Get Updates
Get notified of breaking news, exclusive insights, and must-see stories!
Live

Karnataka Winter Session 2021: ಮತಾಂತರ ನಿಷೇಧ ವಿಧೇಯಕ ಇಂದು ಪರಿಷತ್‌ನಲ್ಲಿ ಮಂಡನೆ

ಬೆಳಗಾವಿ, ಡಿಸೆಂಬರ್ 24: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನವು ಡಿಸೆಂಬರ್ 13ರ ಸೋಮವಾರದಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಮೊದಲ ಬಾರಿಗೆ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಹತ್ತು ದಿನಗಳ ಅಧಿವೇಶನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ನಡುವೆ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದುಕೊಂಡಿವೆ.

ಚಳಿಗಾಲ ಅಧಿವೇಶನಕ್ಕೆ ಸರ್ಕಾರ ಒಂದು ಕಡೆ ಅಣಿಯಾಗಿದ್ದರೆ, ಇದೇ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ. ಪ್ರವಾಹ, ಕೊರೊನಾವೈರಸ್ ಕಾರಣದಿಂದಾಗಿ ಬೆಂಗಳೂರಿನಲ್ಲೇ ಅಧಿವೇಶನವನ್ನು ನಡೆಸಲಾಗಿದ್ದು, 2018ರ ನಂತರ ಬೆಳಗಾವಿಯಲ್ಲಿ ಮೊದಲ ಬಾರಿ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್‌ 13 ರಿಂದ ಡಿಸೆಂಬರ್‌ 24 ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ.

ಸುವರ್ಣ ಸೌಧದಲ್ಲಿ ಅಧಿವೇಶನಕ್ಕೆ 12 ಕೋಟಿ ಖರ್ಚು:

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕಾಗಿ ಸುಮಾರು 12 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಶಾಸಕರು, ಸಚಿವರು, ಅಧಿಕಾರಿಗಳು, ಸಿಬ್ಬಂದಿ ಸೇರಿ ಸುಮಾರು 4500 ಜನರಿಗೆ ಜಿಲ್ಲಾಡಳಿತದಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹತ್ತು ದಿನದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ ಹನ್ನೆರಡು ಕೋಟಿ ಖರ್ಚು ಮಾಡುತ್ತಿದೆ. ಈ ಹಿಂದಿನ ಅಧಿವೇಶನಕ್ಕೆ ಸುಮಾರು 24 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಬಾರಿ ಚಳಿಗಾಲದ ಅಧಿವೇಶನಕ್ಕೆ ಸುಮಾರು 12 ಕೋಟಿ ರೂ. ಮಾತ್ರ ಖರ್ಚು ಮಾಡಲಾಗುತ್ತಿದೆ. ಅಧಿವೇಶನ ಭದ್ರತೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಸುಮಾರು 2800 ಪೊಲೀಸ್‌ ಸಿಬ್ಬಂದಿ, ಐನೂರಕ್ಕೂ ಅಧಿಕ ಪೊಲೀಸ್‌ ಅಧಿಕಾರಿಗಳಿಗೆ ನಗರ ಪೊಲೀಸ್‌ ಆಯುಕ್ತಾಲಯ ವಸತಿ ಸೌಲಭ್ಯ ಕಲ್ಪಿಸುತ್ತಿದೆ.

Karnataka Legislature Winter Session 2021 in Belagavi Live Updates, News and Highlights in Kannada

ಸರ್ಕಾರಕ್ಕೆ ವಿಪಕ್ಷಗಳ ಸವಾಲು:

ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಕ್ಕೆ ಪ್ರತಿಪಕ್ಷಗಳು ಅಣಿಯಾಗಿವೆ. ಆ ಪೈಕಿ ಅತಿವೃಷ್ಟಿ, ನೆರೆ ಹಾವಳಿ ಪರಿಹಾರ ಕಾರ್ಯ ಹಾಗೂ ಪುನರ್‌ ವ್ಯವಸ್ಥೆ, ಕೇಂದ್ರ ಸರ್ಕಾರ ನೆರವು ವಿಚಾರ, ಬಿಟ್‌ಕಾಯಿನ್ ಹಗರಣ, ಮೇಕೆದಾಟು ಯೋಜನೆ ವಿಳಂಬ, ವಿವಿಧ ಇಲಾಖೆಗಳಲ್ಲಿ ಶೇ.40ರಷ್ಟು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿರುವ ಬಗ್ಗೆ ಗುತ್ತಿಗೆದಾರರ ಆರೋಪ, ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡದ ಕುರಿತು ವಿಷಯಗಳನ್ನು ಪ್ರತಿಪಕ್ಷಗಳು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿವೆ. ಇದೇ ವಿಷಯಗಳನ್ನು ಇಟ್ಟುಕೊಂಡು ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸನ್ನದ್ಧವಾಗಿವೆ. ಸೋಮವಾರದಿಂದ ಬೆಳಗಾವಿ ಸುವರ್ಣ ಸೌಧದದಲ್ಲಿ ಆರಂಭವಾಗುತ್ತಿರುವ ಚಳಿಗಾಲ ಅಧಿವೇಶನದ ಕ್ಷಣಕ್ಷಣದ ಅಪ್‌ಡೇಟ್‌ಗಾಗಿ ಇಲ್ಲಿ ಓದಿ.

Dec 24, 2021, 10:42 am IST

ವಿಧಾನ ಪರಿಷತ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021 ಮಂಡನೆ ಮಾಡಲಾಗಿದೆ. ಆದರೆ ವಿಧೇಯಕ ಅಂಗೀಕಾರ ಪಡೆಯಲು ಬಿಜೆಪಿಗೆ ಬಹುಮತವಿಲ್ಲ. ಪರಿಷತ್ ಒಟ್ಟು ಸದಸ್ಯ ಬಲ 75. ಬಹುಮತಕ್ಕೆ 38 ಸದಸ್ಯರ ಅಗತ್ಯವಿದೆ. ಆದರೆ ಬಿಜೆಪಿ ಸದಸ್ಯರ ಸಂಖ್ಯೆ 32. ಕಾಂಗ್ರೆಸ್ 29, ಜೆಡಿಎಸ್ 13, ಪಕ್ಷೇತರ 1 ಸದಸ್ಯರಿದ್ದಾರೆ.
Dec 24, 2021, 8:37 am IST

ವಿಧಾನಸಭೆ ಚಳಿಗಾಲದ ಅಧಿವೇಶನದ ಇಂದು ಅಂತ್ಯಗೊಳ್ಳಲಿದೆ. ವಿಧಾನ ಪರಿಷತ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021 ಮಂಡನೆ ಮಾಡಿ ಇಂದು ಒಪ್ಪಿಗೆ ಪಡೆಯಬೇಕಿದೆ.
Dec 24, 2021, 8:33 am IST

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021 ಇಂದು ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಲಿದೆ.
Dec 23, 2021, 8:14 pm IST

5/11/2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಆರ್‌ಎಸ್‌ಎಸ್ ಮೂಲದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್. ಮೂರ್ತಿ, ಜಯದೇವ, ಆರ್. ಲೀಲಾ, ಮುತ್ತೂರು ಕೃಷ್ಣಮೂರ್ತಿ ಎಂಬುವವರು ಕಾನೂನು ಆಯೋಗಕ್ಕೆ ಮತಾಂತರ ನಿಷೇಧ ಕಾಯ್ದೆ ರೂಪಿಸಿ, ಜಾರಿಗೊಳಿಸುವಂತೆ ಮನವಿ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
Dec 23, 2021, 5:19 pm IST

ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕ ವಿಧಾನಸಭೆ ಸದನದಲ್ಲಿ ಮಂಡಿಸಲಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಗುರುವಾರ ಧ್ವನಿ ಮತದ ಮೂಲಕ ಅಂಗೀಕಾರ ಪಡೆದಿದೆ.
Dec 23, 2021, 3:32 pm IST

ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ?: ವಿಪಕ್ಷ ನಾಯಕ ಸಿದ್ದರಾಮಯ್ಯ
Dec 23, 2021, 3:30 pm IST

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪಿ. ರಾಜೀವ್, ಹಿಂದೂಗಳು 2001ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.83.86ರಷ್ಟಿದ್ದರು. 2011ರಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 79.80ರಷ್ಟು ಆಗಿದೆ ಎಂದು ಸರ್ಕಾರದ ದಾಖಲೆಯನ್ನು ಉಲ್ಲೇಖಿಸಿದರು.
Dec 23, 2021, 1:17 pm IST

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಬಗ್ಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ ರಾಜ್ಯದಲ್ಲಿ ಬಿಲ್ ತರಲಾಗಿದೆ. ನಾಲ್ಕು ಕಡೆ ಅದೇ ಅಂಶಗಳಿವೆ. ಪ್ರೀತಿಸಿ ಮದುವೆಯಾದವರನ್ನು ಪ್ರಶ್ನಿಸಲು ನೀವು ಯಾರು? ಎಂದು ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ ಎಂದರು.
Dec 23, 2021, 12:44 pm IST

ವಿಧಾನಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಬಗ್ಗೆ ಚರ್ಚೆ ನಡೆಯುತ್ತಿದೆ.
Dec 23, 2021, 12:38 pm IST

ಮುಸ್ಲಿಂಮರು 2001ರಲ್ಲಿ ಶೇಕಡಾ 12.23ರಷ್ಟು ಇದ್ದರು. 2011ರಲ್ಲಿ ಶೇಕಡಾ 12.92ರಷ್ಟು. 2001ರಲ್ಲಿ ಕ್ರೈಸ್ತರು ಒಟ್ಟು ಜನಸಂಖ್ಯೆಯಲ್ಲಿ 1.91ರಷ್ಟು ಇದ್ದರು. 2011ರಲ್ಲಿ ಕ್ರೈಸ್ತರು ಒಟ್ಟು ಜನಸಂಖ್ಯೆಯಲ್ಲಿ 1.87ರಷ್ಟು ಆಗಿದ್ದಾರೆ ಎಂದು ಸಿದ್ದರಾಮಯ್ಯ ಸದನದಲ್ಲಿ ವಿವರಣೆ ನೀಡಿದರು.
Dec 23, 2021, 12:36 pm IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಾತನಾಡಿದರು. ಮತಾಂತರದಿಂದ ಮುಸ್ಲಿಂಮರ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನಾನು ಅಂಕಿ ಅಂಶ ನೀಡುತ್ತೇನೆ ಹಿಂದೂಗಳ ಜನಸಂಖ್ಯೆ 2001ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ 83.86ರಷ್ಟಿದ್ದರು. 2011ರಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 84ರಷ್ಟು ಆಗಿದೆ. ಹಿಂದೂಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದರು.
Dec 23, 2021, 11:30 am IST

ಸದನದಲ್ಲಿ ಮಾತನಾಡಿದ ಜೆ. ಸಿ. ಮಾಧುಸ್ವಾಮಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಬಿಲ್ ರಚನೆ ಮಾಡಲು ಸೂಚನೆ ನೀಡಲಾಗಿತ್ತು. ಬಿಲ್ ಮಾಡಿ ತರುವಂತೆ ಕಾನೂನು ಆಯೋಗಕ್ಕೆ ಅವರೇ ಹೇಳಿದ್ದರು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ದಾಖಲೆ ತೋರಿಸುವಂತೆ ಪಟ್ಟು ಹಿಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
Dec 23, 2021, 11:21 am IST

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಬಗ್ಗೆ ಚರ್ಚೆಗಳು ಆರಂಭವಾದಾಗ ಮಾತನಾಡಿದ ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ನಾವು ಯಾವ ಧರ್ಮದ ವಿರುದ್ಧವೂ ಇಲ್ಲ. ವಿಧೇಯಕದಲ್ಲಿ ಧರ್ಮಗಳನ್ನು ಟಾರ್ಗೆಟ್ ಮಾಡಿಲ್ಲ. ಬಲವಂತವಾಗಿ ವಿವಾಹವಾಗುವುದಕ್ಕೆ ಆಕ್ಷೇಪವಿದೆ ಎಂದು ಹೇಳಿದರು.
Dec 23, 2021, 11:17 am IST

ಪ್ರತಿಪಕ್ಷಗಳ ಗದ್ದಲದ ಹಿನ್ನಲೆಯಲ್ಲಿ ವಿಧಾನಸಭೆ ಕಲಾಪವನ್ನು 10 ನಿಮಿಷಗಳ ಕಾಲ ಸ್ಪೀಕರ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದರು.
Dec 23, 2021, 11:14 am IST

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಬಗ್ಗೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಸಂವಿಧಾನ ಬಾಹಿರವಾಗಿ ಜಾರಿಗೆ ತಂದಿರುವ ಈ ವಿಧೇಯಕವನ್ನು ನಾನು ವಿರೋಧಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
Dec 23, 2021, 11:08 am IST

ಸುಮ್ಮನೆ ಮಾತಾಡಿ ಅಪಹಾಸ್ಯಕ್ಕೆ ಇಡಾಗಬೇಡಿ, ಸರ್ವಾನುಮತದಿಂದ ವಿಧೇಯಕ ಅಂಗೀಕರಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಿದರು.
Dec 23, 2021, 10:28 am IST

ಮಧ್ಯಾಹ್ನದ ನಂತರ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಅಂಗೀಕಾರ ಮಾಡುವ ಕುರಿತು ತೀರ್ಮಾನ ಮಾಡುತ್ತೇವೆ. ವಿಧೇಯಕಗಳಿಗೆ ವಿರೋಧ ಮಾಡುವುದು ಪ್ರತಿಪಕ್ಷಗಳ ಸಾಮಾನ್ಯ ಕೆಲಸವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.
Dec 23, 2021, 10:22 am IST

ಮತಾಂತರ ನಿಯಂತ್ರಣ ಕಾಯ್ದೆ ಬಗ್ಗೆ ರಾಜ್ಯದ ಜನರಿಗೆ ತಿಳಿಯಬೇಕು ಎಂದರೆ ಸದಸನದಲ್ಲಿ ಚರ್ಚೆಯಗಬೇಕು. ಸದನದಲ್ಲಿ ಗದ್ದಲ ಮಾಡದಂತೆ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡುತ್ತೇವೆ. ವಿಧೇಯಕ ಅಂಗೀಕಾರಕ್ಕೆ ನಮಗೆ ಪೂರ್ಣ ಬಹುಮತವಿದೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
Dec 22, 2021, 3:46 pm IST

ನಾಳೆ ಮಧ್ಯಾಹ್ನ 2.30ರಿಂದ ರಿಂದ 5 ಗಂಟೆಯವರೆಗೆ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ನಡೆಸಿದ ಬಳಿಕ ನಾಳೆ ಸಂಜೆ 5 ಗಂಟೆಗೆ ಪ್ರಶ್ನೋತ್ತರ ನಡೆಯಲಿದೆ ಎಂದು ಸದನದಲ್ಲಿ ಸ್ಪೀಕರ್​ ತಿಳಿಸಿದ್ದಾರೆ.
Dec 22, 2021, 3:45 pm IST

ವಿಪಕ್ಷಗಳ ಮಾತಿಗೆ ಮಣಿದ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು 6 ಗಂಟೆಯವರೆಗೆ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ನಡೆಸಿ ನಾಳೆ 10 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ಮತಾಂತರ ವಿಧೇಯಕ ಬಗ್ಗೆ ಚರ್ಚೆ ನಡೆಸೋಣ ಎಂದಿದ್ದಾರೆ.
Dec 22, 2021, 3:17 pm IST

ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆಯಿಂದ ನಮಗೆ ಯಾವುದೇ ಭಯವಿಲ್ಲ ಎಂದು ಮೈಸೂರು ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ. ವಿಲಿಯಂ ಹೇಳಿದರು.
Dec 22, 2021, 2:43 pm IST

ಸಮಾಜದಲ್ಲಿ ಯಾವುದೇ ರೀತಿ ಮತಾಂತರಗಳು ನಡೆಯಬಾರದು. ಎಲ್ಲರೂ ಅವರ ಮೂಲ ಧರ್ಮದಲ್ಲಿ ಬದುಕಬೇಕು ಎಂಬುದು ನಮ್ಮ ಆಶಯ. ಆದರೆ ಕಾಂಗ್ರೆಸ್ಸಿಗರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಶೋಧಾ ಕರಂದ್ಲಾಜೆ ಆರೋಪಿಸಿದ್ದಾರೆ.
Dec 22, 2021, 2:36 pm IST

ಬೆಳಗಾವಿ ವಿಧಾನಸಭೆ ಕಲಾಪವನ್ನು ಭೋಜನ ವಿರಾಮದ ಹಿನ್ನೆಲೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿದೆ.
Dec 22, 2021, 2:04 pm IST

ಮತಾಂತರ ನಿಯಂತ್ರಣದ ಮಸೂದೆ ವಿಚಾರದಲ್ಲಿ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಪ್ರತಿಪಕ್ಷಗಳ ಸದಸ್ಯರು ಧರಣಿ ವಾಪಸ್ ಪಡೆಯಿರಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. ಸರ್ಕಾರ, ಸಚಿವರು ಮತ್ತು ವಿಪಕ್ಷದ ಮೇಲೆ ಸಿಡಿಮಿಡಿಗೊಂಡರು. ಈ ಸ್ಥಾನದಲ್ಲಿ ಕೂತಿರುವ ನನ್ನ ಕಷ್ಟವನ್ನು ಖುಷಿ ಪಡುವ ರೀತಿ ಕೂತಿರುತ್ತೀರಿ ಎಂದರು.
Dec 22, 2021, 1:59 pm IST

ವಿಧಾನಸಭೆ ಕಲಾಪದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಪಸ್ ಆಗಿದ್ದಾರೆ. ನೆಗಡಿಯಿಂದ ಬಳಲುತ್ತಿರುವ ಅವರು ಮಧ್ಯಾಹ್ನದ ತನಕ ವಿಶ್ರಾಂತಿ ಪಡೆಯಲಿದ್ದು, ಬಳಿಕ ಸದನಕ್ಕೆ ಆಗಮಿಸಲಿದ್ದಾರೆ.
Dec 22, 2021, 12:58 pm IST

ರಾಯಭಾಗ ಪಟ್ಟಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳ ಜೊತೆ ಮಾತನಾಡಿದರು, "ನಮ್ಮ ಸಂವಿಧಾನ ದೊಡ್ಡ ಮಟ್ಟದ ಸ್ವಾತಂತ್ರ್ಯ ನೀಡಿದೆ. ಸ್ವಾತಂತ್ರ್ಯ ದುರುಪಯೋಗ ಆಗಬಾರದು. ಸಾವಿರಾರು ಕುಟುಂಬಗಳನ್ನು ಮತಾಂತರ ಮಾಡಿ ದೇಶದಲ್ಲಿ ಗಲಭೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
Dec 22, 2021, 12:14 pm IST

ಸುವರ್ಣ ವಿಧಾನಸೌದಲ್ಲಿ ಮಾಧ್ಯಮಗಳ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು, "ಮತಾಂತರ ಕಾಯ್ದೆಯನ್ನು ಸರಕಾರದವರು ಕಳ್ಳರ ಹಾಗೆ ಜಾರಿಗೆ ತರಲು ಹೊರಟಿದ್ದಾರೆ. ಕಾಯ್ದೆಯ ವಿರುದ್ಧ ಸದಸನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ. ಸದನದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಚಾರಗಳಿವೆ. 2019ರ ನೆರೆಯಿಂದ ಮನೆ ಕಳೆದುಕೊಂಡ ಜನರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ" ಎಂದು ಆರೋಪಿಸಿದರು.
Dec 22, 2021, 11:49 am IST

ಯಾರನ್ನೂ ಕೂಡಾ ಬಲವಂತವಾಗಿ ಮತಾಂತರ ಮಾಡಬಾರದು. ಆಸೆ, ಆಮಿಷವೊಡ್ಡಿ, ಬಡತನ ದುರುಪಯೋಗ ಮಾಡಿಕೊಂಡು ಮತಾಂತರ ಮಾಡಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
Dec 22, 2021, 11:24 am IST

ಮತಾಂತರ ನಿಷೇಧ ವಿಧೇಯಕವನ್ನು ನಾವು ವಿರೋಧಿಸುತ್ತೇವೆ. ನಮ್ಮಲ್ಲಿರುವ ಲೋಪಗಳನ್ನು ಮೊದಲು ಸರಿಪಡಿಸಬೇಕು. ರಾಜ್ಯದಲ್ಲಿರುವ ಹಿಂದುಳಿದವರನ್ನು ಆರ್ಥಿಕವಾಗಿ ಮೊದಲು ಸಧೃಢಗೊಳಿಸಬೇಕು. ಆಗ ಯಾವುದೇ ರೀತಿಯ ಮತಾಂತರ ನಡೆಯುವುದಿಲ್ಲ. ಇದು ಕೇವಲ ವೋಟ್‌ ಬ್ಯಾಂಕ್‌ಗಾಗಿ ಮಾಡಿದ ವಿಧೇಯಕ ಎಂದು ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
Dec 22, 2021, 11:19 am IST

ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತಾಂತರ ನಿಯಂತ್ರಣ ಕಾಯ್ದೆಗೆ ಕಾಂಗ್ರೆಸ್ ವಿರೋಧ ಮಾಡುತ್ತಿರುವುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, "ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡುವುದು ಹಿಂದಿನಿಂದಲೂ ನಡೆದಿದೆ. ಅದು ದೇಶದ ಭದ್ರತೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್ ಪಾಕಿಸ್ತಾನ ಪಕ್ಷ, ಅವರ ಪಕ್ಷದ ಅಧ್ಯಕ್ಷರೇ ಹಿಂದೂಗಳಲ್ಲ. ಮಸೂದೆಯಲ್ಲಿ ಯಾವುದೇ ಧರ್ಮದ ಹೆಸರು ತೆಗದುಕೊಂಡಿಲ್ಲ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವವರಿಗೆ ಇದು ಅನ್ವಯವಾಗುತ್ತದೆ" ಎಂದು ಹೇಳಿದರು.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+