ರಾಜ್ಯ ರಾಜಕಾರಣಕ್ಕೆ ವಾಮಾಚಾರ ಕಳಂಕ ತಾಗಿದ್ದು ಹೇಗೆ?
ಬೆಂಗಳೂರು, ಫೆ. 18: ಕರ್ನಾಟಕದ ರಾಜಕೀಯಕ್ಕೆ ಮತ್ತೊಮ್ಮೆ ವಾಮಾಚಾರದ ಕಳಂಕ ತಗುಲಿದೆ. ರೇಸ್ ಕೋರ್ಸ್ ರಸ್ತೆಯ ಜೆಡಿಎಸ್ (ಈಗ ಕಾಂಗ್ರೆಸ್) ಕಚೇರಿ ವಿವಾದ ಈ ಕಳಂಕಕ್ಕೆ ಕಾರಣ. ಕಚೇರಿ ಜಾಗ ಕಾಂಗ್ರೆಸ್ ಗೆ ಸೇರಿದ್ದು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಜೆಡಿಎಸ್ ಕಚೇರಿ ತೆರವು ಮಾಡಿತ್ತು.
ಜೆಡಿಎಸ್ ಕಚೇರಿ ತೆರವು ಮಾಡಿದ ನಂತರ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದರು. ಈ ಸಂದರ್ಭ ಕಚೇರಿ ಆವರಣದಲ್ಲಿ ವಾಮಾಚಾರಕ್ಕೆ ಬಳಸುವಂಥ ಕೆಲ ವಸ್ತುಗಳು ಕಂಡುಬಂದಿದ್ದವು. ಕೆಂಪು ಬಟ್ಟೆಯಲ್ಲಿ ಸುತ್ತಿದ ವಸ್ತುಗಳು ಕಂಡು ಬಂದ ಬಗ್ಗೆ ಮಾಧ್ಯಮಗಳಲ್ಲಿ ಸಹ ವರದಿಯಾಗಿತ್ತು.[ವಾಮಾಚಾರ ಮಾಡಿಲ್ಲ, ಮಾಟ ಮಂತ್ರ ಗೊತ್ತಿಲ್ಲ: ದೇವೇಗೌಡ]

ಜೆಡಿಎಸ್ ಮುಖಂಡರು ವಾಮಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಪಕ್ಷಗಳ ನಡುವಿನ ರಾಜಕೀಯ ಗುದ್ದಾಟ ವಾಮಾಚಾರ ನಡೆದಿದೆ ಎಂಬ ಹಂತಕ್ಕೆ ಬಂದು ನಿಂತಿದ್ದು ಮಾತ್ರ ವಿಪರ್ಯಾಸ.
ಮತ್ತೊಮ್ಮೆ ವಾಮಾಚಾರ
ಕಾಂಗ್ರೆಸ್ ನಾಯಕರು ಕಚೇರಿ ಪ್ರವೇಶ ಮಾಡಿದ ವೇಳೆ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಕಂಡು ಹೆದರಿದ್ದರು. ರೇಷ್ಮೆ ವಸ್ತ್ರ, ನಿಂಬೆಕಾಯಿ, ಕುಂಕುಮ ಮತ್ತು ಹಸಿ ಮೆಣಸಿನಕಾಯಿ ಕಂಡುಬಂದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟದಾಗಲಿ ಎಂದು ಜೆಡಿಎಸ್ ಮುಖಂಡರು ಇಂಥ ಕೃತ್ಯ ಮಾಡಿಸಿದ್ದಾರೆ. ಜೆಡಿಎಸ್ ನಾಯಕ ಎಚ್. ಡಿ.ದೇವೇಗೌಡರಿಗೆ ವಾಮಾಚಾರದಲ್ಲಿ ನಂಬಿಕೆಯಿದೆ. ಅವರೇ ಉದನ್ನು ಮಾಡಿಸಿದ್ದಾರೆ ಎಂದು ಕಾಂಗ್ರಸ್ ನಾಯಕರು ಆರೋಪಿಸಿದ್ದರು.[ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೆಗೌಡರು]
ವಾಮಾಚಾರದ ವಸ್ತುಳನ್ನು ಕಂಡು ಕಾಂಗ್ರೆಸ್ ನಾಯಕರು ಕಚೇರಿ ಪ್ರವೇಶ ಮಾಡಲು ನಿರಾಕರಿಸಿದ್ದರು. ಮತ್ತೊಬ್ಬ ಮಂತ್ರವಾದಿಯ ಮೂಲಕ ವಾಮಾಚಾರವನ್ನು ತೆಗಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಬಟ್ಟೆಯಲ್ಲಿ ಸುತ್ತಿಟ್ಟ ವಸ್ತುಗಳನ್ನು ಮುಟ್ಟಲು ಎಲ್ಲರೂ ಹಿಂಜರಿದಿದ್ದರು. ಮೊದಲು ಕಚೇರಿ ಮತ್ತು ಸುತ್ತಮುತ್ತಲ ಆವರಣ ಸ್ವಚ್ಛಮಾಡಿ ಆಡಳಿತಕ್ಕೆ ತೆಗೆದುಕೊಳ್ಳಬೇಕು. ಇಂಥ ನಂಬಿಕೆಗಳು ಒಮ್ಮೊಮ್ಮೆ ಕೆಟ್ಟದನ್ನು ಉಂಟುಮಾಡಿದ ದಾಖಲೆಗಳಿವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
ಜೆಡಿಎಸ್ ಮೇಲೆ ಇದು 2ನೇ ಆರೋಪ
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಜೆಡಿಎಸ್ ವಿಧಾನಸೌಧದ ಸುತ್ತ ವಾಮಾಚಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ವಾಮಾಚಾರದ ಮೂಲಕ ನನ್ನನ್ನು ಸಾಯಿಸಲು ಯತ್ನಿಸಲಾಗಿದೆ ಎಂದು ಮಾಜಿ ಸಿಎಂ ಬಿಎಸ್ ವೈ ಗಂಭೀರ ಆರೋಪ ಮಾಡಿದ್ದರು. ಇದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವಿನ ಮಾತಿನ ಸಮರಕ್ಕೂ ಕಾರಣವಾಗಿತ್ತು.












Click it and Unblock the Notifications