ಸಿದ್ದರಾಮಯ್ಯ ಕಿಂಗ್: ಎಂಟಿಬಿ ನಾಗರಾಜ್, ಸುಧಾಕರ್ ರಾಜೀನಾಮೆ ವಾಪಸ್
ಬೆಂಗಳೂರು, ಜುಲೈ 13: ಬೆಳ್ಳಂಬೆಳಗ್ಗೆ ಐದು ಗಂಟೆಯಿಂದ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಅವರಿಂದ ಆರಂಭವಾದ ಕಾರ್ಯಾಚರಣೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಪ್ರಮುಖವಾಗಿ ರೇವಣ್ಣ ಮತ್ತು ಮುಖ್ಯಮಂತ್ರಿಗಳ ವಿರುದ್ದವೇ ಅಪಸ್ವರ ಎತ್ತಿದ್ದ ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಕೊನೆಗೂ ಮೈತ್ರಿಪಕ್ಷ ಯಶಸ್ವಿಯಾಗುವ ಮೂಲಕ ನಿಟ್ಟುಸಿರು ಬಿಡುವಂತಾಗಿದೆ.
ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಕುಮಾರಸ್ವಾಮಿ ಹೇಳಿದ್ದು ಇದಕ್ಕಾ?
ಹೊಸಕೋಟೆ ಶಾಸಕ ಮತ್ತು ವಸತಿ ಸಚಿವ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಲಾಪುರದ ಶಾಸಕ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ.ಸುಧಾಕರ್ ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಮೊದಲಿಗೆ ಡಿಕೆಶಿ, ಆಮೇಲೆ ಪರಮೇಶ್ವರ್, ಅದಾದ ನಂತರ ಸಿದ್ದರಾಮಯ್ಯ, ಅದಕ್ಕೂ ಜಗ್ಗದ ನಂತರ ಸಿದ್ದರಾಮಯ್ಯ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಮತ್ತು ಕೃಷ್ಣ ಭೈರೇಗೌಡ ಬಂದ ನಂತರ, ಎಂಟಿಬಿ ನಾಗರಾಜ್ ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಕಾರಣಾಂತರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಭಾನುವಾರ (ಜು 14) ನಾನು ಮತ್ತು ಡಾ. ಸುಧಾಕರ್ ನಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲಿದ್ದೇವೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ನನ್ನ ನಾಯಕ ಸಿದ್ದರಾಮಯ್ಯ, ಅವರ ಮಾತಿಗೆ ಬೆಲೆಕೊಟ್ಟು ರಾಜೀನಾಮೆ ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸಿಎಂ, ಸಮ್ಮುಖದಲ್ಲೇ ಎಂಟಿಬಿ ನಾಗರಾಜ್ ಹೇಳುವ ಮೂಲಕ, ಸಮ್ಮಿಶ್ರ ಸರಕಾರದ ಮುಖಂಡರಿಗೆ ಸ್ವಲ್ಪಮಟ್ಟಿನ ರಿಲ್ಯಾಕ್ಸ್ ತಂದಿದ್ದಾರೆ.
ಎಂಟಿಬಿ ನಾಗರಾಜ್, ಡಾ. ಸುಧಾಕರ್ ರಾಜೀನಾಮೆ ಹಿಂದಕ್ಕೆ ಪಡೆಯುವ ನಿರ್ಧಾರ, ಜೊತೆಗೆ, ಈಗಾಗಲೇ ರಾಮಲಿಂಗ ರೆಡ್ಡಿ ಮತ್ತು ರೋಷನ್ ಬೇಗ್ ಕೂಡಾ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯುವ ಸಾಧ್ಯತೆಯಿರುವುದರಿಂದ, ಕುಮಾರಸ್ವಾಮಿ ಸರಕಾರ ಬಚಾವ್ ಆಗುವ ಎಲ್ಲಾ ಸಾಧ್ಯತೆಯಿದೆ.