'ತಾಯಿ' ಎಂದರೆ ಯಾರು: ರಾಜ್ಯ ಹೈಕೋರ್ಟ್ ನೀಡಿದ ಮನಮಿಡಿಯುವ ತೀರ್ಪು
ತಾಯಿ ದೇವರಿಗೆ ಸಮಾನ, ತಾಯಿಯೇ ಮೊದಲ ಗುರು ಎಂದು ಬರೀ ಬಾಯಿ ಮಾತಿನಲ್ಲಿ ಹೇಳುವುದು, ಸಾಮಾಜಿಕ ತಾಣದಲ್ಲಿ ಬರೆದುಕೊಳ್ಳುವುದಲ್ಲ, ಜೀವನದಲ್ಲೂ ಹಾಗೇ ಇರಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯ ಅರ್ಜಿದಾರರೊಬ್ಬರಿಗೆ ಬುದ್ದಿವಾದ ಹೇಳಿದೆ.
ಮಕ್ಕಳು ತಾಯಿಯನ್ನು ಕೊಲ್ಲುವ, ಹಿಂಸಿಸುವ, ವೃದ್ದಾಶ್ರಮಕ್ಕೆ ಬಿಡುವ ಹತ್ತು ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಆದರೆ, ತಾಯಿ ಮಕ್ಕಳನ್ನು ಹಿಂಸಿಸುವ ಉದಾಹರಣೆ ವಿರಳಾತಿವಿರಳ. ಇದನ್ನೇ ಕರ್ನಾಟಕ ಹೈಕೋರ್ಟ್ ಉಚ್ಚರಿಸಿದೆ.
ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಮಗಳು ತನ್ನ ಹೆಸರಿಗೆ ಮಾಡಿಕೊಂಡಿದ್ದನ್ನು ಉಪ ವಿಭಾಗಾಧಿಕಾರಿಗಳು ರದ್ದುಗೊಳಿಸಿದ್ದರು. ಅಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ, ಮಗಳು ಹೈಕೋರ್ಟ್ ಮೆಟ್ಟಲೇರಿದ್ದರು. ಕೇಸಿನ ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಾಧೀಶರು ತಾಯಿಯ ಮಹತ್ವನ್ನು ಮಗಳಿಗೆ ಸಾರಿದರು.
"ಮಕ್ಕಳು ತಾಯಿಯ ವಿರುದ್ದ ಇರಬಹುದು, ಆದರೆ ತಾಯಿ ಮಕ್ಕಳ ವಿರುದ್ದ ಇರುವುದಿಲ್ಲ ಎನ್ನುವುದನ್ನು ನೀವು ಅರಿತುಕೊಳ್ಳಬೇಕು" ಎಂದು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ನ್ಯಾ. ಜ. ಸತೀಶ್ ಚಂದ್ರ ಶರ್ಮಾ, ತಾಯಿಯ ವಿರುದ್ದ ಕೋರ್ಟ್ ಮೆಟ್ಟಲೇರಿದ ಮಗಳಿಗೆ ಬುದ್ದಿವಾದವನ್ನು ಹೇಳಿದ್ದಾರೆ. ಏನಿದು ಪ್ರಕರಣ?

ನ್ಯಾ. ಸತೀಶ್ ಚಂದ್ರ ಶರ್ಮಾ ಅವರ ವಿಭಾಗೀಯ ಪೀಠದ ಮುಂದೆ ಕೇಸಿನ ವಿಚಾರಣೆ
ಬೆಂಗಳೂರು ಜೆ.ಪಿ.ನಗರದ ನಿವಾಸಿ ಶಾಂತಮ್ಮ ತನ್ನ ತಾಯಿಯಾದ ಜಯಮ್ಮ ವಿರುದ್ದ ಹೈಕೋರ್ಟ್ ಮೆಟ್ಟಲೇರಿದ್ದಾರೆ. ನ್ಯಾ. ಸತೀಶ್ ಚಂದ್ರ ಶರ್ಮಾ ಅವರ ವಿಭಾಗೀಯ ಪೀಠದ ಮುಂದೆ ಕೇಸಿನ ವಿಚಾರಣೆ ಬಂದಿತ್ತು. ತಾಯಿ ಹೆಸರಿನಲ್ಲಿದ್ದ ಆಸ್ತಿಯನ್ನು ಮಗಳು ಗಿಫ್ಟ್ ಡೀಡ್ ಮಾಡಿಸಿಕೊಂಡು ತನ್ನ ಹೆಸರಿಗೆ ಬರೆಸಿಕೊಂಡಿದ್ದರು. ಇದನ್ನು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಯವರು ರದ್ದು ಪಡಿಸಿದ್ದರು. ಇದನ್ನು ಪ್ರಶ್ನಿಸಿ ಮಗಳು ಶಾಂತಮ್ಮ ಕೋರ್ಟ್ ಮೆಟ್ಟಲೇರಿದ್ದರು.

ಆಸ್ತಿಯನ್ನು ದಾನದ ರೂಪದಲ್ಲಿ ಬರೆಸಿಕೊಂಡಿದ್ದಾಳೆ. ಇದನ್ನು ರದ್ದು ಪಡಿಸಬೇಕು
"ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆಸ್ತಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಳು. ಈಗ ಅವಳು ನನ್ನನ್ನು ತುಂಬಾ ಕಡೆಗಣಿಸುತ್ತಿದ್ದಾಳೆ, ನನಗೆ ಗಂಡು ಮಕ್ಕಳಿಲ್ಲ, ಅವಿದ್ಯಾವಂತೆ. ತನ್ನ ಹೆಸರಿಗೆ ಬರೆಸಿಕೊಂಡ ಮನೆಯಲ್ಲಿ ಅವಳು ಇಲ್ಲ, ಅದನ್ನು ಬಾಡಿಗೆಗೆ ಕೊಟ್ಟು ಬೇರೆ ಕಡೆ ಇದ್ದಾಳೆ. ನಾನು ಅವಿದ್ಯಾವಂತೆ ಎನ್ನುವುದನ್ನು ದುರುಪಯೋಗ ಪಡಿಸಿಕೊಂಡು, ಆಸ್ತಿಯನ್ನು ದಾನದ ರೂಪದಲ್ಲಿ ಬರೆಸಿಕೊಂಡಿದ್ದಾಳೆ. ಇದನ್ನು ರದ್ದು ಪಡಿಸಬೇಕು"ಎಂದು ತಾಯಿ ಜಯಮ್ಮ ಹೇಳಿದ್ದರು.

ತಾಯಿಯ ಪಾದಕ್ಕೆ ನಮಸ್ಕರಿಸಿ, ಆಶೀರ್ವಾದವನ್ನು ಪಡೆದು ಆಕೆಯ ಮುಖವನ್ನು ನೋಡಿ
ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಸತೀಶ್ ಚಂದ್ರ, "ಮೊದಲು ತಾಯಿಯ ಪಾದಕ್ಕೆ ನಮಸ್ಕರಿಸಿ, ಆಕೆಯ ಆಶೀರ್ವಾದವನ್ನು ಪಡೆದುಕೊಂಡು ಆಕೆಯ ಮುಖವನ್ನು ನೋಡಿ. ಮೊದಲು ತಾಯಿಯ ಹೃದಯ ಗೆಲ್ಲುವುದನ್ನು ನೋಡಿ. ನಾನು, ನೀವು ಯಾರೂ ದೇವರನ್ನು ನೋಡಿಲ್ಲ, ಜನ್ಮ ನೀಡಿರುವ ತಾಯಿಯೇ ದೇವರು. ಆಕೆ ಸ್ವಇಚ್ಚೆಯಿಂದ ದಾನ ಮಾಡಬಹುದು. ತಾಯಿ ಎಂದಿಗೂ ಮಕ್ಕಳ ವಿರುದ್ದ ಇರುವುದಿಲ್ಲ. ನಿಮ್ಮ ಅರ್ಜಿಯನ್ನು ತಿರಸ್ಕರಿಸುತ್ತಿದ್ದೇವೆ. ಉಪ ವಿಭಾಗಾಧಿಕಾರಗಳ ಆದೇಶವನ್ನು ಎತ್ತಿ ಹಿಡಿಯುತ್ತೇವೆ" ಎನ್ನುವ ಆದೇಶವನ್ನು ನ್ಯಾಯಮೂರ್ತಿಗಳು ಹೊರಡಿಸಿದ್ದಾರೆ.
Recommended Video

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಆರು ನೂರು ಚದರ ಅಡಿ ನಿವೇಶನ
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಆರು ನೂರು ಚದರ ಅಡಿ ನಿವೇಶನವನ್ನು ಮಗಳು ತನ್ನ ಹೆಸರಿಗೆ ಬರೆಸಿಕೊಂಡಿದ್ದರು. ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯಿದೆಯಡಿ ಆರು ವರ್ಷದ ಹಿಂದೆ ದಾನಪತ್ರವಾಗಿ ಮಗಳು ಪಡೆದುಕೊಂಡಿದ್ದಳು. ತಾಯಿ ಜಯಮ್ಮ ಮೋಸದಿಂದ ಮಗಳು ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾಳೆ ಎಂದು ನ್ಯಾಯಮಂಡಳಿ ಮೆಟ್ಟಲೇರಿದ್ದರು.












Click it and Unblock the Notifications