ಮಹದಾಯಿ ನ್ಯಾಯಾಧೀಕರಣದ ಅವಧಿ ವಿಸ್ತರಣೆಗೆ ವಿರೋಧ
ಬೆಂಗಳೂರು, ಫೆಬ್ರವರಿ 08 : 'ಮಹದಾಯಿ ನದಿ ನೀರು ಹಂಚಿಕೆ ಕುರಿತು ಉಂಟಾಗಿರುವ ವಿವಾದವನ್ನು ಬಗೆಹರಿಸಲು ರಚಿಸಲಾಗಿರುವ ನ್ಯಾಯಾಧೀಕರಣದ ಅವಧಿಯನ್ನು ಮತ್ತೆ ವಿಸ್ತರಿಸಬೇಕೆಂಬ ಗೋವಾ ರಾಜ್ಯದ ಪ್ರಸ್ತಾಪವನ್ನು ಕರ್ನಾಟಕ ತಿರಸ್ಕರಿಸಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ರಾಜ್ಯ ವಿಧಾನ ಮಂಡಲದ ಸದನ ನಾಯಕರ ಸಭೆಯ ನಂತರ ಅವರು ಮಾತನಾಡಿದರು. 'ಗೋವಾ ರಾಜ್ಯ ಸಲ್ಲಿಸಿದ ತಕರಾರು ಅರ್ಜಿಯ ಮೇರೆಗೆ ರಚಿಸಲಾಗಿದ್ದ ಮಹದಾಯಿ ನ್ಯಾಯಾಧೀಕರಣದಲ್ಲಿ ಫೆಬ್ರವರಿ 9 ರಂದು ವಿಚಾರ ಪ್ರಾರಂಭವಾಗಬೇಕಿತ್ತು' ಎಂದರು.
'ನ್ಯಾಯಾಧೀಕರಣದ ಮುಂದೆ ಹಾಜರಾದ ಗೋವಾ ಪರ ವಕೀಲರು ಅವಧಿಯ ವಿಸ್ತರಣೆ ಕುರಿತು ಪ್ರಸ್ತಾಪಿಸಿದರು. ಗೋವಾದ ಪ್ರಸ್ತಾಪ ಕುರಿತು ಅಭಿಪ್ರಾಯ ನೀಡುವಂತೆ ರಾಜ್ಯಕ್ಕೆ ಸೂಚಿಸಿದಾಗ, ಸರ್ಕಾರದ ಗಮನಕ್ಕೆ ತಂದು ಅಭಿಪ್ರಾಯ ತಿಳಿಸುವುದಾಗಿ ವಕೀಲರು ಹೇಳಿಕೆ ನೀಡಿದ್ದಾರೆ' ಎಂದು ಹೇಳಿದರು.

ಮಹದಾಯಿ ನ್ಯಾಯಾಧೀಕರಣವನ್ನು ಅಂತರ ರಾಜ್ಯ ಜಲ ವಿವಾದ ಕಾಯ್ದೆ 1956 ಅಡಿಯಲ್ಲಿ 2010 ರ ನವೆಂಬರ್ 16 ರಂದು ರಚಿಸಲಾಗಿದ್ದರೂ, ವಾಸ್ತವವಾಗಿ ಅಸ್ತಿತ್ವಕ್ಕೆ ಬಂದದ್ದು 2013ರ ನವೆಂಬರ್ 16 ರಂದು.
ಕಾಯ್ದೆಯ ಪ್ರಕಾರ ನ್ಯಾಯಾಧೀಕರಣವು ಅಸ್ತಿತ್ವಕ್ಕೆ ಬಂದ ಮೂರು ವರ್ಷದೊಳಗೆ ವಿಚಾರಣೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪ್ರಕರಣ ಇತ್ಯರ್ಥಪಡಿಸಬೇಕು. ಆದರೆ, ನಿಗದಿತ ಅವಧಿಯೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದಲ್ಲಿ ಅವಧಿಯನ್ನು ಮತ್ತೆ 2 ವರ್ಷಗಳ ಕಾಲ ವಿಸ್ತರಿಸಲು ಕಾನೂನಿನಲ್ಲಿ ಅವಕಾಶವಿದೆ.
ಈಗಾಗಲೇ ಅವಧಿ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾಧೀಕರಣದ ಅವಧಿ 2018 ರ ಆಗಸ್ಟ್ 20 ರಂದು ಪೂರ್ಣಗೊಳ್ಳಲಿದೆ. ಆ ದಿನಾಂಕದೊಳಗೆ ವರದಿಯನ್ನು ನೀಡಬೇಕಿದೆ.
ಮೊದಲನೆಯದಾಗಿ ನ್ಯಾಯಾಧೀಕರಣದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಅವಧಿ ವಿಸ್ತರಣೆ ಮಾಡಲೇಬೇಕಾದ ಪ್ರಸಂಗ ಉಂಟಾದರೆ ಅಂತರರಾಜ್ಯ ಜಲ ವಿವಾದ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಅವಧಿ ವಿಸ್ತರಣೆ ಮಾಡಿದರೆ ಸಮಸ್ಯೆ ಬಗೆಹರಿಯುವುದು ಮತ್ತಷ್ಟು ವಿಳಂಬವಾಗುತ್ತದೆ. ಈ ವಿವಾದವು ಕುಡಿಯುವ ನೀರಿಗೆ ಸಂಬಂಧಿಸಿರುವ ಹಿನ್ನಲೆಯಲ್ಲಿ ಪ್ರಕರಣದ ವಿಚಾರಣೆ ಆದ್ಯತೆಯ ಮೇರೆಗೆ ನಡೆಯಬೇಕು ಎಂಬುದು ಕರ್ನಾಟಕದ ನಿಲುವಾಗಿದೆ.
ಸರ್ಕಾರದ ಈ ನಿಲುವನ್ನು ಗೋವಾದ ಪರ ವಕೀಲರಿಗೆ ಹಾಗೂ ಮಹದಾಯಿ ನ್ಯಾಯಾಧೀಕರಣಕ್ಕೆ ನಮ್ಮ ರಾಜ್ಯದ ಪರ ವಕೀಲರು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ಫೆ.8ರಿಂದ ಪ್ರಾರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಸಾಕ್ಷಿ-ಪುರಾವೆಗಳನ್ನು ಒದಗಿಸಿದೆ.
ಗೋವಾ ಅರ್ಜಿದಾರ ರಾಜ್ಯವಾಗಿರುವ ಹಿನ್ನಲೆಯಲ್ಲಿ, ನ್ಯಾಯಾಧೀಕರಣದಲ್ಲಿ ಮೊದಲು ತನ್ನ ವಾದವನ್ನು ಮಂಡಿಸಬೇಕಿದೆ. ನಂತರ, ಪ್ರತಿವಾದಿಯಾಗಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ತಮ್ಮ ಪ್ರತಿ ವಾದವನ್ನು ಮಂಡಿಸಲು ಅವಕಾಶವಿದೆ.
ಕರ್ನಾಟಕ ಪರ ವಕೀಲರಾಗಿದ್ದ ಫಾಲಿ ಎಸ್.ನಾರಿಮನ್ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಭಾರತದ ಮಾಜಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿರುವ ಭಾರತದ ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಅಶೋಕ್ ಎಚ್.ದೇಸಾಯ್ ಅವರು ವಿಚಾರಣಾ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಇವರ ಶ್ಯಾಮ್ ದಿವಾನ್ ಅವರೂ ರಾಜ್ಯದ ಹಿತವನ್ನು ಕಾಯ್ದುಕೊಳ್ಳಲಿದ್ದಾರೆ.
ಸಭೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಸದನ ನಾಯಕ ಎಚ್.ಡಿ.ಕುಮಾರ ಸ್ವಾಮಿ ಅವರ ಪರವಾಗಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಸಭೆಗೆ ಹಾಜರಾಗಿದ್ದರು.











Click it and Unblock the Notifications