ಶನಿವಾರ ವಿಶ್ವಾಸಮತ : ಕಾಂಗ್ರೆಸ್-ಜೆಡಿಎಸ್ ತಂತ್ರಗಳೇನು?
ಬೆಂಗಳೂರು, ಮೇ 18 : ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಶನಿವಾರ 4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತವನ್ನು ಸಾಬೀತು ಮಾಡಬೇಕಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಶಾಸಕರನ್ನು ಬಿಜೆಪಿ ಸೆಳೆಯದಂತೆ ಸಾಕಷ್ಟು ಜಾಗ್ರತೆ ವಹಿಸಿವೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಬಿಜೆಪಿ ಸದನದಲ್ಲಿ ಶನಿವಾರ ವಿಶ್ವಾಸಮತ ಸಾಬೀತು ಮಾಡಬೇಕು. ಆದರೆ, ಬಿಜೆಪಿ ಬಳಿ ಇರುವ ಶಾಸಕರ ಸಂಖ್ಯೆ 104. ಜೆಡಿಎಸ್-ಕಾಂಗ್ರೆಸ್ ತಮ್ಮ ಬಳಿ 116 ಶಾಸಕ ಬಲ ಎಂದು ಹೇಳುತ್ತಿವೆ.
224 ಸದಸ್ಯ ಬಲದ ವಿಧಾನಸಭೆಯಲ್ಲಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹಾಗಾಗಿ ಬಹುಮತ ಸಾಬೀತು ಪಡಿಸಲು 112 ಶಾಸಕ ಬಲ ಅಗತ್ಯವಿತ್ತು. ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಆದ್ದರಿಂದ, 111 ಶಾಸಕ ಬಲ ಸಾಬೀತು ಮಾಡಿದರೆ ವಿಶ್ವಾಸ ಮತವನ್ನು ಗಳಿಸಬಹುದಾಗಿದೆ.
104 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಸೆಳೆದು ಬಹುಮತ ಸಾಬೀತು ಮಾಡಲು ಮುಂದಾಗಿದೆ. ಈ ಬಗ್ಗೆ ಸರಣಿ ಸಭೆಗಳನ್ನು ನಡೆಸುತ್ತಿದೆ. ಯಾವ ಶಾಸಕರು?, ಯಾರ ಪರವಾಗಿ ಮತ ಹಾಕುತ್ತಾರೆ? ಎಂಬುದು ಸದ್ಯ ಇರುವ ಕುತೂಹಲವಾಗಿದೆ...

ರೆಸಾರ್ಟ್ ರಾಜಕೀಯ
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಈಗಾಗಲೇ ಹೈದರಾಬಾದ್ನ ರೆಸಾರ್ಟ್ನಲ್ಲಿದ್ದಾರೆ. ಶಾಸಕರು ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ಕಾಂಗ್ರೆಸ್ ಅಗತ್ಯ ವ್ಯವಸ್ಥೆ ಮಾಡಿದೆ. ಹೈದರಾಬಾದ್ನಿಂದ ಎಲ್ಲರೂ ಬೆಂಗಳೂರಿಗೆ ತಡರಾತ್ರಿ ಆಗಮಿಸಲಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ 11ಗಂಟೆಗೆ ಎಲ್ಲರೂ ಒಟ್ಟಿಗೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

ಸಚಿವ ಸ್ಥಾನದ ಆಮಿಷ
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲಿ ಬಿಜೆಪಿಯ ಕಡೆ ಒಲವು ಇರುವ ಶಾಸಕರಿಗೆ ಸಚಿವ ಸ್ಥಾನ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆಮಿಷವೊಡ್ಡಿ ಪಕ್ಷದಲ್ಲಿಯೇ ಉಳಿಸಿಕೊಳ್ಳಬಹುದು. ಈ ತಂತ್ರಕ್ಕೆ ಶಾಸಕರು ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

ಹಿರಿಯ ನಾಯಕರಿಗೆ ಉಸ್ತುವಾರಿ
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬೇರೆಯವರನ್ನು ಭೇಟಿ ಮಾಡಲು ಸಾಧ್ಯವಾಗದಂತೆ ತಡೆಯಲು ಬೌನ್ಸರ್ ನಿಯೋಜನೆ ಮಾಡಲಾಗಿದೆ. ಪಕ್ಷದ ಹಿರಿಯ ನಾಯಕರ ತಂಡ ರಚನೆ ಮಾಡಿ, ಅವರಿಗೆ ಇಂತಿಷ್ಟು ಶಾಸಕರ ಉಸ್ತುವಾರಿ ನೀಡಲಾಗಿದೆ. ಎಲ್ಲಾ ಶಾಸಕರು ಸಹ ಹಿರಿಯ ನಾಯಕರ ಕಣ್ಗಾವಲಿನಲ್ಲಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗಿ ಅವರು ಬಿಜೆಪಿ ಪಾಳಯ ಸೇರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಸ್ಪೀಕರ್ ಮೇಲೆ ಅವಲಂಬಿತ
ವಿಧಾನಸಭೆ ಹೊರಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಉಳಿಸಿಕೊಳ್ಳಲು ಹಲವು ತಂತ್ರ ಮಾಡಬಹುದು. ಆದರೆ, ಸದನದವೊಳಗೆ ಏನಾಗಲಿದೆ ಎಂಬುದು ಕುತೂಹಲವಾಗಿದೆ. ಅಲ್ಲಿ ಯಾರ ಮೇಲೆ ಯಾರೂ ಉತ್ತಡ ಹಾಕಲು ಸಾಧ್ಯವಿಲ್ಲ. ಅಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸ್ಪೀಕರ್ಗೆ ಮಾತ್ರ ಇರುತ್ತದೆ. ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ನೇಮಕಗೊಂಡಿದ್ದಾರೆ.












Click it and Unblock the Notifications