ಆನಂದ್ ಸಿಂಗ್, ಪ್ರತಾಪ್ ಗೌಡ ನಾಪತ್ತೆ : ಕಾಂಗ್ರೆಸ್ಸಿಗೆರಡು ಕಮ್ಮಿ
ಬೆಂಗಳೂರು, ಮೇ 19 : ಇದೀಗ ಬಂದಿರುವ ಸುದ್ದಿಯೇನೆಂದರೆ, ನಾಪತ್ತೆಯಾಗಿದ್ದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ ಅವರು ತಾಜ್ ವೆಸ್ಟ್ ಎಂಡ್ ನಲ್ಲಿ ಪತ್ತೆಯಾಗಿದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸದನಕ್ಕೆ ಬರಲಿದ್ದಾರೆ. ಬಂದು ಯಾರಿಗೆ ವೋಟು ಹಾಕಲಿದ್ದಾರೆ? ಸಸ್ಪೆನ್ಸ್!
ಎಲ್ಲಿ ಆನಂದ್ ಸಿಂಗ್? : ಎಣಿಸಿದಂತೆ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಅವರು ನಾಪತ್ತೆಯಾಗಿದ್ದಾರೆ. ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ ಅವರು ಬಿಜೆಪಿಗೆ ವಿಶ್ವಾಸಮತದಲ್ಲಿ ಬೆಂಬಲ ನೀಡುತ್ತಾರೆ ಎಂದು ಸುದ್ದಿ ಹಬ್ಬಿತ್ತು.
ಆನಂದ್ ಸಿಂಗ್ ಅವರು ಎಲ್ಲೂ ನಾಪತ್ತೆಯಾಗಿಲ್ಲ, ಅವರು ದೆಹಲಿಗೆ ಹೋಗಿದ್ದಾರೆ, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಅವರು ಖಂಡಿತ ಸದನಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ, ಕಾಂಗ್ರೆಸ್ ನಿರೀಕ್ಷೆಯಂತೆ ಅವರು ಸದನಕ್ಕೆ ಬಂದಿಲ್ಲ.
ಹೀಗಾಗಿ ಕಾಂಗ್ರೆಸ್ಸಿಗೆ ಒಂದು ಮತ ಕಡಿಮೆಯಾದಂತೆ ಮತ್ತು ಬಿಜೆಪಿಗೆ ಒಂದು ಮತ ಸೇರ್ಪಡೆಯಾಗುವುದೂ ತಪ್ಪಿದೆ. ಈ ಬಗ್ಗೆ ವಿಚಾರಿಸಿದಾಗ, ತಾವು ಯಾವ ಪಕ್ಷದ ಪರವೂ ಮತ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಅವರೊಂದಿಗೆ ಕಾಂಗ್ರೆಸ್ ನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ ಅವರು ಕೂಡ ಸದನಕ್ಕೆ ಹಾಜರಾಗಿಲ್ಲ. ಹೀಗಾಗಿ ಮತ್ತೊಂದು ಸಂಖ್ಯೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಕಡಿಮೆಯಾಗುವುದು ಗ್ಯಾರಂಟಿ. 117 ಸಂಖ್ಯಾಬಲವಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಇವರಿಬ್ಬರ ಗೈರಿನಿಂದಾಗಿ 115ಕ್ಕೆ ಇಳಿಯಲಿದೆ. ಬಹುಮತ ಸಾಬೀತಿಗೆ ಬೇಕಿರುವುದು 112 ಸಂಖ್ಯೆ.
ಇವರಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರು. ಇನ್ನೂ ಇಪ್ಪತ್ತು ಲಿಂಗಾಯತ ನಾಯಕರಿದ್ದು, ಅವರು ಯಾವ ಪಕ್ಷದ ಪರವಾಗಿ ಮತ ಹಾಕುತ್ತಾರೆ ಎಂಬುದು ಸಂಜೆ 4 ಗಂಟೆಗೆ ತಿಳಿದುಬರಲಿದೆ. ವಿಶ್ವಾಸಮತದ ಫಲಿತಾಂಶದ ಮೇಲೆ ಯಡಿಯೂರಪ್ಪ ಅವರ ಭವಿಷ್ಯವೂ ನಿಂತಿದೆ.












Click it and Unblock the Notifications