ಕರ್ನಾಟಕದ ತಾಲೂಕುಗಳ ಸಂಖ್ಯೆ 236ಕ್ಕೇರಿಸಿದ ಕುಮಾರಸ್ವಾಮಿ
ಬೆಂಗಳೂರು, ಫೆಬ್ರವರಿ 27: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 5 ಹೊಸ ತಾಲೂಕುಗಳನ್ನು ರಚನೆ ಬಗ್ಗೆ ಘೋಷಿಸಿದ್ದಾರೆ.
ಹಾರೋಹಳ್ಳಿ, ಚೇಳೂರು, ತೇರದಾಳ, ಕಳಸ ಹೊಸ ತಾಲೂಕುಗಳು ಹೊಸದಾಗಿ ರಚನೆಯಾಗಲಿವೆ. ಸೋಮವಾರದಂದು ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ, ಈಗ ಕೊಡಗು ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ, ವಿಜಯಪುರ ಜಿಲ್ಲೆಯ ಆಲಮೇಲ, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹಾಗೂ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ಘೋಷಿಸಲಾಗಿದೆ.
ಕುಮಾರಸ್ವಾಮಿ ಬಜೆಟ್: ಯಾರಿಗೆ ಸಿಹಿ? ಯಾರಿಗೆ ಕಹಿ?
ಒಟ್ಟಾರೆ, ತಾಲೂಕುಗಳ ಸಂಖ್ಯೆ 236 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 176 ತಾಲೂಕುಗಳಿದ್ದು, ಕಳೆದ 6 ವರ್ಷಗಳ ಅವಧಿಯಲ್ಲಿ 49 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಅವರ ಸರ್ಕಾರ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಇದಕ್ಕೆ ಇನ್ನೂ 6 ಸೇರಿಸಲಾಯಿತು.ಒಟ್ಟಾರೆ, ಹಿಂದಿನ ಸರ್ಕಾರದಲ್ಲಿ 49 ತಾಲೂಕುಗಳು ರಚನೆಯಾದವು. ನೂತನ ತಾಲೂಕು ರಚಿಸಲು ತಲಾ 25 ಕೋಟಿ ರೂ. ನಂತೆ 2000 ಕೋಟಿ ರೂ.ಗಳ ಅಗತ್ಯವಿದ್ದು, ಹಣಕಾಸಿನ ಲಭ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಕರ್ನಾಟಕ ಬಜೆಟ್: ನಾಲ್ಕು ಹೊಸ ತಾಲ್ಲೂಕುಗಳ ರಚನೆ
ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಗರಗಳನ್ನು ಹೊಸ ತಾಲೂಕುಗಳಾಗಿ ಘೋಷಿಸುವಂತೆ ಬಹುಕಾಲದಿಂದ ಬೇಡಿಕೆ ಸಲ್ಲಿಸಲಾಗಿತ್ತು.