ದಂಡುಪಾಳ್ಯ ಗ್ಯಾಂಗ್ನ ಐವರನ್ನು ಖುಲಾಸೆಗೊಳಿಸಿದ ಹೈಕೋರ್ಟ್
ಬೆಂಗಳೂರು, ಜುಲೈ 18 : 'ದಂಡುಪಾಳ್ಯ ಗ್ಯಾಂಗ್' ಈ ಹೆಸರು ಕೇಳಿದರೆ ಒಂದು ಕಾಲದಲ್ಲಿ ಮಹಿಳೆಯರು ಬೆಚ್ಚಿ ಬೀಳುತ್ತಿದ್ದರು. ಒಂಟಿ ಮಹಿಳೆಯರೇ ಈ ಗ್ಯಾಂಗ್ನ ಟಾರ್ಗೆಟ್ ಆಗಿದ್ದರು. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಕತ್ತುಸೀಳಿ ಭೀಕರವಾಗಿ ಹತ್ಯೆ ಮಾಡುತ್ತಿತ್ತು ಗ್ಯಾಂಗ್.
35ಕ್ಕೂ ಹೆಚ್ಚು ಪ್ರಕರಣಗಳು ದಂಡುಪಾಳ್ಯ ಗ್ಯಾಂಗ್ನ ಸದಸ್ಯರ ವಿರುದ್ಧ ದಾಖಲಾಗಿವೆ. ದಂಡುಪಾಳ್ಯ ಹಂತಕರ ಕುರಿತು ಸಿನಿಮಾಗಳು ಬಂದಿವೆ. ಈಗ ಕೊಲೆ ಪ್ರಕರಣವೊಂದರಲ್ಲಿ ಗ್ಯಾಂಗ್ನ ಐವರು ಸದಸ್ಯರು ಖುಲಾಸೆಗೊಂಡಿದ್ದಾರೆ.
ದಂಡುಪಾಳ್ಯ ಗ್ಯಾಂಗ್ನ 5 ಸದಸ್ಯರನ್ನು ಕರ್ನಾಟಕ ಹೈಕೋರ್ಟ್ ಖುಲಾಸೆಗೊಳಿಸಿದೆ. ವೇದಮೂರ್ತಿ ಕೊಲೆ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಬುಧವಾರ ಕರ್ನಾಟಕ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ದಂಡುಪಾಳ್ಯ ಗ್ಯಾಂಗ್ನ ಐವರು ಸದಸ್ಯರನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿದೆ. ಜೀವಾವಧಿ ಶಿಕ್ಷೆ ವಿಧಿಸಿದ ಸೆಷನ್ಸ್ ಕೋರ್ಟ್ ಆದೇಶವನ್ನು ಗ್ಯಾಂಗ್ನ ಸದಸ್ಯರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
1999ರ ಮೇ 19ರಂದು 20 ವರ್ಷದ ವೇದಮೂರ್ತಿ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ದಂಡುಪಾಳ್ಯ ಗ್ಯಾಂಗ್ನ ವೆಂಕಟರಮಣ, ಹನುಮ, ಮುನಿಕೃಷ್ಣ, ತಿಮ್ಮ, ಕೃಷ್ಣ ಮತ್ತು ಚಿನ್ನಪ್ಪ ಅಪರಾಧಿಗಳಾಗಿದ್ದರು. ಸೆಷನ್ಸ್ ಕೋರ್ಟ್ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.

ದಂಡುಪಾಳ್ಯ ಗ್ಯಾಂಗ್ನ ಸದಸ್ಯರು ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಯುವಾಗಲೇ ಜೈಲಿನಲ್ಲಿ ಚಿನ್ನಪ್ಪ ಮೃತಪಟ್ಟಿದ್ದ.
ಬುಧವಾರ ಹೈಕೋರ್ಟ್ ವೆಂಕಟರಮಣ, ದೊಡ್ಡ ಹನುಮ, ಮುನಿಕೃಷ್ಣ, ತಿಮ್ಮ, ಕೃಷ್ಣ ಅಲಿಯಾಸ್ ದಂಡುಪಾಳ್ಯ ಕೃಷ್ಣನನ್ನು ಖುಲಾಸೆಗೊಳಿಸಿದೆ.
ಜೀವಾವಧಿ ಶಿಕ್ಷೆ : 2017ರ ನವೆಂಬರ್ನಲ್ಲಿ ದಂಡುಪಾಳ್ಯ ಗ್ಯಾಂಗ್ನ ಡೊಡ್ಡಹನುಮ, ನಲ್ಲತಿಮ್ಮ, ಮುನಿಕೃಷ್ಣ , ವೆಂಕಟೇಶ ಹಾಗೂ ಲಕ್ಷ್ಮಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2000ದಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿದಲ್ಲಿ ನಡೆದ ಗೀತಾ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು.
ದಂಡುಪಾಳ್ಯ ಗ್ಯಾಂಗ್ ವಿರುದ್ಧ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಂಟಿ ಮಹಿಳೆಯರು ಇದ್ದ ಮನೆಗೆ ನುಗ್ಗುತ್ತಿದ್ದ ತಂಡ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕತ್ತುಸೀಳಿ ಕೊಲೆ ಮಾಡುತ್ತಿತ್ತು.












Click it and Unblock the Notifications