ಆಕ್ರೋಶದ ಬದಲು ನಗೆಯುಕ್ಕಿಸಿದ ಯಡಿಯೂರಪ್ಪ ಮಾತುಗಳು

Recommended Video

      ಸದನದಲ್ಲಿ ಎಚ್ ಡಿ ಕೆ ಹಾಗು ಅವರ ಪರಿವಾರದ ಬಗ್ಗೆ ವಾಗ್ದಾಳಿ ನಡೆಸಿದ ಬಿ ಎಸ್ ವೈ | Oneindia Kannada

      ಬೆಂಗಳೂರು, ಮೇ 25 : ತಾವು ವಿಶ್ವಾಸಮತ ಯಾಚಿಸಿದಾಗ ಮಾಡಿದ ಭಾಷಣಕ್ಕಿಂತ ಪ್ರಖರವಾಗಿ, ಭಾವುಕರಾಗಿ ಮತ್ತು ಆಕ್ರೋಶಭರಿತರಾಗಿ ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರು, ವಿಶ್ವಾಸಮತ ಯಾಚನೆಗೆ ಉತ್ತರ ನೀಡುತ್ತ ಮಾತನಾಡಿದ್ದಾರೆ.

      ತಮ್ಮ ಭಾಷಣದಲ್ಲಿ 2006ರಲ್ಲಿ ಮಾಡಿಕೊಂಡಿದ್ದ ಮೈತ್ರಿಯಿಂದ ಹಿಡಿದು ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಯಡಿಯೂರಪ್ಪನವರು ಸುದೀರ್ಘ ಭಾಷಣ ಮಾಡಿದರು. ಅವರು ಆಕ್ರೋಶಭರಿತರಾಗಿ ರೋಶಾವೇಶದಿಂದ ಮಾತುಗಳನ್ನು ಆಡುತ್ತಿದ್ದರೆ ಸದನ ಸದಸ್ಯರಲ್ಲಿ ರೋಶ ಉಕ್ಕುವ ಬದಲು ನಗೆ ಅಲೆಯನ್ನು ಉಕ್ಕಿಸಿದವು.

      ಕುಮಾರಸ್ವಾಮಿ ಮತ್ತು ಅವರ ಅಪ್ಪ ದೇವೇಗೌಡ ಅವರನ್ನು ಮಾತಿನುದ್ದಕ್ಕೂ ಚುಚ್ಚಿದ ಯಡಿಯೂರಪ್ಪನವರು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ವಾಚಾಮಗೋಚರವಾಗಿ ಹೊಗಳಿದ ಅವರು, ಮುಳುಗುವ ದೋಣಿಯಲ್ಲಿ ನೀವೂ ಪಯಣಿಸುತ್ತಿದ್ದೀರಿ ಎಂದು ಎಚ್ಚರಿಸಿದರು.

      ಯಡಿಯೂರಪ್ಪನವರ ಮಾತಿನ ವೈಖರಿಯಿಂದಾಗಿ ರೇವಣ್ಣ ಅವರ ಜೊತೆ ಮಾತಿನ ಚಕಮಕಿಯೂ ನಡೆದವು, ಹಲವಾರು ಬಾರಿ ರಮೇಶ್ ಕುಮಾರ್ ಅವರು ಆಗಾಗ ತಮಾಷೆಯ ನಗೆಚಟಾಕಿಗಳನ್ನು ಹಾರಿಸುತ್ತ ಮತ್ತಷ್ಟು ನಗೆಯುಕ್ಕಿಸುತ್ತಿದ್ದರು. ಗಂಭೀರ ಚರ್ಚೆಗೆ ಆಸ್ಪದ ನೀಡುವ ಬದಲು ಹಾಸ್ಯಕ್ಕೆ ಆಸ್ಪದ ನೀಡಿದ ಅವರ ಮಾತಿನ ಸಾರಾಂಶ ಹೀಗಿದೆ.

      ಸ್ವಾಮಿ ಜೊತೆ ಕೈಜೋಡಿಸಿದ್ದು ದೊಡ್ಡ ತಪ್ಪು

      ಸ್ವಾಮಿ ಜೊತೆ ಕೈಜೋಡಿಸಿದ್ದು ದೊಡ್ಡ ತಪ್ಪು

      2006ರಲ್ಲಿ ಕುಮಾರಸ್ವಾಮಿ ಅವರೊಂದಿಗೆ ಇಪ್ಪತ್ತು ತಿಂಗಳು ಅಧಿಕಾರ ಹಂಚಿಕೊಳ್ಳಬೇಕೆಂಬ ಒಪ್ಪಂದ ಮಾಡಿಕೊಂಡಿದ್ದು ನಾನು ಜೀವನದಲ್ಲಿ ಮಾಡಿದ ಅತಿದೊಡ್ಡ ತಪ್ಪು. ಆ ಇಪ್ಪತ್ತು ತಿಂಗಳುಗಳ ಕಾಲ ನಾನು ಅನುಭವಿಸಬಾರದ್ದನ್ನೆಲ್ಲ ಅನುಭವಿಸಿದ್ದೇನೆ. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಇಪ್ಪತ್ತು ತಿಂಗಳುಗಳ ನಂತರ ನಾನು ಮುಖ್ಯಮಂತ್ರಿ ಆಗಿದ್ದಾಗ, ನಾನು ವೆಸ್ಟ್ ಎಂಡ್ ಹೋಟೆಲಿನಲ್ಲಿದ್ದೆ, ಆಗ ಅಪ್ಪಮಗ ಬಂದು ಹೊಸ ಷರತ್ತುಗಳನ್ನು ಹೇರಲು ಆರಂಭಿಸಿದರು. ಷರತ್ತು ಒಪ್ಪಲಿಲ್ಲವೆಂದು ಬೆಂಬಲವನ್ನೇ ಹಿಂತೆಗೆದು ಸರಕಾರ ಬೀಳಿಸಿದರು.v

      ಪ್ರತಿಕ್ಷಣ ನಾನು ಕಣ್ಣೀರು ಹಾಕಿದ್ದೇನೆ

      ಪ್ರತಿಕ್ಷಣ ನಾನು ಕಣ್ಣೀರು ಹಾಕಿದ್ದೇನೆ

      ಅವರೊಂದಿಗೆ ಅಂದು ಕೈಜೋಡಿಸಿದ್ದಕ್ಕೆ ಈಗ ಪಶ್ಚಾತ್ತಾಪ ಆಗುತ್ತಿದೆ, ನಾನು ಜೀವನದಲ್ಲಿ ಮಾಡಿದ ಅಕ್ಷಮ್ಯ ಅಪರಾಧ ಅದು. ಅಂದು ಅವರೊಂದಿಗೆ ಕೈಜೋಡಿಸಿದ್ದಕ್ಕಾಗಿ ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ಕುಮಾರಸ್ವಾಮಿಯವರೆ, ಅಂದು ನಿಮ್ಮಪ್ಪನ (ದೇವೇಗೌಡರ) ಮಾತು ಕೇಳಿ ಬೆಂಬಲ ಹಿಂತೆಗೆದುಕೊಂಡಿರಿ. ಆದರೆ, 20 ತಿಂಗಳು ಸಮ್ಮಿಶ್ರ ಸರಕಾರ ಮಾಡಿರೆಂದು ನಿಮ್ಮಪ್ಪ ಹೇಳಿದ್ದರೆ? ಆ ಇಪ್ಪತ್ತು ತಿಂಗಳು ಪ್ರತಿಕ್ಷಣ ನಾನು ಕಣ್ಣೀರು ಹಾಕಿದ್ದೇನೆ.

      ಉತ್ತರ ನೀಡುವ ಸಾಮರ್ಥ್ಯ ನನ್ನಲ್ಲಿದೆ : ಕುಮಾರಸ್ವಾಮಿ

      ಉತ್ತರ ನೀಡುವ ಸಾಮರ್ಥ್ಯ ನನ್ನಲ್ಲಿದೆ : ಕುಮಾರಸ್ವಾಮಿ

      ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಹೀಗೇ ಮುಂದುವರಿಯುತ್ತಿದ್ದಂತೆ ರೇವಣ್ಣ ಅವರು ಮಧ್ಯ ಪ್ರವೇಶಿಸಿ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ಆರಂಭಿಸಿದರು. ಆಗ ಮಧ್ಯ ತಡೆದ ಕುಮಾರಸ್ವಾಮಿಯವರು, ಯಡಿಯೂರಪ್ಪನವರು ಏನು ಮಾತಾಡಬೇಕೋ ಅದನ್ನೆಲ್ಲ ಮಾತಾಡಲಿ. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ನನಗೆ ಸಾಮರ್ಥ್ಯವಿದೆ ಎಂದು ತಿರುಗೇಟು ನೀಡಿದರು. ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಕೂಡ, ಯಡಿಯೂರಪ್ಪನವರು ಏನು ಬೇಕಾದರೂ ಮಾತಾಡಲಿ ಎಂದು ಅನುಮತಿ ನೀಡಿದರು.

      ಸಿದ್ದುವನ್ನು ಯದ್ವಾತದ್ವಾ ಹೊಗಳಿದ ಬಿಎಸ್ವೈ

      ಸಿದ್ದುವನ್ನು ಯದ್ವಾತದ್ವಾ ಹೊಗಳಿದ ಬಿಎಸ್ವೈ

      ತಮ್ಮ ಮಾತನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ತಿರುಗಿಸಿದ ಯಡಿಯೂರಪ್ಪನವರು, ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಕುಮಾರಸ್ವಾಮಿಯವರಿಗೆ ಅಧಿಕಾರ ನೀಡಿ ಮುಖ್ಯಮಂತ್ರಿ ಮಾಡಿದವರು ಸಿದ್ದರಾಮಯ್ಯನವರು. ಅವರಿಗೆ ನೀವು ಗೌರವ ನೀಡಬೇಕಿತ್ತು. ಆದರೆ, ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿಯವರು ಕಡೆಗಣಿಸಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಇಲ್ಲಸಲ್ಲದ್ದನ್ನು ಹೇಳಿ ಅವರನ್ನೇ ಸೋಲಿಸಿದವರನ್ನು ಕೈಜೋಡಿಸಿರುವುದು ಅಪವಿತ್ರ ಮೈತ್ರಿಯಲ್ಲವೆ ಎಂದು ಪ್ರಶ್ನಿಸಿದರು.

      ಕಾಂಗ್ರೆಸ್ ಮುಳುಗುತ್ತಿರುವ ದೋಣಿ

      ಕಾಂಗ್ರೆಸ್ ಮುಳುಗುತ್ತಿರುವ ದೋಣಿ

      ಡಿಕೆ ಶಿವಕುಮಾರ್ ಅವರೇ, ಕುಮಾರಸ್ವಾಮಿ ಅವರು ಕುಳಿತ ಮುಳುಗೋ ದೋಣಿಯಲ್ಲಿ ನೀವೂ ಕುಳಿತು ಮುಳುಗಬೇಕೆಂದಿದ್ದರೆ ನಾನೇನೂ ಮಾಡಲು ಸಾಧ್ಯವಿಲ್ಲ. ನಮಗೆ ಜನಾದೇಶ ಸಿಕ್ಕಿದ್ದರೂ ನೀವು ನಮಗೆ ಬೆಂಬಲ ಸಿಗದಂತೆ ಮಾಡಿ ಈ ರಾಜ್ಯದ ಪಾಲಿಗೆ ಖಳನಾಯಕರಾಗಿದ್ದೀರಿ. ಇನ್ನು ಕೆಲವೇ ತಿಂಗಳಲ್ಲಿ ಅಪ್ಪಮಕ್ಕಳು ಸೇರಿ ನಿಮ್ಮನ್ನು ಮಾತ್ರವಲ್ಲ ಇಡೀ ಕಾಂಗ್ರೆಸ್ಸನ್ನು ಮುಳುಗಿಸದಿದ್ದರೆ ಕೇಳಿ ಎಂಬ ಯಡಿಯೂರಪ್ಪನವರ ಮಾತಿಗೆ ಆಕ್ರೋಶ ಉಕ್ಕುವ ಬದಲು ನಗೆಅಲೆಯುಕ್ಕಿತು. ಇದಕ್ಕೆ ಉತ್ತರಿಸಿದ ಶಿವಕುಮಾರ್, ನನಗೆ ರಾಹುಲ್ ಗಾಂಧಿಯವರು ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ ಅಷ್ಟೇ ಎಂದರು.

      ಕೆಲವರಿಗೆ ಹೀರೋ, ಕೆಲವರಿಗೆ ವಿಲನ್

      ಕೆಲವರಿಗೆ ಹೀರೋ, ಕೆಲವರಿಗೆ ವಿಲನ್

      ಯಡಿಯೂರಪ್ಪನವರ ಮತ್ತು ಡಿಕೆ ಶಿವಕುಮಾರ್ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು, ನೀವು ಕೆಲವರಿಗೆ ಹೀರೋ ಆಗಿ ಕಂಡರೆ ಕೆಲವರಿಗೆ ವಿಲನ್ ಆಗಿ ಕಾಣಿಸುತ್ತೀರಿ. ಎಲ್ಲರಿಗೂ ಹೀರೋ ಆಗಿ ಕಾಣಿಸಲು ಸಾಧ್ಯವೇ ಇಲ್ಲ. ನೀವೇನೂ ತಲೆಕೆಡಿಸಿಕೊಳ್ಳಬೇಡಿ, ಒಂದು ಮನುಷ್ಯನಿಗೆ ಆಹಾರವಾಗಿದ್ದು ಇನ್ನೊಬ್ಬ ವ್ಯಕ್ತಿಗೆ ವಿಷವಾಗಿರಬಹುದು ಎಂದು ಹಾಸ್ಯಚಟಾಕಿ ಹಾರಿಸಿದರು.

      ಕುದುರೆ ವ್ಯಾಪಾರ ಒಪ್ಪಿಕೊಂಡ ಯಡಿಯೂರಪ್ಪ

      ಕುದುರೆ ವ್ಯಾಪಾರ ಒಪ್ಪಿಕೊಂಡ ಯಡಿಯೂರಪ್ಪ

      ಕಡೆಯದಾಗಿ, ಕುದುರೆ ವ್ಯಾಪಾರ ಮಾಡಿದ್ದನ್ನು ಬಹಿರಂಗವಾಗಿಯೇ ಒಪ್ಪಿಕೊಂಡ ಯಡಿಯೂರಪ್ಪನವರು, ನಾನು ಇಲ್ಲಿರುವ ಕೆಲವರನ್ನು ಸಂಪರ್ಕಿಸಿದ್ದು ನಿಜ. ಈ ಅಪವಿತ್ರ ಮೈತ್ರಿಯನ್ನು ತಪ್ಪಿಸಲೆಂದು ನನ್ನ ಬಳಿ ಕೆಲವರು ಬಂದಿದ್ದು, ನಾನು ಕೆಲವರನ್ನು ಸಂಪರ್ಕಿಸಿದ್ದು ನಿಜ ಎಂದು ಅಚ್ಚರಿ ಮೂಡಿಸಿದರು. ಕೊನೆಗೆ, ರೈತರ ಸಾಲಮನ್ನಾದ ವಿಷಯ ಬಂದಾಗ, ಕುಮಾರಸ್ವಾಮಿಯವರು ಸೋಮವಾರದೊಳಗೆ ರೈತರ ಸಾಲಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿ ಸಭಾತ್ಯಾಗ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+