IAS IPS Transfer: ಮುನೀಶ್ ಮೌದ್ಗಿಲ್, ಚಂದ್ರಗುಪ್ತ ಸೇರಿ ಹಲವರಿಗೆ ಮಹತ್ವದ ಜವಾಬ್ದಾರಿ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ನೂತನ ಸರ್ಕಾರ ಭಾರಿ ಕಸರತ್ತು ನಡೆಸುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಆಡಳಿತ ಆರಂಭಿಸಿದ ಬೆನ್ನಲ್ಲೇ, ಉನ್ನತ ಮಟ್ಟದ ಆಡಳಿತಾತ್ಮಕ ಬದಲಾವಣೆಗಳು ವೇಗ ಪಡೆದುಕೊಂಡಿವೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿದ್ದ ಪ್ರಮುಖ ಅಧಿಕಾರಿಗಳ ಸ್ಥಾನಪಲ್ಲಟವಾಗುತ್ತಿದ್ದು, ಮುಖ್ಯಮಂತ್ರಿಗಳು ತಮಗೆ ಆಪ್ತವಾಗಿರುವ ಮತ್ತು ದಕ್ಷ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ, ರಾಜ್ಯ ಸರ್ಕಾರವು ಜೂನ್ 7ರಂದು ತಡರಾತ್ರಿ ಆರು ಪ್ರಮುಖ ಐಎಎಸ್ ಅಧಿಕಾರಿಗಳು ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಮುನೀಶ್ ಮೌದ್ಗಿಲ್ಗೆ ಸಿಎಂ ಕಚೇರಿಯ ಹೊಣೆ
ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖವಾಗಿ ಗಮನ ಸೆಳೆದಿರುವುದು ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರ ನೇಮಕಾತಿ. ಪ್ರಸ್ತುತ ಬಿಬಿಎಂಪಿಯ ಆಡಳಿತ, ಕಂದಾಯ ಮತ್ತು ಐಟಿ ವಲಯದ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಮುನೀಶ್ ಮೌದ್ಗಿಲ್ ಅವರಿಗೆ ಸರ್ಕಾರವು ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನೀಡಿದೆ.

ನೂತನವಾಗಿ ಸೃಷ್ಟಿಸಲಾದ 'ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆ ಅನುಷ್ಠಾನ)' ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಕಾಲಮಿತಿಯೊಳಗೆ ಜಾರಿಗೆ ತರಲು ಈ ನೇಮಕ ಸಹಕಾರಿಯಾಗಲಿದೆ ಎನ್ನಲಾಗಿದೆ. ಮತ್ತೊಂದೆಡೆ, ಈ ಹಿಂದೆ ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಅಂಜುಮ್ ಪರ್ವೇಝ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಐಎಎಸ್ ಅಧಿಕಾರಿಗಳ ಜಾಗ ಪಲ್ಲಟ
ಉಳಿದಂತೆ ಇನ್ನುಳಿದ ಪ್ರಮುಖ ಇಲಾಖೆಗಳಲ್ಲೂ ದೊಡ್ಡ ಬದಲಾವಣೆಗಳಾಗಿವೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದ್ದು, ಇವರು ಡಾ. ಪ್ರಸಾದ್ ಎನ್.ವಿ. ಅವರ ಜಾಗವನ್ನು ತುಂಬಲಿದ್ದಾರೆ. ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಕಾವೇರಿ ಬಿ.ಬಿ. ಅವರನ್ನು ನಗರಾಭಿವೃದ್ಧಿ ಇಲಾಖೆಯ (ನಗರಾಡಳಿತ ಮತ್ತು ಪೌರಾಡಳಿತ) ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಾ. ವೆಂಕಟೇಶ್ ಎಂ.ವಿ. ಅವರನ್ನು ಸಹಕಾರ ಸಂಘಗಳ ನಿಬಂಧಕರಾಗಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ. ಸೆಲ್ವಮಣಿ ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ (ಯೋಗೀಶ್ ಎಂ.ಪಿ ಅವರ ಜಾಗಕ್ಕೆ) ವರ್ಗಾವಣೆ ಮಾಡಲಾಗಿದೆ.
ಗುಪ್ತಚರ ಇಲಾಖೆಗೆ ಹೊಸ ಬಾಸ್, ಸಿಐಡಿಗೆ ಪ್ರಣಬ್ ಮೊಹಾಂತಿ
ಐಎಎಸ್ ಅಧಿಕಾರಿಗಳ ಜೊತೆಗೆ ಪೊಲೀಸ್ ಇಲಾಖೆಯಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಅತ್ಯಂತ ಸಂವೇದನಾಶೀಲವಾಗಿರುವ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಲಾಭೂ ರಾಮ್ ಅವರನ್ನು ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಬೆಂಗಳೂರಿನ ಭದ್ರತಾ ವಿಭಾಗದ ಐಜಿಪಿ ಆಗಿದ್ದ ಡಾ. ಚಂದ್ರಗುಪ್ತ ಅವರನ್ನು ನೂತನ ಗುಪ್ತಚರ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಆಡಳಿತದ ಮೇಲೆ ಹಿಡಿತ ಸಾಧಿಸಲು ಗುಪ್ತಚರ ವಿಭಾಗ ಬಲಿಷ್ಠವಾಗಿರಬೇಕು ಎಂಬ ಕಾರಣಕ್ಕೆ ಸಿಎಂ ಈ ನೇಮಕಾತಿ ಮಾಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿದ್ದ 1994ರ ಬ್ಯಾಚ್ನ ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರಣಬ್ ಮೊಹಾಂತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿ (CID), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ ಅವರಿಗೆ ಸೈಬರ್ ಅಪರಾಧಗಳ ವಿಭಾಗದ ಡಿಜಿಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ. ಒಟ್ಟಾರೆಯಾಗಿ, ಈ ಆಡಳಿತಾತ್ಮಕ ಪುನರ್ರಚನೆಯು ಸರ್ಕಾರದ ಮುಂಬರುವ ದಿನಗಳ ಕಾರ್ಯವೈಖರಿಗೆ ದಿಕ್ಸೂಚಿಯಾಗಿದೆ.














Click it and Unblock the Notifications