ಬಿಎಸ್ವೈ ಬಹುಮತ ಸಾಬೀತಾಗುವವರೆಗೂ ಅತೃಪ್ತರು ಬರೊಲ್ಲ?
ಬೆಂಗಳೂರು, ಜುಲೈ 24: ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವವರೆಗೂ ಅತೃಪ್ತ ಶಾಸಕರನ್ನು ಹೊರರಾಜ್ಯದಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ನ 12 ಅತೃಪ್ತ ಶಾಸಕರು ಮುಂಬೈ ಮತ್ತು ಪುಣೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿಶ್ವಾಸಮತ ಪ್ರಕ್ರಿಯೆ ನಡೆದು ಸರ್ಕಾರ ಪತನವಾಗುವವರೆಗೂ ಮುಂಬೈ ಬಿಟ್ಟು ಕದಲುವುದಿಲ್ಲ ಎಂದು ರಾಜೀನಾಮೆ ನೀಡಿರುವ ಶಾಸಕರು ಪಟ್ಟುಹಿಡಿದಿದ್ದರು.
ವಿಶ್ವಾಸಮತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೋಲಾಗುತ್ತಲೇ ಅತೃಪ್ತ ಶಾಸಕರು ಸಂಭ್ರಮಾಚರಣೆ ಮಾಡಿದರು ಎನ್ನಲಾಗಿದೆ. ಅದರ ಬಳಿಕ ಅವರು ಬೆಂಗಳೂರಿಗೆ ಬರಲು ನಿರ್ಧರಿಸಿದ್ದರು. ಆದರೆ, ಮುಂದಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ದಿನಗಳ ಕಾಲ ಅಲ್ಲಿಯೇ ಇರಲು ಅವರು ತೀರ್ಮಾನಿಸಿದ್ದಾರೆ. ಬಿಜೆಪಿ ನಾಯಕರು ಕೂಡ ಅದೇ ಸೂಚನೆಯನ್ನು ಅವರಿಗೆ ನೀಡಿದ್ದಾರೆ.
ಅನರ್ಹತೆಯ ತೂಗುಗತ್ತಿಯನ್ನು ತಲೆಯ ಮೇಲಿರಿಸಿಕೊಂಡಿರುವ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ನಲ್ಲಿ ತಮಗೆ ರಕ್ಷಣೆ ಸಿಗಲಿದೆ ಎಂಬ ಭರವಸೆ ಹೊಂದಿದ್ದಾರೆ. ಅತೃಪ್ತ ಶಾಸಕರು ಬೆಂಗಳೂರಿಗೆ ಬಂದ ಬಳಿಕ ಮತ್ತು ಅವರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಕುರಿತು ನಿರ್ಧಾರ ತೆಗೆದುಕೊಂಡ ನಂತರ ರಾಜ್ಯವು ಮತ್ತಷ್ಟು ರಾಜಕೀಯ ನಾಟಕಗಳಿಗೆ ಸಾಕ್ಷಿಯಾಗಲಿದೆ.

ಕಾಂಗ್ರೆಸ್ ನಾಯಕರ ಭೀತಿ
ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವ ಮುನ್ನವೇ ಅತೃಪ್ತ ಶಾಸಕರು ಬೆಂಗಳೂರಿಗೆ ಮರಳಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅವರನ್ನು ತಮ್ಮೆಡೆಗೆ ಮತ್ತೆ ಸೆಳೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಇದರಿಂದ ಮತ್ತೆ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಈ ಗೊಂದಲಗಳು ತಣ್ಣಗಾಗುವವರೆಗೂ ಮುಂಬೈನಲ್ಲಿಯೇ ಇರುವುದು ಸೂಕ್ತ ಎಂದು ನಿರ್ದೇಶಿಸಲಾಗಿದೆ.

ಅನರ್ಹತೆಯ ಕುರಿತು ಆತಂಕ
ಹೀಗಾಗಿ ಅನಿವಾರ್ಯವಾಗಿ ಶಾಸಕರು ಮುಂಬೈನಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಖಾಸಗಿ ವಾಹಿನಿಯೊಂದರ ಜತೆ ಮಂಗಳವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದ ಜೆಡಿಎಸ್ ಶಾಸಕ ಎಚ್. ವಿಶ್ವನಾಥ್, ಬುಧವಾರ ಎಲ್ಲರೂ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು. ತಮ್ಮ ಅನರ್ಹತೆ ವಿಚಾರದಲ್ಲಿ ಮುಂದೆ ಏನಾಗಬಹುದು ಎಂಬ ಆತಂಕ ಅವರಲ್ಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರನ್ನು ಅನರ್ಹಗೊಳಿಸಬೇಕೆಂಬ ದೂರುಗಳು ಸ್ಪೀಕರ್ ಮುಂದಿವೆ.

ಪಕ್ಷಕ್ಕೆ ಸೇರಿಸುವ ಪ್ರಶ್ನೆಯೇ ಇಲ್ಲ
ರಾಜೀನಾಮೆ ನೀಡಿರುವ ಶಾಸಕರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಕಡ್ಡಿಮುರಿದಂತೆ ಹೇಳಿದ್ದರು. ಪಕ್ಷವಿರೋಧಿ ಚಟುವಟಿಕೆ ನಡೆಸಿರುವ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ವಿಪ್ ಜಾರಿಗೊಳಿಸುವುದು ಪಕ್ಷದ ಶಾಸಕಾಂಗ ನಾಯಕರ ಹಕ್ಕು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ರೂಲಿಂಗ್ ನೀಡಿರುವುದು ಅತೃಪ್ತ ಶಾಸಕರ ಎದೆಬಡಿತ ಹೆಚ್ಚಿಸಿದೆ.

ಕಾನೂನು ಸಮರಕ್ಕೆ ಸಿದ್ಧ
ಮೊದಲ ಬಾರಿಗೆ ಶಾಸಕರು ಕೋರ್ಟ್ ಮೆಟ್ಟಿಲೇರಿದಾಗ ಶಾಸಕರು ಸದನಕ್ಕೆ ಹಾಜರಾಗುವಂತೆ ಒತ್ತಾಯಿಸಬಾರದು ಎಂದು ನ್ಯಾಯಾಲಯ ಸೂಚನೆ ನೀಡಿತ್ತು. ಅದನ್ನು ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂದೇ ಅರ್ಥೈಸಲಾಗಿತ್ತು. ಆದರೆ, ಶಾಸಕರಿಗೆ ವಿಪ್ ಜಾರಿಗೊಳಿಸುವುದು ಸಂವಿಧಾನ ನೀಡಿರುವ ಹಕ್ಕು. ಅದರಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸದನದಲ್ಲಿ ಚರ್ಚೆಯಾಗಿತ್ತು. ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಅವರೂ ಎರಡೂ ಪಕ್ಷಗಳ ಮುಖಂಡರು ಹೊರಡಿಸಿರುವ ವಿಪ್ ಈ ಶಾಸಕರಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಿದ್ದರು. ಒಂದು ವೇಳೆ ವಿಪ್ ಆಧಾರದಲ್ಲಿ ಶಾಸಕರನ್ನು ಅನರ್ಹಗೊಳಿಸಿದರೆ ಅವರು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications