ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಮಹತ್ವದ ಆದೇಶ
ಬೆಂಗಳೂರು, ಜನವರಿ 28: ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ವಿಚಾರದಲ್ಲಿ ಮಹತ್ವದ ಆದೇಶವನ್ನು ಹೊರಡಿಸಿದೆ. ಮುಂಬಡ್ತಿ ನೀಡುವ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ಲಾಗ್) ಹುದ್ದೆಗಳನ್ನು ಗುರುತಿಸುವ ಕುರಿತು ಸರ್ಕಾರ ಆದೇಶವನ್ನು ಹೊರಡಿಸಿದೆ.
ಈ ಕುರಿತು ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇರ ನೇಮಕಾತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ ಲಾಗ್) ಹುದ್ದೆಗಳನ್ನು ಗುರುತಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಮಾನ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು ಇವರ ಪತ್ರ ದಿನಾಂಕ 09-01-2025, ದಿನಾಂಕ 16.01.2025ರಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು, ಇಲ್ಲಿ ನಡೆದ ಸಭೆಯ ನಡಾವಳಿಗಳನ್ನು ಉಲ್ಲೇಖಿಸಲಾಗಿದೆ.
ಆದೇಶದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಕ್ ಲಾಗ್ ಸಚಿವ ಸಂಪುಟ ಉಪ ಸಮಿತಿ ಸಭೆಯ ನಿರ್ಣಯದಂತೆ, ಸರ್ಕಾರದ ವಿವಿಧ ಇಲಾಖೆಗಳು/ ನಿಯಮಗಳು/ ಮಂಡಳಿಗಳು/ ವಿಶ್ವವಿದ್ಯಾನಿಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಗುರುತಿಸಲು ತನಿಖಾ ತಂಡವನ್ನು ರಚಿಸಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ, ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಿರುವ ಮೀಸಲಾತಿ ನಿಯಮಗಳನ್ವಯ ನೇರ ನೇಮಕಾತಿ ಮತ್ತು ಮುಂಬಡ್ತಿಯನ್ನು ಅನುಷ್ಠಾನಗೊಳಿಸಿರುವ ಹಾಗೂ ಬ್ಯಾಕ್ಲಾಗ್ ಹುದ್ದೆಗಳನ್ನು ಪರಿಶೀಲಿಸಲು ಸದರಿ ಆಯೋಗದ ತಂಡವನ್ನು ನೇಮಿಸಿರುತ್ತಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಮೂನೆ-01 & 02ರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿಯನ್ನು ಒದಗಿಸಲು ತಿಳಿಸಿರುತ್ತಾರೆ.
ಇಲಾಖೆಯಲ್ಲಿ 1978 ರಿಂದ 2003ರ ವರೆಗೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಾಧಿಕಾರಿಯು ರಾಜ್ಯದ 4 ವಿಭಾಗೀಯ ಕಛೇರಿಗಳ ಸಹನಿರ್ದೇಶಕರಾಗಿದ್ದು, 2003ನೇ ಸಾಲಿನಿಂದ ನೇಮಕಾತಿ ಪ್ರಾಧಿಕಾರಿಗಳು ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು ಆಗಿರುತ್ತಾರೆ ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಯು 35 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಾಗಿರುವ ವಿಷಯವನ್ನು ಮಾನ್ಯ ಆಯೋಗದ ಗಮನಕ್ಕೆ ತರಲಾಗಿದೆ.
ಮಾನ್ಯ ಆಯೋಗವು ನಮೂನೆ-01 & 02 ಮಾಹಿತಿ/ ದಾಖಲೆಗಳೊಂದಿಗೆ ಖುದ್ದು ಹಾಜರಾಗಿ ಆಯೋಗವು ಅಪೇಕ್ಷಿಸಿರುವ ಮಾಹಿತಿಯನ್ನು ಒದಗಿಸಲು ಸಂಬಂಧಪಟ್ಟ ನೇಮಕಾತಿ/ ಬಡ್ತಿ ನೀಡುವ ಕಛೇರಿಯ ಜವಾಬ್ದಾರಿಯುತ ಅಧಿಕಾರಿಗಳನ್ನು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು, ಇಲ್ಲಿಗೆ ನಿಯೋಜಿಸಲು ಸೂಚಿಸಿರುತ್ತಾರೆ.
ಪ್ರಯುಕ್ತ, ಆಯೋಗವು ನೀಡಿರುವ ನಮೂನೆ-01 & 02 ಅನ್ನು ಈ ಪತ್ರಕ್ಕೆ ಲಗತ್ತಿಸುತ್ತಾ ಈ ಕೆಳಕಂಡ ವಿಭಾಗೀಯ ಕಛೇರಿಗಳ ನೇಮಕಾತಿ ಪ್ರಾಧಿಕಾರಿಗಳು, ಜಿಲ್ಲಾ ನೇಮಕಾತಿ ಪ್ರಾಧಿಕಾರಿಗಳು ಮತ್ತು ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳ ಕಚೇರಿಯಿಂದ ಈ ಪ್ರಕ್ರಿಯೆಗಳ ಸಂಬಂಧ ಜವಾಬ್ದಾರಿಯುತ ಅಧಿಕಾರಿಗಳನ್ನು ಸೂಚಿತ ದಿನಾಂಕದಂದು ಮಾಹಿತಿ/ ದಾಖಲೆಗಳೊಂದಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಕಛೇರಿಯಲ್ಲಿ ತಪ್ಪದೇ ಹಾಜರಾಗಿ ಅಪೇಕ್ಷಿತ ಮಾಹಿತಿಯನ್ನು ಸಲ್ಲಿಸಲು ನಿಯೋಜಿಸುವುದು.
ಈ ಮಾಹಿತಿಯನ್ನು ಸಲ್ಲಿಸಿರುವ ಬಗ್ಗೆ ಈ ಕಛೇರಿಗೆ ವರದಿಯನ್ನು ಸಲ್ಲಿಸಲು ತಿಳಿಸಿದೆ. ಈ ವಿಷಯದಲ್ಲಿನ ಯಾವುದೇ ವಿಳಂಬ ಮಾಡದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸೂಚಿಸಿದೆ ಎಂದು ತಿಳಿಸಿದೆ.












Click it and Unblock the Notifications