BS Yediyurappa: ಮಾಜಿ ಸಿಎಂ V/S ಮಾಜಿ ಸಿಎಂ: ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ: ಬಿ ಎಸ್ ಯಡಿಯೂರಪ್ಪ
ಶಿವಮೊಗ್ಗ,ಏಪ್ರಿಲ್24: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣೆಗೆ ರಾಜಕೀಯ ಪಕ್ಷಗಳಿಂದ ಭರ್ಜರಿ ತಯಾರಿ ನಡೆಸುತ್ತಿದ್ದು, ಲಿಂಗಾಯತ ಸಮುದಾಯದ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಈ ಕುರಿತು ಸೋಮವಾರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಧ್ಯಮಗಳ ಜೊತೆಗೆ ಮಾತನಾಡಿ, ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯಗೆ ಶೋಭೆ ತರಲ್ಲ. ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ಕೊಡುತ್ತಿದ್ದಾರೆ. ಸಿದ್ಧರಾಮಯ್ಯ ಹೇಳಿಕೆ ಖಂಡಿಸುತ್ತೇನೆ. ಇನ್ನೂ ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡಬೇಕು. ಚುನಾವಣೆ ಬರುತ್ತೆ ಹೋಗುತ್ತೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಶಿವಮೊಗ್ಗದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ.ಬೇರೆ ಬೇರೆ ರೀತಿಯ ಸಮಾಜದ ಸಭೆ ಮಾಡ್ತಿದ್ದೇವೆ, ಹಿಂದುಳಿದ ವರ್ಗದ ಎಲ್ಲಾ ಸಮಾಜ ಬೆಂಬಲ ಕೊಡುತ್ತಿವೆ. ನಮ್ಮ ಸಮಾಜ ಎಲ್ಲಾ ಕಡೆ ಬೆಂಬಲ ಕೊಡುತ್ತಿದ್ದೇವೆ. ಶಿವಮೊಗ್ಗ ನಮಗೆ ಪ್ರತಿಷ್ಠೆ ಕಣ, ಗೆದ್ದೆ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಪರವಾಗಿ ವಾತಾವರಣ ಚೆನ್ನಾಗಿದೆ. ಅಮಿತ್ ಶಾ ಮೋದಿ ಪ್ರವಾಸಕ್ಕೆ ಬರುತ್ತಾರೆ, ನಮಗೆ 125-130 ಸ್ಥಾನ ಬರುತ್ತದೆ. ರಾಜ್ಯದಲ್ಲಿ ನಾವು ಸರಕಾರ ರಚನೆ ಮಾಡ್ತೇವೆ. ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಆಗುತ್ತದೆ, ಆ ರೀತಿ ನಾವು ತಂತ್ರ ಮಾಡುತ್ತಿದ್ದೇವೆ. ಜನ ಈ ಬಾರಿ ರಾಜ್ಯಾದಾದ್ಯಂತ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿ ಎಸ್ ಸಂತೋಷ್ ಅವರ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಮಾತನಾಡಿ, ಬಿ ಎಸ್ ಸಂತೋಷ್ ನಮ್ಮ ಹಿರಿಯ ಮುಖಂಡರು. ಬಿಜೆಪಿ ಮುತ್ಸದಿ, ನಮ್ಮ ನಾಯಕರು, ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲ್ಲ. ಅವರ ಬಗ್ಗೆ ಟೀಕೆ ಮಾಡಲು ಯೋಗ್ಯತೆ ಇಲ್ಲ. ಸಂತೋಷ್ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿಗೆ ತಲೆ ತಿರುಗಿದೆ. ವೀರಶೈವರ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತಿದೆ, ಬಸವಣ್ಣನವರ ತತ್ವ ಸಿದ್ದಾಂತ ಏನು ಗೊತ್ತಿದೆ. ಈಗ ವೀರಶೈವರ ಬಗ್ಗೆ ಏನೋ ತಿಳಿದವರ ರೀತಿ ಮಾತನಾಡುತ್ತಿದ್ದಾರೆ. ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ. ಇದು ಎಲ್ಲಾ ನಡೆಯುವುದಿಲ್ಲ, ಕಾಂಗ್ರೆಸ್ ನವರು ಏನೋ ಹೇಳಬೇಕು ಹೇಳ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಸಹ ಸೋಲುತ್ತಾರೆ. ರಾಜ್ಯಕ್ಕೆ ಅಮಿತ್ ಶಾ ಎಂಟ್ರಿಕೊಟ್ಟಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಕೂಡ ಬರುತ್ತಾರೆ ಎಂದು ತಿಳಿಸಿದರು.
ಇನ್ನೂ ಕೆ ಎಸ್ ಈಶ್ವರಪ್ಪ ಮಾತನಾಡಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಹೇಗೆ ಚುನಾವಣೆ ಗೆಲ್ಲಬೇಕು ಅಂತಾ ಚರ್ಚೆ ಮಾಡಿದ್ದೇವೆ,ಭದ್ರಾವತಿಯಲ್ಲಿ ಸ್ವಲ್ಪ ವೀಕ್ ಇದೆ ಅಲ್ಲಿಯೂ ಗೆಲ್ಲಲ್ಲು ಪ್ರಯತ್ನ ಮಾಡುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ 7 ಕ್ಕೆ 7 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರ ನೂರಕ್ಕೆ ನೂರು ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ಕಾರ್ಯಕರ್ತರು ಇಲ್ಲ, ಹೀಗಾಗಿ ಅವರ ಸಂಬಂಧಿಕರು ಹೊರಗಡೆಯಿಂದ 8-10 ಕಾರಿನಲ್ಲಿ ಬಂದಿದ್ದಾರೆ. ಅವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ನವರ ತಂಡ ಬಂದಿದೆ ಅಂತಾ ಯಾರೋ ಮಾಹಿತಿ ನೀಡಿದ್ದಾರೆ. ಅವರಿಗೆ ಕಾರ್ಯಕರ್ತರೇ ಇಲ್ಲ. ಹೀಗಾಗಿ ಹೊರಗಡೆಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಕಾಲಿಟ್ಟು ಹೋದ್ರೆ ಸಾಕು ನಾವು ಗೆದ್ದಾಯ್ತು. 46 ಸಾವಿರ ಅಂತರದಲ್ಲಿ ಕಳೆದ ಬಾರಿ ಗೆದ್ದಿದ್ದು ಈ ಬಾರಿ 60 ಸಾವಿರ ಅಂತರದಲ್ಲಿ ಗೆಲ್ಲಲ್ಲು ಸಹಕಾರಿ ಆಗುತ್ತದೆ. ಅವರು ಬಂದು ಹೋದ್ರೆ ನಾವು ಹೆಚ್ಚಿನ ಅಂತರದಲ್ಲಿ ಗೆಲ್ಲಲ್ಲು ಸಹಕಾರಿಯಾಗುತ್ತದೆ. ರಾಹುಲ್ ಗಾಂಧಿ ರಾಹು ಇದ್ದಾಗೆ ಅಂತಾ ಅವರ ಒಂದು ಗುಂಪೇ ಹೇಳುತ್ತಿದೆ. ಸಿದ್ದರಾಮಯ್ಯ ವರುಣಾದಲ್ಲಿ ಗೆಲ್ಲುವುದಿಲ್ಲ. ಮುಖ್ಯಮಂತ್ರಿ ಆಗಲ್ಲ ಎನ್ನುವುದು ಗೊತ್ತಿದೆ.












Click it and Unblock the Notifications