ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ವಿದೇಶದಿಂದ ಜೀವ ಬೆದರಿಕೆ ಮೇಸೇಜ್
ಬೆಂಗಳೂರು, ಜುಲೈ 24: ಕರ್ನಾಟಕ ಹೈಕೋರ್ಟ್ನ ಕೆಲವು ನ್ಯಾಯಾಧೀಶರಿಗೆ ವಿದೇಶಿ ನಂಬರ್ನಿಂದ ಜೀವ ಬೆದರಿಕೆ ಸಂದೇಶ ಬಂದಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ.
ಕರ್ನಾಟಕ ಹೈಕೋರ್ಟ್ನ ಹಲವು ನ್ಯಾಯಾಧೀಶರಿಗೆ ಜೀವ ಬೆದರಿಕೆ ಇರುವ ಕುರಿತು ಕರ್ನಾಟಕದ ಹೈಕೋರ್ಟಿನ ಪತ್ರಿಕಾ ಸಂಪರ್ಕ ಅಧಿಕಾರಿ ಸೆಂಟ್ರಲ್ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ ನಂತರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕೆ. ಮುರಳೀಧರ್ ಅವರು ಜುಲೈ 14ರಂದು ದೂರು ದಾಖಲಿಸಿದ್ದಾರೆ. ಜುಲೈ 12 ರಂದು ರಾತ್ರಿ 7 ಗಂಟೆ ಸುಮಾರಿಗೆ ಅವರಿಗೆ ಹೈಕೋರ್ಟ್ನಿಂದ ಒದಗಿಸಿದ್ದ ಮೊಬೈಲ್ಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ವಾಟ್ಸಾಪ್ ಮೆಸೆಂಜರ್ನಲ್ಲಿ ಜೀವ ಬೆದರಿಕೆಯ ಸಂದೇಶಗಳು ಬಂದಿದ್ದವು ಎಂದು ತಿಳಿದು ಬಂದಿದೆ.
ಈ ಸಂದೇಶದಲ್ಲಿ ಮುರಳೀಧರ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್, ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣವರ್ (ನಿವೃತ್ತ), ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ನ್ಯಾಯಮೂರ್ತಿ ಕೆ. ನಟರಾಜನ್ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ (ನಿವೃತ್ತ) ಸೇರಿದಂತೆ ಹೈಕೋರ್ಟ್ನ ಆರು ನ್ಯಾಯಾಧೀಶರಿಗೆ 'ದುಬೈ ಗ್ಯಾಂಗ್' ಮೂಲಕ ಕೊಲ್ಲುವುದಾಗಿ ಹಿಂದಿ, ಉರ್ದು ಮತ್ತು ಇಂಗ್ಲಿಷ್ನಲ್ಲಿ ಬರೆದು ಬೆದರಿಕೆ ಹಾಕಲಾಗಿದೆ.
ಸಂದೇಶದಲ್ಲಿ ಐದು ಅನುಮಾನಾಸ್ಪದ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ಬೆದರಿಕೆ ಇತ್ತು. ಬೆದರಿಕೆ ಸಂದೇಶದಲ್ಲಿ ಪಾಕಿಸ್ಥಾನದ ಬ್ಯಾಂಕ್ ಖಾತೆಗೆ 50 ಲಕ್ಷ ರೂಪಾಯಿ ಪಾವತಿಸಲು ಬೇಡಿಕೆ ಇಡಲಾಗಿರುವುದನ್ನು ಜುಲೈ 14 ರಂದು ದಾಖಲಾದ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಮೇಸೆಜ್ ಬಂದಿರುವ ನಂಬರ್ ಪಾಕಿಸ್ತಾನದ ಅಲೈಡ್ ಬ್ಯಾಂಕ್ ಲಿಮಿಟೆಡ್ನ ಖಾತೆಯ ಸಂಖ್ಯೆಯನ್ನು ನೀಡಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಇದು ಪಾಕಿಸ್ತಾನದ ದುಷ್ಕರ್ಮಿಗಳ ಕೃತ್ಯವಾಗಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications