿಲ್ಲ. ಡಿಕೆಶಿ ಅವರದ್ದು ಈಗ ತಿರುಕನ ಕನಸಾಗಿದೆ. ಅವರ ತಾಯಿ ಗೌರಮ್ಮ ಹೇಳಿದ ಭವಿಷ್ಯ ನಿಜವಾಗುತ್ತಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಡಿ.ಕೆ. ಶಿವಕುಮಾರ್ ಕುಳಿತುಕೊಳ್ಳಲು ವಲಸೆ ನಾಯಕ ಸಿಎಂ ಸಿದ್ದರಾಮಯ್ಯ ಯಾವಾಗಲೂ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಸದ್ಯವಿರುವ ಕಾಂಗ್ರೆಸ್ ವರ್ಸೆಸ್ ಕಾಂಗ್ರೆಸ್ ಕಿತ್ತಾಟ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಮಾರಕವಾಗುವುದು ಖಚಿತ-ನಿಶ್ಚಿತ-ಖಂಡಿತ ಎಂದು ಬಿಜೆಪಿ ಭವಿಷ್ಯ ನುಡಿದಿದೆ.












Click it and Unblock the Notifications