ಲಾಬಿಗಳ ನಡುವೆಯೂ ಬೇಡಿಕೆ ಕಳೆದುಕೊಂಡ 'ಗೃಹ ಖಾತೆ'
ಬೆಂಗಳೂರು, ಜೂನ್ 27: ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಗೃಹ ಖಾತೆಗೆ ನೀಡಿದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಮೂಲಕ ಪ್ರಭಾವಿ 'ಗೃಹ ಖಾತೆ' ಖಾಲಿಯಾಗಿದೆ. ವಿಶೇಷವೆಂದರೆ ಗೃಹ ಖಾತೆ ತಮಗೆ ಕೊಡಿ ಎಂದು ಯಾರೂ ಕೇಳುತ್ತಿಲ್ಲ.
ಒಮ್ಮೆ ಇಂಧನ ಸಚಿವ ಡಿಕೆ ಶಿವಕುಮಾರ್ ಗೃಹ ಖಾತೆಗೆ ಆಸಕ್ತಿ ತೋರಿದ್ದರು. ನಂತರ ಹಿಂದೇಟು ಹಾಕಿದ್ದರು. ಬಳಿಕ ಯಾರೂ ಗೃಹ ಖಾತೆಯಂಥ ಮಹತ್ವದ ಖಾತೆ ನಿಭಾಯಿಸಲು ಮುಂದೆ ಬರುತ್ತಿಲ್ಲ. ಈ ಹಿಂದೆ ಗೃಹ ಖಾತೆ ನಿಭಾಯಿಸಿದ್ದ ಹಾಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ, ಕಾನೂನು ಸಚಿವ ಟಿಬಿ ಜಯಚಂದ್ರ ಗೃಹ ಖಾತೆ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಗೃಹ ಖಾತೆ ಸೂಕ್ಷ್ಮ ಖಾತೆಯಾಗಿದ್ದು 2018ರ ವಿಧಾನಸಭಾ ಚುನಾವಣೆಗೂ ಮುನ್ನ ವಿವಾದಗಳಿಗೆ ಸಿಲುಕಿ ಕಾಲ ಮೇಲೆ ಕಲ್ಲು ಹೊತ್ತು ಹಾಕಿಕೊಳ್ಳುವುದು ಬೇಡ ಎಂದು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.
ಇದೀಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೆಸರು ಈ ಸ್ಥಾನಕ್ಕೆ ಕೇಳಿ ಬರುತ್ತಿದೆ.
ಸಂಪುಟ ಭರ್ತಿ
ಸಂಪುಟದಲ್ಲಿ ಮೂರು ಪ್ರಮುಖ ಜಾತಿಗಳಿಗೆ ಸೇರಿದ ಸಚಿವರಾದ ಜಿ ಪರಮೇಶ್ವರ್ (ದಲಿತ), ಎಚ್ ವೈ ಮೇಟಿ (ಕುರುಬ) ಮತ್ತು ಎಚ್.ಎಸ್ ಮಹದೇವ ಪ್ರಸಾದ್ (ಲಿಂಗಾಯುತ)ರ ಸ್ಥಾನಗಳು ಖಾಲಿಯಾಗಿದ್ದು ಇದಕ್ಕೆ ಅದೇ ಸಮುದಾಯದವರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಾಂಭಾವ್ಯ ಸಚಿವರ ಪಟ್ಟಿಯಲ್ಲಿ ಹಿರಿಯರಾದ ಎಂಎಲ್ ಸಿ ಮೋಟಮ್ಮ, ಪಿ ನರೇಂದ್ರ ಸ್ವಾಮಿ, ಆರ್ ಬಿ ತಿಮ್ಮಾಪುರ ಹೆಸರು ದಲಿತ ಕೋಟಾದಡಿಯಲ್ಲಿ, ಎಚ್ ಎಂ ರೇವಣ್ಣ, ಸಿ ಎಸ್ ಶಿವಳ್ಳಿ, ಮತ್ತು ಬಿ ಜಿ ಗೋವಿಂದಪ್ಪ ಹೆಸರು ಕುರುಬ ಕೋಟಾದಲ್ಲಿ ಹಾಗೂ ಶಾಸಕ ಕೆ ಷಡಕ್ಷರಿ ಹೆಸರು ಲಿಂಗಾಯುತ ಕೋಟಾದಲ್ಲಿ ಕೇಳಿ ಬರುತ್ತಿದೆ.
ಅಂತಿಮವಾಗಿ ಯಾರು ಸಚಿವರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.