ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ, ಫೋಟೊ ನಿರ್ಬಂಧಿಸಿ ಆದೇಶ, ಆಕ್ರೋಶ
ಬೆಂಗಳೂರು ಜು.15: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ವಿಡಿಯೋ ಮಾಡದಂತೆ ಮತ್ತು ಫೋಟೊ ಕ್ಲಿಕ್ಕಿಸದಂತೆ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಸರ್ಕಾರ ಈ ನಿರ್ಧಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲ ಜಿಲ್ಲೆಗಳು, ತಾಲೂಕು ಸೇರಿದಂತೆ ರಾಜ್ಯಮಟ್ಟದಲ್ಲಿ ಸರ್ಕಾರಿ ಕಚೇರಿಯ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುವುದು ಸಾಮಾನ್ಯವಾಗಿರುತ್ತದೆ. ಈ ಸಮಯದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ತೆಗೆಯುವ ಫೋಟೋ ಅಥವಾ ವಿಡಿಯೋಗಳು ಸಾಮಾಜಿಕವಾಗಿ ದುರ್ಬಳಕೆ ಆಗುತ್ತಿವೆ.
ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಜೀನ್ಸ್, ಟೀ ಶರ್ಟ್ ನಿಷೇಧ: ನಿಯಮ ಮೀರಿದರೆ ಕ್ರಮ
ಸುಖಾಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ತೆಗೆದ ಫೋಟೋ ಇಲ್ಲವೇ ವಿಡಿಯೋ ಹರಿಬಿಡುತ್ತಾರೆ. ಇದರಿಂದ ಸರ್ಕಾರದ ಘನತೆಗೆ ಧಕ್ಕೆ ಕುಂದುಟಾಗುತ್ತದೆ. ಅಲ್ಲದೇ ಸರ್ಕಾರಿ ಸೇವೆಗೆ ಮತ್ತು ಅದರಲ್ಲೂ ಮಹಿಳಾ ನೌಕರರಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ.
ಆದ್ದರಿಂದ ಸರ್ಕಾರಿ ಎಲ್ಲ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ವಿಡಿಯೋ ಮಾಡುವುದು ಇಲ್ಲವೇ ಫೋಟೊ ತೆಗೆಯುವುದನ್ನು ನಿಷೇಧಿಸಬೇಕು ಎಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಲವು ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂಘದ ಮನವಿಯಂತೆ ಅನಧಿಕೃತ ಫೋಟೊ , ವಿಡಿಯೋ ಮಾಡುವುದು ನಿರ್ಬಂಧಿಸುವುದು ಸೂಕ್ತವೆಂದು ಅಭಿಪ್ರಾಯಟ್ಟು ಈ ಆದೇಶ ಹೊರಡಿಸಿದೆ.
ಸಾರ್ವಜನಿಕರ ಹಕ್ಕು ಕಸಿದ ಸುತ್ತೋಲೆ
ರಾಜ್ಯ ಸರ್ಕಾರ ವಿಡಿಯೋ, ಪೋಟೋ ನಿರ್ಬಂಧಿಸುವ ಮೂಲಕ ಸರ್ಕಾರಿ ಇಲಾಖಾ ಕಚೇರಿಗಳಲ್ಲಿನ ಅನೈತಿಕ ವ್ಯವಹಾರಗಳನ್ನು ಪೋಷಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಯುತವಾಗಿ ಜೀವನ ನಡೆಸುವವರು ಭಯಪಡುವ ಸುತ್ತೋಲೆ ಇದಾಗಿದೆ. ಇದು ಸಾರ್ವಜನಿಕರ ಹಕ್ಕು ಕಸಿದುಕೊಂಡ ಸುತ್ತೋಲೆ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಭದ್ರತಾ ಕೊಠಡಿಯಾದ ಸರ್ಕಾರಿ ಇಲಾಖೆ ಕಚೇರಿಗಳು
ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಮಾಣಿಕ, ದಕ್ಷತೆಯಿಂದ ಸೇವೆ ನೀಡುವುದು ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಪ್ರಸ್ತುತದ ವಿಡಿಯೋ, ಫೋಟೋ ನಿರ್ಬಂಧ ಆದೇಶ ಗಮನಿಸಿದರೆ ಸೇವಾ ಕೇಂದ್ರಗಳು, ಸರ್ಕಾರದ ಕಾರ್ಯಾಲಗಳು ಇನ್ನು ಮುಂದೆ ಭದ್ರಾತಾ ಕೊಠಡಿಯನ್ನಾಗಿ ಮಾಡಿದಂತಿದೆ. ಯಾವ ಅವ್ಯವಹಾರಗಳು ನಡೆದರೂ, ಜನಸಾಮಾನ್ಯರಿಗೆ ತೊಂದರೆಯಾದರೂ ಅದನ್ನು ಕೇಳುವ ಹಕ್ಕು ಕಸಿದುಕೊಂಡಂತಾಗಿರುವ ಈ ಆದೇಶಕ್ಕೆ ಧಿಕ್ಕಾರವಿದೆ ಎಂದು ಕೆಲವರು ತಿಳಿಸಿದ್ದಾರೆ.
ಮಾಧ್ಯಮಗಳ ಹಕ್ಕು ಕಸಿದುಕೊಳ್ಳುತ್ತಾರೆ?
ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ, ಹೊರಡಿಸುತ್ತಿರುವ ಆದೇಶಗಳನ್ನು ನೋಡಿದ ಸಾರ್ವಜನಿಕ ಧ್ವನಿಗೆ ಬೀಗ ಹಾಕಿದಂತಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನೂ ಸರ್ಕಾರದವರೆ ನಿಯಂತ್ರಿಸುತ್ತಾರೆ?. ಅದಾದ ನಂತರ ಸರ್ಕಾರ ಮಾಧ್ಯಮಗಳ ಮೇಲೂ ನಿರ್ಬಂಧ ವಿಧಿಸಿ ನಿಯಂತ್ರಣಕ್ಕೆ ತಂದು ಮಾಧ್ಯಮಗಳ ಹಕ್ಕನ್ನು ಕಸಿಕೊಳ್ಳುತ್ತಾರೆ ಎಂದು ಇದೊಂದು ಸರ್ವಾಧಿಕಾರಿ ಆಡಳಿತ ಸುತ್ತೋಲೆ ಆಗಿದೆ ಎಂದು ಲೇವಡಿ ಮಾಡಲಾಗಿದೆ.
ಭ್ರಷ್ಟಾಚಾರ: ಕುತೂಹಲ ಮೂಡಿಸಿದ ಸುತ್ತೋಲೆ
ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ, ಲಂಚ ಸ್ವೀಕಾರ ಹೊಸತೇನಲ್ಲ. ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದರು. ಇಂತಹ ವಿಧವಿಧದ ಭ್ರಷ್ಟಾಚಾರ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಕಚೇರಿಗಳಲ್ಲಿ ವಿಡಿಯೋ ಮಾಡುವುದು, ಫೋಟೊ ತೆಗೆಯುವುದನ್ನು ನಿಷೇಧ ಮಾಡಿದೆಯೆ ಎಂಬ ಕುತೂಹಲ ಮೂಡಿದೆ. ಜತೆಗೆ ಆಕ್ರೋಶಕ್ಕೂ ಗುರಿಯಾಗಿದೆ ಎಂದು ಆದೇಶ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕಾಮೆಂಟು ಮಾಡಿದ್ದಾರೆ.