ಕೊರೊನಾ ವಿರುದ್ಧ ಹೋರಾಟ; ಕರ್ನಾಟಕಕ್ಕೆ ಸಂಕಟ ತಂದ ಮಹಾರಾಷ್ಟ್ರ
ಬೆಂಗಳೂರು, ಮೇ 18 : ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ರಾಜ್ಯಕ್ಕೆ ಪಕ್ಕದ ಮಹಾರಾಷ್ಟ್ರ ಸಂಕಟ ತಂದಿದೆ. ಕರ್ನಾಟಕದಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಹಲವು ಮಹಾರಾಷ್ಟ್ರದಿಂದ ಬಂದಿರುವಂತಹದ್ದು.
ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಮುಂಬೈ ಸೇರಿದಂತೆ ವಿವಿಧ ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಮಹಾರಾಷ್ಟ್ರ ಸರ್ಕಾರ ಹರಸಾಹಸಪಡುತ್ತಿದೆ.
ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದ ಬಳಿಕ ಮಹಾರಾಷ್ಟ್ರಕ್ಕೆ ವಿವಿಧ ಕಾರಣಕ್ಕಾಗಿ ವಲಸೆ ಹೋಗಿದ್ದ ಹಲವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಕೊರೊನಾ ಹಾಟ್ ಸ್ಪಾಟ್ ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ.
ಸೋಮವಾರ ಮಧ್ಯಾಹ್ನ ವರದಿ ಪ್ರಕಾರ ರಾಜ್ಯದಲ್ಲಿ 84 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆಯಾಗಿದೆ. ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಹೊಸ ಪ್ರಕರಣಗಳಲ್ಲಿ ಹಲವು ಮಹಾರಾಷ್ಟ್ರದಿಂದ ವಾಪಸ್ ಆದವರು.

ಕರ್ನಾಟಕಕ್ಕೆ ಸಂಕಟ
ಸೋಮವಾರ ರಾಜ್ಯದಲ್ಲಿ ಮಧ್ಯಾಹ್ನದ ತನಕ 84 ಹೊಸ ಪ್ರಕರಣ ದಾಖಲಾಗಿದೆ. ಇವುಗಳಲ್ಲಿ 56 ಮಹಾರಾಷ್ಟ್ರದ ಟ್ರಾವೆಲ್ ಹಿಸ್ಟರಿ ಹೊಂದಿದೆ. ಮುಂಬೈನಿಂದ ಬಂದ 54 ಜನರು ಸೇರಿ ಒಟ್ಟು 56 ಜನರು ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ತಗುಲಿದ್ದು, ಕರ್ನಾಟಕದ ಸೋಂಕಿತರ ಸಂಖ್ಯೆಯನ್ನು ಹೆಚ್ಚು ಮಾಡಿದೆ.

ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು ಗುಜರಾತ್, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳಿಂದ ಮೇ 31ರ ತನಕ ಯಾರೂ ಕರ್ನಾಟಕಕ್ಕೆ ಆಗಮಿಸುವಂತಿಲ್ಲ ಎಂದು ಹೇಳಿದರು.

ಹಲವಾರು ಜಿಲ್ಲೆಗಳು
ಶಿವಮೊಗ್ಗ, ಮಂಡ್ಯ, ಹಾಸನ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೊಸ ಹೊಸ ಕೊರೊನಾ ಪ್ರಕರಣ ದಾಖಲಾಗುತ್ತಿದೆ. ಇವರೆಲ್ಲರೂ ಮುಂಬೈ ಅಥವ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸಿದವರು. ಆದ್ದರಿಂದ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಪಕ್ಕದ ರಾಜ್ಯಕ್ಕೆ ಸಂಕಟ ತಂದಿದೆ.

ಮಹಾರಾಷ್ಟ್ರ ಕೊರೊನಾ ಹಾಟ್ ಸ್ಪಾಟ್
ಮಹಾರಾಷ್ಟ್ರ ಕೊರೊನಾ ಹಾಟ್ ಸ್ಪಾಟ್. ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ರಾಜ್ಯ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 33,053. 1198 ಜನರು ಇದುವರೆಗೂ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 24,167 ಸಕ್ರಿಯ ಪ್ರಕರಣಗಳಿವೆ. ಮುಂಬೈ ಒಂದರಲ್ಲಿಯೇ ಸೋಂಕಿತರ ಸಂಖ್ಯೆ 20,105.












Click it and Unblock the Notifications