ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸೂತ್ರ ನೀಡಿದ ಕರ್ನಾಟಕ
ಮೇಕೆ ದಾಟುವಿನಲ್ಲಿ ಕಟ್ಟಲಾಗುವ ಅಣೆಕಟ್ಟಿನಿಂದ ತಮಿಳುನಾಡಿಗೆ ಮಾಸಗಳ ಲೆಕ್ಕಾಚಾರದಲ್ಲಿ ನೀರು ಬಿಡಲು ಸಹಾಯವಾಗುವುದೆಂಬುದು ಕರ್ನಾಟಕದ ಲೆಕ್ಕಾಚಾರ.
ಬೆಂಗಳೂರು, ಫೆಬ್ರವರಿ 21: ದಶಕಗಳಿಂದಲೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವಿವಾದ ಎಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಶಾಶ್ವತ ಪರಿಹಾರದ ಸೂತ್ರವನ್ನು ಕರ್ನಾಟಕ ನೀಡಿದೆ. ಆದರೆ,ಇದನ್ನು ತಮಿಳುನಾಡು ಒಪ್ಪಬೇಕಷ್ಟೇ.
ಈಗಾಗಲೇ ಕರ್ನಾಟಕ ಸರ್ಕಾರವು ಮೇಕೆ ದಾಟುವಿನಲ್ಲಿ ಅಣೆಕಟ್ಟೊಂದನ್ನು ನಿರ್ಮಿಸಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಕರ್ನಾಟಕದ ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಇದಾಗಲೇ ಹಳೆಯ ವಿಚಾರ.
ಆದರೆ, ಅಲ್ಲಿ ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಮಾಸಗಳ ಲೆಕ್ಕಾಚಾರದಲ್ಲಿ ನೀರು ಬಿಡಲು ಸಾಧ್ಯವಾಗುತ್ತದೆ. ತಿಂಗಳ ಲೆಕ್ಕದಲ್ಲಿ ನೀರು ಬಿಡಲು ಈಗಾಗಲೇ ಕಾವೇರಿ ನ್ಯಾಯಾಧೀಕರಣವು ಸೂಚಿಸಿರುವುದನ್ನು ಪಾಲಿಸಲೂ ಅನುಕೂಲವಾಗುತ್ತದೆ.
ಅಲ್ಲದೆ, ಮೇಕೆ ದಾಟುವಿನಲ್ಲಿ ಕಟ್ಟಲಾಗುವ ಅಣೆಕಟ್ಟು 65 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, ಕೃಷ್ಣ ಸಾಗರ ಅಣೆಕಟ್ಟಿಗಿಂತಲೂ ಹೆಚ್ಚಿನ (45 ಟಿಎಂಸಿ) ದೊಡ್ಡದಾಗಿರಲಿದೆ. ಸುಮಾರು 6 ಸಾವಿರ ಕೋಟಿ ವೆಚ್ಛದಲ್ಲಿ, 5 ಸಾವಿರ ಎಕರೆ ಭೂಭಾಗವನ್ನು ಆಕ್ರಮಿಸಿಕೊಳ್ಳುವ ಈ ಅಣೆಕಟ್ಟು ನಿರ್ಮಿಸಿದರೆ ಇದು ಭವಿಷ್ಯದಲ್ಲಿ ಉತ್ತಮವಾಗಿ ಮಳೆಯಾದ ವರ್ಷದಲ್ಲಿ ತಮಿಳುನಾಡಿಗೆ ನೀರು ಬಿಡಲು ಯಾವುದೇ ತಕರಾರು ಇರದು ಎಂದು ಕರ್ನಾಟಕ ಹೇಳಿದೆ.
ಆದರೆ, ತಮಿಳುನಾಡು ಒಪ್ಪಿದರೆ ಮಾತ್ರ ಈ ಯೋಜನೆ ಸಾಧ್ಯವಾಗಲಿದೆ.