ಕರ್ನಾಟಕ ಪ್ರವಾಹ : ನಷ್ಟದ ಲೆಕ್ಕ ಕೊಟ್ಟ ಸರ್ಕಾರ
ಬೆಂಗಳೂರು, ಆಗಸ್ಟ್ 25 : ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಆದ ನಷ್ಟದ ಕುರಿತು ಸರ್ಕಾರ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 22 ಜಿಲ್ಲೆಗಳ, 103 ತಾಲೂಕುಗಳಲ್ಲಿ ಪ್ರವಾಹದಿಂದಾಗಿ ಅಪಾರವಾದ ನಷ್ಟ ಉಂಟಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆಗಾಗಿ ಆಗಮಿಸಿದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿದರು. ಬಳಿಕ ನಷ್ಟದ ಕುರಿತು ಅಧಿಕೃತವಾದ ಅಂಕಿ-ಅಂಶ ಬಿಡುಗಡೆ ಮಾಡಿದೆ.
22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹದಿಂದಾಗಿ ನಷ್ಟ ಉಂಟಾಗಿದೆ. 7 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದ್ದು, 1465 ಪರಿಹಾರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಇವುಗಳಲ್ಲಿ 4.6 ಲಕ್ಷ ಜನರು ಆಶ್ರಯವನ್ನು ಪಡೆದಿದ್ದಾರೆ.

ಇದುವರೆಗೂ 309 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರವಾಹದಿಂದಾಗಿ 87 ಜನರು ಮೃತಪಟ್ಟಿದ್ದು, 2.3 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಇವುಗಳಲ್ಲಿ 1.79 ಲಕ್ಷ ಮನೆಗಳು ಸಂಪೂರ್ಣ ಅಥವ ತೀವ್ರವಾಗಿ ಹಾನಿಯಾಗಿವೆ.
ಪ್ರವಾಹದಿಂದಾಗಿ 7.82 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಭೂ ಕುಸಿತ/ ಮಣ್ಣು ಕುಸಿತದಿಂದಾಗಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ಸಂಪೂರ್ಣ ನಾಶವಾಗಿದೆ. 35 ಸಾವಿರ ಕಿ. ಮೀ. ರಸ್ತೆ ಮಳೆ, ಪ್ರವಾಹದಿಂದಾಗಿ ಹಾನಿಗೊಂಡಿದೆ.

2828 ಸೇತುವೆಗಳಿಗೆ ಹಾನಿಯಾಗಿದ್ದು, 57000 ವಿದ್ಯುತ್ ಕಂಬಗಳು ಹಾನಿಗೊಂಡಿವೆ. 14,076 ಟ್ರಾನ್ಸ್ ಫಾರ್ಮರ್, 3724 ವಿದ್ಯುತ್ ಲೈನ್ಗಳು ಹಾನಿಯಾಗಿದೆ. ಒಟ್ಟಾರೆ ಭೀಕರ ಪ್ರವಾಹದಿಂದಾಗಿ 30 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ.












Click it and Unblock the Notifications