Industry: ಬೆಂಗಳೂರು ಬಿಟ್ಟು ಬೇರೆಡೆ ಕೈಗಾರಿಕೆ ಅಭಿವೃದ್ಧಿಗೆ ಆಕರ್ಷಕ ಉಪಕ್ರಮಗಳು ಅಗತ್ಯ: ಎಂಬಿ ಪಾಟೀಲ್
ಬೆಂಗಳೂರು, ಅಕ್ಟೋಬರ್ 15: ರಾಜಧಾನಿ ಬೆಂಗಳೂರಿನ ಮೇಲೆ ಕೈಗಾರಿಕೆಗಳ ವಿಪರೀತ ಒತ್ತಡವಿದೆ. ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ಕೈಗಾರಿಕೆಗಳು ನೆಲೆಯೂರುವಂತೆ ಮಾಡಬೇಕಾಗಿದೆ. ಆದರೆ ಈಗ ಇರುವ ಉಪಕ್ರಮಗಳು ಅಷ್ಟೊಂದು ಆಕರ್ಷಕವಾಗಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಪ್ರತಿಪಾದಿಸಿದರು.
ಬೆಂಗಳೂರಿನ ಖನಿಜ ಭವನದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯು ತಮ್ಮೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿಯು ಬೆಂಗಳೂರನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ದೇವಸ್ಥಾನ ಮತ್ತು ನೀರಿನ ಆಸರೆಗಳನ್ನು ಆಧರಿಸಿದ ಪ್ರವಾಸೋದ್ಯಮಕ್ಕೂ ಗಮನ ಹರಿಸಬೇಕು. ಉತ್ತರ ಕರ್ನಾಟಕದಲ್ಲಿ ಇದಕ್ಕೆ ಯಥೇಚ್ಛ ಅವಕಾಶಗಳಿವೆ. ಆದರೆ, ವಾಸ್ತವದಲ್ಲಿ ಇವೆಲ್ಲ ನನೆಗುದಿಗೆ ಬಿದ್ದಿದೆ. ತಮ್ಮ ವರದಿಯಲ್ಲಿ ಈ ಅಂಶಗಳ ಬಗ್ಗೆಯೂ ಪ್ರಸ್ತಾಪಿಸಿದರೆ ಉತ್ತಮ ಎಂದು ಪಾಟೀಲ ಅಭಿಪ್ರಾಯಪಟ್ಟರು.

ನೆರೆ ರಾಜ್ಯಗಳ ಉದ್ಯಮ ನೀತಿ ಪಾಲಿಸಬೇಕು
ಬೆಂಗಳೂರನ್ನು ಹೊರತುಪಡಿಸಿ, ರಾಜ್ಯದ ಇತರ ಭಾಗಗಳಲ್ಲಿ ಉದ್ಯಮಗಳು ಬೆಳೆಯಬೇಕಿದೆ. ಇದಗಬೇಕಾದರೆ ತೆರಿಗೆ ರಜೆ, ಹೆಚ್ಚಿನ ಸಹಾಯಧನ, ಕೇಂದ್ರ ಸರಕಾರದಿಂದ ಪಡೆದುಕೊಳ್ಳಬಹುದಾದ ನೆರವು ಸೇರಿದಂತೆ ಸಮಗ್ರ ದೃಷ್ಟಿಕೋನದ ತುರ್ತು ಅಗತ್ಯವಿದೆ. ಅಷ್ಟೇ ಅಲ್ಲದೇ ಆಯಾ ಭಾಗಗಳಲ್ಲಿ ಕೈಗಾರಿಕೆಗಳು ಬೆಳೆಯಲು ಬೇಕಾದ ಕಾರ್ಯಪರಿಸರ ಸೃಷ್ಟಿಸಬೇಕಿದೆ. ಈ ವಿಚಾರದಲ್ಲಿ ನಾವು ನೆರೆಹೊರೆಯ ರಾಜ್ಯಗಳ ನೀತಿಗಳನ್ನೂ ಗಮನಿಸಿ ಹೆಜ್ಜೆ ಇಡಬೇಕು ಎಂದು ಸಚಿವರು ತಿಳಿಸಿದರು.
ಈ ಹಿಂದೆ ಡಿ ಎಂ ನಂಜುಂಡಪ್ಪ ವರದಿಯ ಶಿಫಾರಸಿನಂತೆ ಹಿಂದುಳಿದ ಮತ್ತು ಅತೀ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 2007ರಿಂದ 2021ರವರೆಗೆ 29,422 ಕೋಟಿ ರೂ. ಕೊಡಲಾಗಿತ್ತು. ಬೆಂಗಳೂರಿನ ಮೇಲೆ ಕೈಗಾರಿಕೆಗಳ ವಿಪರೀತ ಒತ್ತಡವಿದ್ದು, ಬೇರೆಡೆ ಕೈಗಾರಿಕೆ ವಿಸ್ತರಿಸಬೇಕಾಗಿದೆ.

ಹಾಲಿ ನೀಡುತ್ತಿರುವ ಸೌಲಭ್ಯಗಳು ಸಾಲದು
ಈಗ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ (ಝೋನ್ 1 ಮತ್ತು 2) ಉದ್ಯಮಗಳನ್ನು ಸ್ಥಾಪಿಸುವವರಿಗೆ ಶೇ.25ರವರೆಗೆ ಬಂಡವಾಳ ಹೂಡಿಕೆ ಸಬ್ಸಿಡಿ ಮತ್ತು ಹೆಚ್ಚುವರಿಯಾಗಿ ಶೇ.5ರಷ್ಟು ಹೂಡಿಕೆ ಸಬ್ಸಿಡಿ ನೀಡಲಾಗುತ್ತಿದೆ. ಇನ್ನೂ ಝೋನ್-3ರಡಿ ಬರುವ ಪ್ರದೇಶಗಳಲ್ಲಿ ಭೂಮಿಯ ಮೇಲಿನ ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ, ಸ್ಥಳೀಯ ಯುವಜನರಿಗೆ ಉದ್ಯೋಗ ನೀಡಲೆಂದು ಶೇ.7.5ರಿಂದ ಶೇ.15ರವರೆಗೆ ಬೋನಸ್ ಸಬ್ಸಿಡಿ ಕೊಡಲಾಗುತ್ತಿದೆ. ಆದರೆ, ಕೈಗಾರಿಕೆಗಳ ಬೆಳವಣಿಗೆಗೆ ಇದು ಸಾಲದು ಎಂದರು.
ದಿವಂಗತ ಎಸ್ ಎಂ.ಕೃಷ್ಣ ಸಿಎಂ ಆಗಿದ್ದಾಗ ಐ.ಟಿ. ವಲಯದ ಕಂಪನಿಗಳಿಗೆ ಹತ್ತು ವರ್ಷಗಳ ತೆರಿಗೆ ರಜೆ ಕೊಟ್ಟಿದ್ದರು. ಇದರಿಂದ ರಾಜ್ಯವು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿಯಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಬೇರೆಬೇರೆ ಭಾಗಗಳಲ್ಲಿ ಇಂತಹ ಸೌಲಭ್ಯಗಳನ್ನು ಕೊಟ್ಟು, ಉದ್ಯಮ ಬೆಳೆಸಬೇಕಿದೆ. ಪೂರಕವಾದ ಶಿಕ್ಷಣ ವ್ಯವಸ್ಥೆ, ಕೌಶಲ್ಯಾಭಿವೃದ್ಧಿ, ಪ್ರತಿಭಾವಂತ ಮಾನವ ಸಂಪನ್ಮೂಲ ಅಭಿವೃದ್ಧಿ, ಜಾಗತಿಕ ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನಹರಿಸಬೇಕೆಂದು ಹೇಳಿದರು.
GIM 25 ಹೂಡಿಕೆಯ ಬಹುಪಾಲು ಹೊರಗೆ ಹೂಡಿಕೆ
ಕರ್ನಾಟಕ ಸರ್ಕಾರ ಹಿಂದುಳಿದ ಜಿಲ್ಲೆಗಳಲ್ಲಿ (ಟೈಯರ್-2 ನಗರಗಳು) ಕ್ಷಿಪ್ರ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮುಂದಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಖಾತ್ರಿಯಾಗಿರುವ 10.27 ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ ಶೇ.75ರಷ್ಟು ಬೆಂಗಳೂರು ಬಿಟ್ಟು ಬೇರೆ ಪ್ರದೇಶಗಳಲ್ಲಿ ಹೂಡಿಕೆ ಆಗುವಮತೆ ಮಾಡಲಾಗಿದೆ. ಒಟ್ಟು ಹೂಡಿಕೆಯಲ್ಲಿ ಶೇ.45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಗುವಂತೆ ಮಾಡಿದ್ದೇವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ತನ್ನ "ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ' ಕಾರ್ಯಕ್ರಮದಡಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಕೂಡ ಸೇರಿಸಿಕೊಂಡಿದೆ. ಇದರಡಿಯಲ್ಲಿ ವಿಶೇಷ ಯೋಜನೆಗಳು, ಹಿಂದುಳಿದ ಪ್ರದೇಶಗಳಿಗೆ ಮೀಸಲಾಗಿರುವ ಅನುದಾನದ ನಿಧಿ ಮತ್ತು ಹೆಚ್ಚುವರಿ ಹಣಕಾಸು ನೆರವು ಸಿಗುತ್ತದೆ. ನಾವು ಅದೇ ರೀತಿ ಮಾಡಬೇಕಿದೆ ಎಂದರು.












Click it and Unblock the Notifications