'ನಾನು ಅವರಿಗೆ ಹಣ ಕೊಟ್ಟು ಸಾಕುವಷ್ಟು ಶ್ರೀಮಂತನಲ್ಲ'
ರಾಮನಗರ, ಆಗಸ್ಟ್ 18 : 'ಅಮಾನತುಗೊಂಡಿರುವ ಎಂಟು ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದು ಖಚಿತ. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವುದಿಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ರಾಮನಗರ ತಾಲೂಕಿನ ರಾಂಪುರ ದೊಡ್ಡಿ ಗ್ರಾಮದಲ್ಲಿ ಬುಧವಾರ ಮಾತನಾಡಿದ ಕುಮಾರಸ್ವಾಮಿ ಅವರು, 'ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಏಕಾಏಕಿ ಪಕ್ಷದಿಂದ ತೆಗೆದುಹಾಕಲು ಸಾಧ್ಯವಿಲ್ಲ. ಅವರಿಗೆ ಈಗ ನೋಟಿಸ್ ಜಾರಿಗೊಳಿಸಲಾಗಿದೆ, ಪಕ್ಷದಿಂದ ಅಮಾನತುಗೊಳಿಸಲಾಗಿದೆ' ಎಂದರು.['ಶಾಸಕರು ನನ್ನ ಜೊತೆ ಬಂದು ಸಾಲಗಾರರಾಗುವುದು ಬೇಡ']
'ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು 8 ಶಾಸಕರನ್ನು ಅಮಾತನು ಮಾಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಅದಕ್ಕೂ ಮುನ್ನ ಅವರ ಕ್ಷೇತ್ರದ ಜನರು ಅವರನ್ನು ಉಚ್ಛಾಟಿಸುತ್ತಾರೆ. ಶಾಸಕರನ್ನು ಪುನಃ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವುದಿಲ್ಲ' ಎಂದು ಹೇಳಿದರು.[ಜೆಡಿಯುನತ್ತ ಹೊರಟ ಜೆಡಿಎಸ್ ನ 8 ಶಾಸಕರು?]
'ಐವತ್ತು ವರ್ಷಗಳಿಂದ ರಾಜಕಾರಣ ಮಾಡುತ್ತಿರುವ, ಪ್ರಧಾನ ಮಂತ್ರಿಯೂ ಆದ ಎಚ್.ಡಿ. ದೇವೇಗೌಡರ ಬಗ್ಗೆ ಎಂಟು ಶಾಸಕರು ಆಡಿರುವ ಮಾತುಗಳನ್ನು ಸಹಿಸಲಾಗದು. ಅವರಿಗೆ ನಮ್ಮ ಸಖ್ಯ ಬೇಡವಾಗಿರುವಾಗ ದೂರ ಹೋಗುವುದು ಉತ್ತಮ' ಎಂದು ತಿಳಿಸಿದರು.....

'ಹಣ ಕೊಡುವಷ್ಟು ಶ್ರೀಮಂತನಲ್ಲ'
'ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಎಂಟು ಶಾಸಕರು, ತಮ್ಮ ಕಷ್ಟ ತೀರಿಸಿಕೊಳ್ಳುವ ಸಲುವಾಗಿ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಅವರಿಗೆ ಹಣ ಕೊಟ್ಟು ಸಾಕುವಷ್ಟು ಶ್ರೀಮಂತನಲ್ಲ. ಪಾಪ ನನ್ನಿಂದ ಇವರು ಸಾಲಗಾರರಾಗುವುದು ಬೇಡ. ತಮಗೆ ಬೇಕಾದ ಕಡೆ ಹೋಗಿ ಶ್ರೀಮಂತರಾಗಲಿ' ಎಂದು ಕುಮಾರಸ್ವಾಮಿ ಹೇಳಿದರು.

'ಪ್ರಾಮಾಣಿಕರಾಗಿ ಇರುತ್ತಾರೆ ಎಂದು ಏನು ಗ್ಯಾಂಟಿ'
'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಾಗಿ ಅವರೇ ಹೇಳಿ ಕೊಂಡಿದ್ದಾರೆ. ಆಗ ನಾನು ಮುಖ್ಯಮಂತ್ರಿಯಾಗಿ ಇವರನ್ನು ಸಚಿವರನ್ನಾಗಿ ಮಾಡಿದರೆ ಪ್ರಾಮಾಣಿಕರಾಗಿ ಇರುತ್ತಾರೆ ಎಂದು ಏನು ಗ್ಯಾರಂಟಿ' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

'ದೂರು ಹೋಗುವುದು ಒಳಿತು'
'ಈ ಎಂಟು ಶಾಸಕರು ಐವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದು, ಪ್ರಧಾನ ಮಂತ್ರಿಯೂ ಆದ ದೇವೇಗೌಡರ ಬಗ್ಗೆ ಆಡಿರುವ ಮಾತುಗಳನ್ನು ಸಹಿಸಲಾಗದು. ಅವರಿಗೆ ನಮ್ಮ ಸಖ್ಯ ಬೇಡವಾಗಿರುವಾಗ ದೂರ ಹೋಗುವುದು ಒಳಿತು' ಎಂದು ಕುಮಾರಸ್ವಾಮಿ ಹೇಳಿದರು.

ಅಮಾನತುಗೊಂಡಿರುವ ಶಾಸಕರು
ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ) ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ).

ಎಬಿವಿಪಿ ನಾಯಕರಿಗೆ ಸಲಹೆ
ಬೆಂಗಳೂರಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಬಗ್ಗೆ ಮಾತನಾಡಿದ ಅವರು, 'ಯಾರೋ ನಾಲ್ಕು ಮಂದಿ ಘೋಷಣೆ ಕೂಗಿದ ಮಾತ್ರಕ್ಕೆ ದೇಶದ ಹಿತಾಸಕ್ತಿಗೆ ಧಕ್ಕೆ ಆಗುವುದಿಲ್ಲ. ಪ್ರತಿಭಟನೆ ಮಾಡಿದ ಮಾತ್ರಕ್ಕೆ ನಾಳೆ ಕಾಶ್ಮೀರ ಸಮಸ್ಯೆ ಪರಿಹಾರವಾಗುವುದಿಲ್ಲ. ಎಬಿವಿಪಿಯವರಿಗೆ ನಿಜವಾದ ಕಾಳಜಿ ಇದ್ದರೆ ಕೇಂದ್ರದಲ್ಲಿರುವ ತಮ್ಮದೇ ನಾಯಕರ ಮನವೊಲಿಸಿ ಮಹಾದಾಯಿ ನದಿ ನೀರು ಬಿಡಿಸಲಿ' ಎಂದು ಕುಮಾರಸ್ವಾಮಿ ಸಲಹೆ ನೀಡಿದರು.












Click it and Unblock the Notifications