ವರಿಷ್ಠರ ಮುಂದಿನ ತೀರ್ಮಾನ ಇಂದು ರಿವೀಲ್ ಆಗುತ್ತೆ: ಈಶ್ವರಪ್ಪ
ಬೆಂಗಳೂರು, ಜುಲೈ 26: ಕಳೆದ ಕೆಲವು ದಿನಗಳಿಂದ ಗೊಂದಲದ ಗೂಡಾಗಿರುವ ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯ ವಿಚಾರ ಇಂದು ಅಥವಾ ನಾಳೆ ಬಗೆಹರಿಯಲಿದೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದ ಈಶ್ವರಪ್ಪ, "ನಮ್ಮಲ್ಲಿ ಕೆಲವೊಂದು ಗೊಂದಲಗಳು ಇರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಎಲ್ಲಾ ಸಮಸ್ಯೆಗಳಿಗೆ ಇಂದು ಅಥವಾ ನಾಳೆ ಪರಿಹಾರ ಸಿಗಲಿರುವುದು ನಿಶ್ಚಿತ"ಎಂದು ಈಶ್ವರಪ್ಪ ಹೇಳಿದರು.
"ಅಭಿವೃದ್ದಿಯ ವಿಚಾರಕ್ಕೆ ಬಂದಾಗ ಕಳೆದ ಎರಡು ವರ್ಷಗಳಲ್ಲಿ ನಮ್ಮ ಪಕ್ಷದ ಸಾಧನೆಯ ಬಗ್ಗೆ ನಮಗೆ ತೃಪ್ತಿಯಿದೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಅಭಿವೃದ್ದಿ ಕೆಲಸಗಳು ನಮ್ಮ ಮುಂದಿವೆ" ಎಂದು ಈಶ್ವರಪ್ಪ ಬೆನ್ನು ತಟ್ಟಿಕೊಂಡರು.

"ಯಡಿಯೂರಪ್ಪನವರೇ ಮುಂದುವರಿಯಲಿದ್ದಾರೆ ಎನ್ನುವುದು ನಮಗೆ ತಿಳಿದಿರುವ ವಿಚಾರ. ಆದರೆ, ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೋ, ಇಲ್ಲವೋ ಎನ್ನುವುದು ಕೇವಲ ಯಡಿಯೂರಪ್ಪ ಮತ್ತು ನಮ್ಮ ಹೈಕಮಾಂಡಿಗೆ ಮಾತ್ರ ಗೊತ್ತಿರುವಂತಹ ವಿಚಾರ"ಎಂದು ಈಶ್ವರಪ್ಪ ಹೇಳಿದರು.
"ಗೊತ್ತಿಲ್ಲದ ವಿಚಾರವನ್ನು ನಾನು ಮಾತನಾಡಲು ಹೋಗುವುದಿಲ್ಲ. ನಾಯಕತ್ವ ಬದಲಾವಣೆಯ ವಿಚಾರ, ನನಗೇನೂ ತಿಳಿದಿಲ್ಲ. ಆದರೆ, ಈ ಎಲ್ಲಾ ಗೊಂದಲವು ಇನ್ನೆರಡು ದಿನಗಳಲ್ಲಿ ಬಗೆಹರಿಯಲಿದೆ"ಎಂದು ಈಶ್ವರಪ್ಪ ಭರವಸೆ ವ್ಯಕ್ತ ಪಡಿಸಿದರು.
"ಯಡಿಯೂರಪ್ಪನವರು ಉತ್ತಮ ಸರಕಾರವನ್ನು ನೀಡುತ್ತಿದ್ದಾರೆ"ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಗೋವಾದಲ್ಲಿ ಹೇಳಿದ ನಂತರ, ಮುಖ್ಯಮಂತ್ರಿ ಬದಲಾವಣೆ ವಿಚಾರ, ಇನ್ನಷ್ಟು ಕ್ಲಿಷ್ಟವಾಗುತ್ತಾ ಸಾಗುತ್ತಿದೆ.












Click it and Unblock the Notifications