ವಿಧಾನಪರಿಷತ್ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?
ಬೆಂಗಳೂರು, ಜೂನ್ 10 : ವಿಧಾನಪರಿಷತ್ ಗೆ 7 ಹೊಸ ಶಾಸಕರು ಪ್ರವೇಶ ಪಡೆದಿದ್ದಾರೆ. ರಾಜ್ಯದ ರಾಜಕೀಯ ಪಡಸಾಲೆಯಲ್ಲಿನ ಬದಲಾವಣೆಗಳ ಪ್ರತೀಕ ಎಂಬಂತೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
ಸಾಮಾನ್ಯ ಜನರಿಗೆ ಈ ಫಲಿತಾಂಶದ ಮೇಲೆ ಅಂಥ ಆಸಕ್ತಿ ಇಲ್ಲದಿರಬಹುದು. ಆದರೆ ರಾಜಕಾರಣಿಗಳಿಗೆ ಬಹಳ ಮುಖ್ಯವಾಗಿತ್ತು. ಜೆಡಿಎಸ್ ಗೆ ಫಲಿತಾಂಶ ಸರಿಯಾದ ಹೊಡೆತವನ್ನೇ ನೀಡಿದ್ದು ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ಎದುರು ತಂದು ನಿಲ್ಲಿಸಿದೆ.[ಪರಿಷತ್ ಫಲಿತಾಂಶ: ಜೆಡಿಎಸ್ಗೆ ನಷ್ಟ, ಅರಳಿದ ಕಮಲ]
ಕಾಂಗ್ರೆಸ್ ಗೆ ಯಥಾ ಸ್ಥಿತಿ, ಬಿಜೆಪಿಗೆ ಗಳಿಕೆ, ಜೆಡಿಎಸ್ ಗೆ ನಷ್ಟ ಎಂದು ಒಂದು ವಾಕ್ಯದಲ್ಲಿ ಫಲಿತಾಂಶ ಹೇಳಬಹುದು. ಈ ಬಗೆಯ ಫಲಿತಾಂಶ ಮೂಡಿಬರಲು ಕಾರಣಗಳು ಏನು ಎಂಬುದನ್ನು ಒಂದು ಕ್ಷಣ ಯೋಚನೆ ಮಾಡಲೇಬೇಕಾಗುತ್ತದೆ. ಯಾರಿಗೆ ಲಾಭ? ಯಾರಿಗೆ ನಷ್ಟ? ವಿವರ ಮುಂದಿದೆ..

ಬಿಜೆಪಿಗೆ ಬಿಎಸ್ ವೈ ಬಲ
ಬಿಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಮೇಲೆ ರಾಜ್ಯ ರಾಜಕಾರಣದಲ್ಲಿ ಒಂದು ಬಗೆಯ ಸಂಚಲನ ಉಂಟಾಗಿದ್ದು ಸುಳ್ಳಲ್ಲ. ಬಿಎಸ್ ವೈ ಅಧ್ಯಕ್ಷರಾದ ಮೇಲೆ ಎದುರಿಸಿದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ಲಾಭವೇ ಆಗಿದೆ.

ಸೋಮಣ್ಣ- ಲೆಹರ್ ಸಿಂಗ್ ಗೆಲುವು
ಬಿಜೆಪಿಯ ಎರಡನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವು ಬಿಎಸ್ ವೈ ರಾಜಕೀಯ ತಂತ್ರಕ್ಕೆ ಸಾಕ್ಷಿ. ವಿ ಸೋಮಣ್ಣ ಆಯ್ಕೆ ವೇಳೆ ಉಂಟಾಗಿದ್ದ ಗೊಂದಲ ನಿವಾರಣೆ, ಪಕ್ಷೇತರರ ಬೆಂಬಲ ಪಡೆದುಕೊಂಡಿದ್ದು ಬಿಎಸ್ ವೈ ಚಾಣಾಕ್ಷ ನೀತಿಗೆ ಮತ್ತೊಂದು ಉದಾಹರಣೆ.

ಶಾಸಕರ ಮೇಲೆ ಹಿಡಿತ ಕಳೆದುಕೊಂಡ ಜೆಡಿಎಸ್
ಇತ್ತೀಚಿಗೆ ಜೆಡಿಎಸ್ ನ ವಾತಾವರಣ ಅಷ್ಟೇನೂ ಸರಿ ಇಲ್ಲ. ಶಾಸಕರಾದ ಜಮೀರ್ ಅಹಮದ್ ಖಾನ್, ಚೆಲುವರಾಯಸ್ವಾಮಿ, ಬಾಲಕೃಷ್ಣ ಬಹಿರಂಗವಾಗಿಯೇ ಪಕ್ಷದ ವಿರುದ್ಧ ಮಾತುಗಳನ್ನು ಆಡುತ್ತಿದ್ದಾರೆ. ಜಮೀರ್ ಮತದಾನದ ವೇಳೆಯೂ ಜೆಡಿಎಸ್ ವರಿಷ್ಠರಿಗೆ ಟಾಂಗ್ ನೀಡಿದ್ದರು

ಜೆಡಿಎಸ್ ಗೆ ಸವಾಲಾದ ಜಮೀರ್
ಪಕ್ಷದ ವರಿಷ್ಠರು ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಲ್ಲ. ಇಂದು ಮಧ್ಯಾಹ್ನದ ತನಕವೂ ಕಾದೆವು ಯಾರಿಂದಲೂ ಕರೆ ಬರಲಿಲ್ಲ. ಆದ್ದರಿಂದ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದೆ' ಎಂದು ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಜೆಡಿಎಸ್ ಗೆ ಸಕ್ಕಿದ್ದು 35 ಮತ
ಜೆಡಿಎಸ್ ನ 40 ಜನ ಶಾಸಕರಿದ್ದರೂ ಅವರಿಗೆ ಸಿಕ್ಕಿದ್ದು 35 ಮತ. ಜೆಡಿಎಸ್ ಎರಡನೇ ಅಭ್ಯರ್ಥಿ ಡಾ.ವೆಂಕಟಪತಿಗೆ ಬರಬೇಕಿದ್ದ 5 ಮತಗಳು ಅಡ್ಡ ಮತದಾನ ಆಯಿತು.

ಬಸವರಾಜ್ ಹೊರಟ್ಟಿಗೂ ಸೋಲಾದರೆ ಮುಂದೇನು?
ಪದವೀಧರರ ಕ್ಷೇತ್ರದ ಚುನಾವಣೆ ಮುಗಿದಿದ್ದು ಜೆಡಿಎಸ್ ಬಸವರಾಜ್ ಹೊರಟ್ಟಿ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಒಂದು ವೇಳೆ ಅಲ್ಲಿಯೂ ಜೆಡಿಎಸ್ ಗೆ ಸೋಲಾದರೆ ಪಕ್ಷದ ಅಸ್ತಿತ್ವಕ್ಕೆ ಮತ್ತಷ್ಟು ಧಕ್ಕೆ ಬರುವುದರಲ್ಲಿ ಅನುಮಾನ ಇಲ್ಲ.

ಕಾಂಗ್ರೆಸ್ ಯಥಾಸ್ಥಿತಿ
ಕಾಂಗ್ರೆಸ್ ಮೇಲೆ ಈ ಫಲಿತಾಂಶ ಅಷ್ಟೇನೂ ಪರಿಣಾಮ ಬೀರಲ್ಲ. ಕಾಂಗ್ರೆಸ್ ಬಳಿ ಸದಸ್ಯರಿದ್ದು ಯಥಾ ಸ್ಥಿತಿ ಮುಂದುವರಿಯಲಿದೆ. ಆದರೆ ಹೊಸ ಮುಖ ಅದರಲ್ಲೂ ವಿಶೇಷವಾಗಿ ರಿಜ್ವಾನ್ ಅರ್ಷದ್ ಮೇಲ್ಮನೆ ಪ್ರವೇಶ ಮಾಡದ್ದಾರೆ.












Click it and Unblock the Notifications