Karnataka rain: ಹವಾಮಾನ ಬದಲಾವಣೆ, 3-4 ದಿನ ಉತ್ತರ ಒಳನಾಡಿಗೆ ವ್ಯಾಪಕ ಮಳೆ, ಕರಾವಳಿಗೆ ಆರೆಂಜ್ ಅಲರ್ಟ್
ಬೆಂಗಳೂರು, ಜುಲೈ 20: ಸಮುದ್ರ ಮೇಲ್ಮೈನಲ್ಲಿ ಉಂಟಾದ ಬದಲಾವಣೆಗಳ ಪರಿಣಾಮವಾಗಿ ಕರ್ನಾಟಕ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಇನ್ನೂ ಮೂರರಿಂದ ನಾಲ್ಕು ದಿನ ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ. ಆರಂಭದಲ್ಲಿ ಒಳನಾಡಿಗೆ ಮುನಿಸಿಕೊಂಡಿದ್ದ ಮಳೆರಾಯ ಕೆಲವು ದಿನಗಳಿಂದಲೂ ಅಬ್ಬರಿಸುತ್ತಿದ್ದಾನೆ.
ಸಮುದ್ರ ಮೇಲ್ಮೈನಲ್ಲಿ 4 ಕಿಲೋ ಮೀಟರ್ನಿದ 7.6 ಕಿಲೋ ಮೀಟರ್ವರೆಗೆ ಸುಳಿಗಾಳಿ/ಸ್ಟ್ರಫ್ ಸೃಷ್ಟಿಯಾಗಿದೆ. ಇದು ದಕ್ಷಿಣ ಮುಖವಾಗಿ ಚಲಿಸುತ್ತಿದೆ. ರಾಜ್ಯ ಕರಾವಳಿ ಪ್ರದೇಶಗಳಲ್ಲಿ ಪಶ್ಚಿಮ ದಿಕ್ಕಿನೆಡೆಗೆ ಬೀಸುವ ಗಾಳಿ ವೇಗವು ಹೆಚ್ಚಾಗಿದೆ. ಇದಲ್ಲದೆ ಮಳೆಗಾದಲ್ಲಿ ಸಾಮಾನ್ಯವಾಗಿ ಸಮುದ್ರ ಮಟ್ಟದಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಲೇ ಇರುತ್ತವೆ.

ಇದೆಲ್ಲ ಕಾರಣಗಳಿಂದ ಕರಾವಳಿ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆ, ಒಂದೆರಡು ದಿನ ಭಾರೀಯಿಂದ ಅತ್ಯಧಿಕ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಬಹುತೇಕ ಜಿಲ್ಲೆಗಳಲ್ಲಿ ದಿನನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೂ ಇಡಿ ದಿನ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಕೆಲವು ಪ್ರದೇಶಗಳಲ್ಲಂತೂ ಜಿಟಿ ಜಿಟಿ ಮಳೆ ಎಡೆಬಿಡದೆ ಸುರಿಯುತ್ತಿದೆ.
ಕರಾವಳಿಗೆ 4 ದಿನ ಅಧಿಕ ಮಳೆ
ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು ಒಂದು ತಿಂಗಳಿನಿಂದ ಮಳೆ ಆರ್ಭಟಿಸುತ್ತಲೇ ಇದೆ. ಈ ಹಿಂದೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ವಿವಿಧೆಡೆ ರಸ್ತೆಗಳು ಜಲಾವೃತಗೊಂಡಿದ್ದವು. ಪ್ರವಾಹ ಸ್ಥಿತಿ ಉಂಟಾಗಿತ್ತು. ಮತ್ತದೇ ವಾತಾವರಣ, ಭೀತಿ ಮರುಕಳಿಸಲಿದೆಯೇ ಎಂದು ಜನರು ಆತಂಕಕ್ಕೀಡಾಗಿದ್ದಾರೆ.

ಕರಾವಳಿಯಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಸುರಿಯಲಿದೆ. ಇಂದು ಮತ್ತು ನಾಳೆ ಉತ್ತರ ಕನ್ನಡ ಮತ್ತು ಉಡುಪಿಗೆ ಆರೆಂಜ್ ಅಲರ್ಟ್, ಉಳಿದ ದಿನಗಳಲ್ಲಿ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾರೀಯಿಂದ ಅತೀ ಭಾರಿ ಮಳೆ ಸುರಿಯವ ಸಾಧ್ಯತೆ ಇದೆ, ಜೋರು ಗಾಳಿ ಬೀಸುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದಂತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಒಳನಾಡಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ
ಉತ್ತರ ಒಳನಾಡಿನ ಬೆಳಗಾವಿಯಲ್ಲಿ ಇಂದು ಧಾರಾಕಾರ ಮಳೆ ಪ್ರಯುಕ್ತ ಆರೆಂಜ್ ಅಲರ್ಟ್ ಮತ್ತು ಜುಲೈ 24 ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೀದರ್ಗೆ ಎರಡು ದಿನ ಕಲಬುರಗಿ ಜಿಲ್ಲೆಗೆ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ದಿನಗಳಿಂದ ಉತ್ತರ ಒಳನಾಡಿನಾದ್ಯಂತ ಮಳೆ ಮತ್ತು ಚಳಿಯ ವಾತಾವರಣ ಸೃಷ್ಟಿಯಾಗಿದೆ. ಬಿಸಿಲಿನ ದರ್ಶನವೇ ಅಪರೂಪ ಎಂಬ ಸ್ಥಿತಿ ಉಂಟಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಗಾಗ ಚುದರಿದಂತೆ ಮಳೆ ಬೀಳಲಿದ್ದು, ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾಲ್ಕು ದಿನ ವ್ಯಾಪಕ ಮಳೆ ಬೀಳುವ ಸಂಬಂಧ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರಾವಳಿ ಜಿಲ್ಲೆಗಳು ಹಾಗೂ ಶಿವಮೊಗ್ಗ ಜಿಲ್ಲೆಯ ನಗರ, ತ್ರಿಣಿವೆ, ಹೊಸಹಳ್ಳಿ, ಬಿದರಗೋಡು, ತೀರ್ಥಮತ್ತೂರು, ಹೊನ್ನೆತಾಲು, ಉತ್ತರ ಕನ್ನಡ ಜಿಲ್ಲೆಯ ದೊಡ್ಮನೆ, ರಾಮನಗರ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧಡೆ ಬುಧವಾರ ಉತ್ತಮ ಮಳೆ ಆಗಿದೆ.












Click it and Unblock the Notifications