ಕರ್ನಾಟಕದ ಸೋಮವಾರದ ತುಣುಕು ಸುದ್ದಿಗಳು
ಬೆಂಗಳೂರು, ಅ. 27 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 5 ಗಂಟೆ : ವಿದ್ಯುತ್ ಖರೀದಿ ಹಗರಣದ ತನಿಖೆ ನಡೆಸುತ್ತಿರುವ ಸದನ ಸಮಿತಿ ವಿಧಾನಸೌಧದಲ್ಲಿ ಸಭೆ ಸೇರಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಿತಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಅಧ್ಯಕ್ಷರು ಎಂಬ ಕಾರಣಕ್ಕೆ ಕುಮಾರಸ್ವಾಮಿ ಮೊದಲ ಸಭೆಗೆ ಹಾಜರಾಗಿರಲಿಲ್ಲ.
ಸಮಯ 4 ಗಂಟೆ : ಸರ್ಕಾರಿ ವೈದ್ಯರ ಮನವೊಲಿಕೆ ಕರಸತ್ತು ವಿಫಲವಾಗಿದ್ದು, ವೈದ್ಯರು ರಾಜೀನಾಮೆ ನೀಡಲು ಆರಂಭಿಸಿದ್ದಾರೆ. ಮಂಗಳವಾರ ವೈದ್ಯರ ಸಭೆಯನ್ನು ಸಿಎಂ ಮತ್ತು ಆರೋಗ್ಯ ಸಚಿವರು ಕರೆದಿದ್ದು, ಅಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ.
ಸಮಯ 3 ಗಂಟೆ : ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿರುವ ಬೆನ್ನಲ್ಲೇ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಮಾಜಿ ಶಾಸಕರು ಸಭೆ ನಡೆಸುತ್ತಿದ್ದಾರೆ. ಬಿ.ಸಿ.ಪಾಟೀಲ್ ಸೇರಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಮಯ 2 ಗಂಟೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಮೂರು ಭಾಗಗಳಾಗಿ ವಿಂಗಡಿಸುವ ತೀರ್ಮಾನವನ್ನು ಸರ್ಕಾರ ಕೈ ಬಿಡಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಾಹಿತಿ ಚಂದ್ರಶೇಖರ ಪಾಟೀಲ್, ಕಸಪಾದ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಮಯ 1 ಗಂಟೆ : ಅಕ್ರಮ ಮರಳು ಸಾಗಣೆ ಮಾಫಿಯಾದಲ್ಲಿ ಸರ್ಕಾರದ ಪಾಲಿದೆ. ಪ್ರತಿದಿನ 4 ಕೋಟಿ ರೂ. ಹಣ ಸರ್ಕಾರಕ್ಕೆ ಸಂದಾಯವಾಗುತ್ತಿದೆ ಎಂದು ಬಿಜೆಪಿ ಮುಖಂಡ ಶಂಕರಬಿದರಿ ಆರೋಪಿಸಿದ್ದಾರೆ. ಮರಳು ಮಾಫಿಯಾದಲ್ಲಿ ಸರ್ಕಾರದ ಪಾಲಿರುವುದರಿಂದ ಸರ್ಕಾರ ಅಕ್ರಮ ನಿಲ್ಲಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸಮಯ 12 ಗಂಟೆ : ಸರ್ಕಾರಿ ವೈದ್ಯರು ರಾಜೀನಾಮೆ ನೀಡಲು ಮುಂದಾಗಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಸರ್ಕಾರಿ ವೈದ್ಯರು ರಾಜೀನಾಮೆ ನೀಡಲು ಮುಂದಾಗಿರುವುದು ಅತ್ಯಂತ ದುರದೃಷ್ಟಕರ. ಸರ್ಕಾರ ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದರೂ ಇಂತಹ ಮೊಂಡು ಹಠ ಹಿಡಿಯಬಾರದೆಂದು ಅವರು ಹೇಳಿದ್ದಾರೆ. ವಿಕಾಸಸೌಧದಲ್ಲಿ ಸಿಎಂ ನೇತೃತ್ವದಲ್ಲಿ ವೈದ್ಯರೊಂದಿಗೆ ಸಭೆ ನಡೆಯುತ್ತಿದೆ.
ಸಮಯ 11 ಗಂಟೆ : ಜಾಲಹಳ್ಳಿ ಕ್ರಾಸ್ ಸಮೀಪದ ಆರ್ಕಿಡ್ಸ್ ಶಾಲೆಯ ಮುಂದೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ. 6 ಮತ್ತು 7ನೇ ತರಗತಿಗಳನ್ನು ಆರಂಭ ಮಾಡಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. [ಶಾಲೆ ಮುಂದೆ ಮುಂದುವರೆದ ಪ್ರತಿಭಟನೆ]
ಸಮಯ 10 ಗಂಟೆ : ಪ್ರೇಮಲತಾ ದಿವಾಕರ್ ದಂಪತಿಯ ಸಂದರ್ಶನ ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠ ರಾಘವೇಶ್ವರ ಶ್ರೀಗಳ ಸಂದೇಶವಿರುವ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಗಾಯಕಿ ಅವರ ಆರೋಪಗಳಿಂದ ಶ್ರೀಮಠದ ಭಕ್ತ ಸಮುದಾಯಕ್ಕೆ ನೋವಾಗಿದೆ.ಇಂತಹ ಎಷ್ಟೇ ಆರೋಪಗಳನ್ನು ಎದುರಿಸಲು ಸಿದ್ಧ ಎಂದು ರಾಘವೇಶ್ವರ ಶ್ರೀಗಳು ಪ್ರತಿಭಟನೆಯಲ್ಲಿ ಹೇಳಿದ್ದಾರೆ.
ಸಮಯ 9 ಗಂಟೆ : ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಪ್ರಕರಣದ ವಿಚಾರಣೆ ರಾಮನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಇಂದು ನಡೆಯಲಿದೆ. ಪ್ರಕರಣದ ಆರೋಪಿಗಳಾದ ನಿತ್ಯಾನಂದ ಮತ್ತು ಆತನ ಐವರು ಶಿಷ್ಯರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿಯನ್ನು ಸಿಐಡಿ ಪೊಲೀಸರು ಕೋರ್ಟ್ಗೆ ಇಂದು ಸಲ್ಲಿಸುವ ಸಾಧ್ಯತೆ ಇದೆ.
ಸಮಯ 8.19 : ಕಗ್ಗಂಟಾಗಿರುವ ನಿಗಮ ಮಂಡಳಿಗಳ ನೇಮಕಾತಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದು ಸಭೆ ಸೇರುತ್ತಿದ್ದಾರೆ. ಇಂದಿನ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿ ಅ.30ರಂದು ದೆಹಲಿಗೆ ತೆರಳಿ ಅದಕ್ಕೆ ಒಪ್ಪಿಗೆ ಪಡೆಯಲಿದ್ದಾರೆ.
ಸಮಯ 8 ಗಂಟೆ : ಜಾಲಹಳ್ಳಿ ಕ್ರಾಸ್ ಸಮೀಪದ ಆರ್ಕಿಡ್ಸ್ ಶಾಲೆಯಲ್ಲಿ ನರ್ಸರಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದ ನಂತರ ಮುಚ್ಚಲಾಗಿದ್ದ ಶಾಲೆ ಸೋಮವಾರದಿಂದ ಪುನರಾರಂಭವಾಗಿದೆ. 1ರಿಂದ 6ನೇ ತರಗತಿ ವರೆಗಿನ ತರಗತಿಗಳು ಆರಂಭಗೊಂಡಿದ್ದು, ಶಾಲೆಯ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. [ಜಾಲಹಳ್ಳಿ ಪೊಲೀಸರ ವಶಕ್ಕೆ ಆರೋಪಿ ಗುಂಡಣ್ಣ]