ಕನ್ನಡ ಕಡ್ಡಾಯವಲ್ಲ: ಸರ್ಕಾರದ ಕೊನೆ ಸುತ್ತಿನ ಹೋರಾಟ
ಬೆಂಗಳೂರು, ಜ. 15 : ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್ ವಿರುದ್ಧ ರಾಜ್ಯ ಸರ್ಕಾರ ಕೊನೆ ಸುತ್ತಿನ ಹೋರಾಟ ನಡೆಸಲು ಮುಂದಾಗಿದೆ. ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದ ತೀರ್ಪು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದೆ.
ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿ ಯನ್ನು ಸುಪ್ರೀಂಕೋರ್ಟ್ ಸೆ.9ರಂದು ವಜಾ ಮಾಡಿತ್ತು. ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಕ್ಯುರೇಟಿವ್ ಅರ್ಜಿ ಸಲ್ಲಿಸಿರುವ ಮಾಹಿತಿ ನೀಡಿದ್ದಾರೆ.[ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದ ಸುಪ್ರೀಂ]

ಭಾರತದ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ನೀಡಬೇಕು. ಆಯಾ ರಾಜ್ಯಗಳ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಲು ಅವಕಾಶ ಸಿಗದೇ ಹೋದರೆ ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ಯುರೇಟಿವ್ ಅರ್ಜಿ ನ್ಯಾಯಪೀಠದ ಬದಲಾಗಿ ನೇರವಾಗಿ ರಿಜಿಸ್ಟ್ರಾರ್ ಮುಂದೆ ವಿಚಾರಣೆಗೆ ಬರುತ್ತದೆ. ಪರಿಶಿಲನೆ ನಂತರ ನ್ಯಾಯಾಲಯದ ತೀರ್ಪು ಮರು ಪರಿಶೀಲಿಸುವ ಅಗತ್ಯವಿದೆ ಎಂದೆನಿಸಿದರೆ ಅದನ್ನು ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ಮೂವರು ಹಿರಿಯ ನ್ಯಾಯಾಧೀಶರ ಮುಂದಿಡಬಹುದು. ಸಿಜೆಐ ಹಾಗೂ ಇತರ ಮೂವರು ಜಡ್ಜ್ ಗಳು ಇದರ ವಿಚಾರಣೆ ಅಗತ್ಯವಿದೆಯೇ ಎಂಬುದನ್ನು ನಂತರ ತೀಮಾನಿಸುತ್ತರೆ.
ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಗೆ ಅರ್ಜಿ ವಿಚಾರಣೆ ಅಗತ್ಯವು ಇಲ್ಲ ಎಂದೆನಿಸಿದರೆ ಅಲ್ಲೇ ವಜಾಗೊಳಿಸಬಹುದು. ಶಿಕ್ಷಣ ಮಾಧ್ಯಮ ನಿರ್ಧರಿಸುವ ಹಕ್ಕು ಪಾಲಕರಿಗೆ ಬಿಟ್ಟಿದ್ದು ಎಂಬ ಸುಪ್ರೀಂಕೋರ್ಟ್ ಕಳೆದ ಸಪ್ಟೆಂಬರ್ ನಲ್ಲಿ ತೀರ್ಪು ನೀಡಿತ್ತು.












Click it and Unblock the Notifications