ಸರಕಾರ ಉಳಿಯಲು ಒಂದೆಡೆ ಹೋಮ, ಇನ್ನೊಂದೆಡೆ ಕಿರಿಕ್: ಹೀಗಾದ್ರೆ ಹೇಗೆ ರೇವಣ್ಣ?
ಬೆಂಗಳೂರು, ಜುಲೈ 14: ಏನು ಕಾಂಗ್ರೆಸ್ಸಿನ ಕೆಲವು ಶಾಸಕರು ಅತೃಪ್ತರ ಗುಂಪಿಗೆ ಸೇರಿದ್ದಾರೋ, ಅವರಲ್ಲಿ ಬಹುತೇಕರಿಗೆ ಇರುವ ಸಮಸ್ಯೆಯೆಂದರೆ ಅಣ್ಣ (ರೇವಣ್ಣ) ತಮ್ಮಂದಿರದ್ದು (ಕುಮಾರಸ್ವಾಮಿ). ಇದನ್ನು ಬಹಿರಂಗವಾಗಿಯೇ ಶಾಸಕರು ಹಲವು ಬಾರಿ ಹೇಳಿದ್ದರು.
ಶನಿವಾರ (ಜುಲೈ 13) ವಸತಿ ಸಚಿವ ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸುವಾಗಲೂ, ಅವರ ಬೇಡಿಕೆಗಳಲ್ಲೊಂದು ರೇವಣ್ಣನ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವುದು. ಅದನ್ನು ನಾನು ನೋಡಿಕೊಳ್ಳುತ್ತೇನೆಂದು ಕುಮಾರಸ್ವಾಮಿ ಮಾತುಕೊಟ್ಟ ಮೇಲೆ, ಎಂಟಿಬಿ ಮುಂದಿನ ಮಾತುಕತೆಗೆ ಒಪ್ಪಿಕೊಂಡರು ಎನ್ನುವ ಮಾತು ಚಾಲ್ತಿಯಲ್ಲಿತ್ತು.
ಸರಕಾರವನ್ನು ಉಳಿಸಿಕೊಳ್ಳಲು ಚಾಮುಂಡೇಶ್ವರಿ, ಶೃಂಗೇರಿ ಶಾರದಾಂಬೆ, ತಿರುಪತಿ ತಿಮ್ಮಪ್ಪನ ಬಳಿ ಹೋಗುವ ರೇವಣ್ಣ, ಒಂದು ದಿನದ ಹಿಂದೆ ಮೃತ್ಯುಂಜಯ ಹೋಮವನ್ನೂ ಮಾಡಿಸಿದ್ದರಂತೆ. ಅವರು, ಅದೆಷ್ಟು ದೈವಭಕ್ತರೆಂದರೆ, ಬರಿಗಾಲಿನಲ್ಲಿ ಪ್ರಸಾದವನ್ನು ತೆಗೆದುಕೊಂಡು ವಿಧಾನಸೌಧಕ್ಕೆ ಹೋಗುತ್ತಿದ್ದಾರೆ. ಇದು ಅವರ ನಂಬಿಕೆ, ಇರಲಿ.

ಆದರೆ, ಒಂದು ಕಡೆ ಸರಕಾರ ಉಳಿಯಲು ಮತ್ತು ಸಹೋದರ ಮುಖ್ಯಮಂತ್ರಿಯಾಗಿ ಮುಂದುವರಿಯಲು ಹೋಮ, ಹವನ, ಟೆಂಪಲ್ ರನ್ ಮಾಡುತ್ತಿರುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ಇನ್ನೊಂದೆಡೆ ತನಗೆ ಸಂಬಂಧವಿಲ್ಲದ ಖಾತೆಗಳೆಲೆಲ್ಲಾ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಸಮಸ್ಯೆ ಮುಂದುವರಿಯುತ್ತಲೇ ಬರುತ್ತಿದೆ. ಹಲವು ದೂರುಗಳು, ಮುಖ್ಯಮಂತ್ರಿಗಳಿಗೆ ಮತ್ತು ಸಿದ್ದರಾಮಯ್ಯನವರಿಗೆ ಹೋಗಿದ್ದರೂ, ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ, ಸರಕಾರದ ವಿರುದ್ದ ತಿರುಗಿಬಿದ್ದಿರುವ ಶಾಸಕರ ತೊಂದರೆಗಳಲ್ಲಿ ರೇವಣ್ಣ ಅವರ ಸಮಸ್ಯೆ ಕೂಡಾ ಒಂದು.
ಎಂಟಿಬಿ ನಾಗಾರಾಜ್, ಮುನಿರತ್ನ, ಡಾ ಸುಧಾಕರ್ ನಂತರ, ಮಾಜಿ ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ ಕೂಡಾ, ಸಮ್ಮಿಶ್ರ ಸರ್ಕಾರದ ಎಲ್ಲ ಸಮಸ್ಯೆಗಳಿಗೂ ರೇವಣ್ಣನೇ ಕಾರಣ. ಇರೋಬರೋ ಇಲಾಖೆಗಳಲ್ಲಿ ರೇವಣ್ಣ ಮೂಗು ತೂರಿಸಿರುವುದಿಂದಲೇ ಸಮಸ್ಯೆ ಇಷ್ಟೊಂದು ಗಂಭೀರವಾಗಿರುವುದು ಎಂದು ರೇವಣ್ಣ ವಿರುದ್ದ ರಾಜಣ್ಣ ಕಿಡಿಕಾರಿದ್ದಾರೆ.












Click it and Unblock the Notifications