School Land Bill: ಸರ್ಕಾರಿ ಶಾಲೆಗಳ ಭೂರಕ್ಷಣ ವಿಧೇಯಕ ಜಾರಿ; ಕನ್ನಡದ ಹಿತದೃಷ್ಠಿಯಿಂದ ಮಹತ್ವದ ಹೆಜ್ಜೆ
ಬೆಂಗಳೂರು: ಕರ್ನಾಟಕ ಸರ್ಕಾರವು ಸರ್ಕಾರಿ ಶಾಲೆಗಳ ಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ ರಕ್ಷಣೆ ಮತ್ತು ಸಕ್ರಮಾತಿ ವಿಧೇಯಕವನ್ನು ಜಾರಿಗೆ ತಂದಿದೆ. ಇದು ರಾಜ್ಯದ ಶಿಕ್ಷಣ ವ್ಯವಸ್ಥೆಯ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಕ್ರಮವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ದೀರ್ಘಕಾಲದಿಂದ ಇಂತಹ ಕಾನೂನಿನ ಅಗತ್ಯತೆಯನ್ನು ಪ್ರತಿಪಾದಿಸಿದ್ದು, ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಎಲ್ಲ ಜಿಲ್ಲಾಡಳಿತಗಳಿಗೆ ನಿರಂತರವಾಗಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಹತ್ತಾರು ವರ್ಷಗಳ ಇತಿಹಾಸವಿರುವ ಸರ್ಕಾರಿ ಶಾಲೆಗಳ ಭೂಮಿಗಳು ವಿವಿಧ ರೀತಿಯ ಹಿತಾಸಕ್ತಿಗಳಿಂದ ಕಬಳಿಕೆಯ ಅಪಾಯಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ ಈ ವಿಧೇಯಕವು ಅವುಗಳಿಗೆ ಕಾನೂನುಬದ್ಧವಾದ ರಕ್ಷಣೆಯನ್ನು ಒದಗಿಸುವಲ್ಲಿ ಮಹತ್ವದ ಸಾಧನವಾಗಲಿದೆ ಎಂದು ತಿಳಿಸಿದರು.

ವಿಧೇಯಕದಿಂದ ಶಿಕ್ಷಣದ ಮೂಲಸೌಕರ್ಯ ರಕ್ಷಣೆ
ಹೆಚ್ಚುತ್ತಿರುವ ನಗರೀಕರಣದ ವೇಗದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಭೂಮಿಗಳು ಅಕ್ರಮವಾಗಿ ಬಳಸಲಾಗುತ್ತಿರುವ ಪ್ರಕ್ರಿಯೆಯೂ ಹೆಚ್ಚುತ್ತಿದೆ. ಇದರಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಗಂಭೀರ ಹಾನಿ ಉಂಟಾಗುವ ಸಂಭವವಿತ್ತು ಎಂದಿರುವ ಬಿಳಿಮಲೆ, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ತೆಗೆದುಕೊಂಡಿರುವ ಈ ನಿರ್ಧಾರ ಶಿಕ್ಷಣದ ಮೂಲಸೌಕರ್ಯವನ್ನು ಕಾಪಾಡುವುದರ ಜೊತೆಗೆ ಸಾರ್ವಜನಿಕ ಆಸ್ತಿಗಳ ಮೇಲಿನ ನಂಬಿಕೆಯನ್ನು ಬಲಪಡಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ರಾಜ್ಯ ಸರ್ಕಾರದ ಈ ವಿಧೇಯಕವು ಕೇವಲ ಭೂರಕ್ಷಣೆ ಕ್ರಮವಲ್ಲವೆಂದಿರುವ ಬಿಳಿಮಲೆ, ಇದು ಕನ್ನಡದ ಭವಿಷ್ಯವನ್ನು ಕಾಪಾಡುವ ಕ್ರಮವಾಗಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವುದೆಂದರೆ ಭಾಷೆಯನ್ನೇ ಉಳಿಸುವುದಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದ ಈ ವಿಧೇಯಕ ಪರಿಣಾಮಕಾರಿ ಜಾರಿಗೆ ಸರ್ಕಾರವು ಅಗತ್ಯವಿರುವ ಎಲ್ಲ ಆಡಳಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿರುವ ಬಿಳಿಮಲೆ, ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರು ಸಹ ಶಾಲೆಗಳ ಆಸ್ತಿ ರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನ್ನಡವನ್ನು ಉಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications