ನಮ್ಮ ಮೆಟ್ರೋ ಮಾರ್ಗ: ಮರಗಳನ್ನು ಸ್ಥಳಾಂತರಿಸಲು ಹೈಕೋರ್ಟ್ ಅನುಮತಿ
ಬೆಂಗಳೂರು, ಜೂನ್ 30: ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಸ್ಥಳಾಂತರಿಸಲು ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ.
ನಮ್ಮ ಮೆಟ್ರೋ 2ನೇ ಹಂತದಲ್ಲಿನ ನಾಗವಾರ-ಗೊಟ್ಟಿಗೆರೆ ಮಾರ್ಗದ ಹಲವು ಕಡೆ ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್ಸಿಎಲ್) ಹೈಕೋರ್ಟ್ ಅನುಮತಿ ನೀಡಿದೆ.
ತಜ್ಞರ ಸಮಿತಿ ಸಲಹೆಯಂತೆ ನಿಗಮವು ಮೆಟ್ರೋ ನಿರ್ಮಾಣಕ್ಕಾಗಿ ಈ ಮಾರ್ಗದಲ್ಲಿ ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಅಲ್ಲದೆ, 2021ರ ಮಾರ್ಚ್ನಿಂದ ಮೇ ತಿಂಗಳ ಅವಧಿಯಲ್ಲಿ ಈ ಕುರಿತು ಹಲವು ಅಧಿಸೂಚನೆಗಳನ್ನೂ ಹೊರಡಿಸಿತ್ತು.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸೂರಜ್ ಗೋವಿಂದ್ ರಾಜ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಅನುಮತಿ ನೀಡಿತು. ತೆರವುಗೊಳಿಸುವ ಮರಗಳಿಗೆ ಪರ್ಯಾಯವಾಗಿ ನೆಡಲಾಗುವ ಸಸಿಗಳ ವಿವರ ಒಳಗೊಂಡ ವರದಿ ನೀಡುವಂತೆಯೂ ಸೂಚಿಸಿತು.
'ಮರಗಳನ್ನು ಸ್ಥಳಾಂತರಿಸುವ ವೇಳೆ ತಾನು ನೇಮಿಸಿದ ಅಧಿಕಾರಿ ಅಥವಾ ವೃಕ್ಷ ಅಧಿಕಾರಿಯು ಹಾಜರಿರಬೇಕು. ಮರಗಳ ನಿರ್ವಹಣೆ ಮತ್ತು ಸಂರಕ್ಷಣೆ ಕುರಿತಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಎಂಆರ್ಸಿಎಲ್ನಿಂದ ಮಾಹಿತಿ ಪಡೆದು, ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು' ಎಂದೂ ಪೀಠವು ನಿರ್ದೇಶಿಸಿತು.
ನಮ್ಮ ಮೆಟ್ರೋ ಮಾರ್ಗದಲ್ಲಿ ಬರುವ 115 ಮರಗಳನ್ನು ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ಈ ಕುರಿತು ತಾಂತ್ರಿಕ ಸಲಹಾ ಸಮಿತಿ ನಿರ್ಧರಿಸಲಿದೆ. ಈ ಮರಗಳಲ್ಲಿ ಹೆಚ್ಚಿನವು ಹಳೆಯದಲ್ಲ ಹಾಗೂ ಮರಗಳನ್ನು ಕಡಿಯಲು ಬಯಸುವ ಅಧಿಕಾರಿಗಳು ಒಂದು ಮರದ ಬದಲು 10 ಸಸಿಗಳನ್ನು ನೆಡಬೇಕು ಎಂದು ನ್ಯಾಯಾಲಯದ ಆದೇಶವಿದೆ












Click it and Unblock the Notifications