ಸಾರಾ ಮಹೇಶ್ಗೆ ತಿರುಗೇಟು ನೀಡಿದ ವಿಶ್ವನಾಥ್ ಹೇಳಿದ್ದೇನು?
ಬೆಂಗಳೂರು, ಜುಲೈ 20: ಜೆಡಿಎಸ್ ಮುಖಂಡರಾದ ಎಚ್ ವಿಶ್ವನಾಥ್ ಮತ್ತು ಸಾರಾ ಮಹೇಶ್ ನಡುವಿನ ಆರೋಪ-ಪ್ರತ್ಯಾರೋಪಗಳು ಇನ್ನಷ್ಟು ತೀವ್ರವಾಗುವ ಲಕ್ಷಣ ಕಂಡುಬರುತ್ತಿದೆ. ಸದನದಲ್ಲಿ ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಸಾರಾ ಮಹೇಶ್ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಯಾಗಿ ಶನಿವಾರ ಸಾರಾ ಮಹೇಶ್ ಅವರು ಸುದ್ದಿಗೋಷ್ಠಿ ನಡೆಸಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸಾರಾ ಮಹೇಶ್ ಆರೋಪಗಳನ್ನು ತಳ್ಳಿ ಹಾಕಿರುವ ವಿಶ್ವನಾಥ್, ಸಾರಾ ಮಹೇಶ್ ಒಬ್ಬ ದುಡ್ಡಿನ ದಲ್ಲಾಳಿ ಎಂದು ಆರೋಪಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿದ ಅವರು, 'ನಾನು ಚುನಾವಣೆಯಲ್ಲಿ ಸಾಲ ಮಾಡಿದ್ದು ಸತ್ಯ. ಸಾರಾ ಮಹೇಶ್ ಅವರ ತೋಟದ ಮನೆಗೆ ಹೋಗಿದ್ದು ಕೂಡ ಸತ್ಯ. ನನ್ನ ಸಾಲದ ವಿಚಾರ ಸಾರಾ ಮಹೇಶ್ ಅವರಿಗೂ ಗೊತ್ತು, ಎಚ್ ಡಿ ಕುಮಾರಸ್ವಾಮಿ ಅವರಿಗೂ ಗೊತ್ತು' ಎಂದು ಹೇಳಿದರು.

ಸದನದಲ್ಲಿ ನನ್ನ ಗೈರಿನಲ್ಲಿ ಗುರುತರ ಆರೋಪ ಮಾಡಲಾಗಿದೆ. ಸದನದಲ್ಲಿ ಹಾಜರಿಲ್ಲದ ಸದಸ್ಯರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈ ರೀತಿಯ ಆರೋಪಗಳಿಗೆ ಸ್ಪೀಕರ್ ಅನುಮತಿ ನೀಡಬಾರದು. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡೆ ಅನುಮಾನ ಮೂಡಿಸುತ್ತಿದೆ ಎಂದು ಹೇಳಿದರು.
ನಾನು ಬೀದಿಗೆ ಬಂದು ಬಿದ್ದವನಲ್ಲ. ಸಾರಾ ಒಬ್ಬ ಮಹೇಶ್ ದುಡ್ಡಿನ ದಲ್ಲಾಳಿ. ನಾನು 26 ಕೋಟಿಗೆ ಮಾರಾಟವಾಗಿದ್ದೇನೆಂದು ಮೈಸೂರಿನ ಪತ್ರಕರ್ತನ ಬಳಿ 2 ತಿಂಗಳ ಹಿಂದೆ ಹೇಳಿಸಿದ್ದ. ಮೈಸೂರು ಪ್ರೆಸ್ ಕ್ಲಬ್ಗೆ ಬಂದು ಅದನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದರು.
ನಾನು ಶಾಸಕನಾಗಿದ್ದಾಗ ಆತ ಏನು ಮಾಡುತ್ತಿದ್ದ ಎನ್ನುವುದು ಗೊತ್ತಿದೆ. ಜನ, ಸದನವನ್ನು ನಂಬಿಸಲು ತಾಯಿ ಮಕ್ಕಳ ಮೇಲೆ ಆಣೆ ಮಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ನಾವು ಯಾವ ಕಾರಣಕ್ಕೂ ವಿಶ್ವಾಸಮತ ಯಾಚನೆ ವೇಳೆ ಸದನಕ್ಕೆ ಬರುವುದಿಲ್ಲ. ಸರ್ಕಾರ ವಿಶ್ವಾಸಮತ ಗೆಲ್ಲುವುದು ಸಾಧ್ಯವೇ ಇಲ್ಲ. ಶಾಸಕ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ಹಿಂದಕ್ಕೆ ಪಡೆದು ನಮಗೆ ಮೋಸ ಮಾಡಿ ಹೋದರು. ಹೀಗೆಂದು ನಮ್ಮ ತಂಡ ಮಾತನಾಡುತ್ತಿದೆ. ಅವರು ಹೀಗೆ ಮಾಡಬಾರದಿತ್ತು ಎಂದರು.












Click it and Unblock the Notifications